Tuesday, April 29, 2008

ವರ್ಷದ ಹೊಸ್ತಿಲಿನಲ್ಲಿ..

ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಈ ಬ್ಲಾಗು ಶುರು ಮಾಡಿ, ತೀರಾ ಸರಿಯಾಗಿ ವಾರ, ತಿಥಿ, ನಕ್ಷತ್ರ ನೆನಪಿಲ್ಲಾ. ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ; ಎಲ್ಲಾ ಕುರಿಗಳಂತೆ ನಂಗೂ ಬ್ಯಾ ಅನ್ನುವ ಚಪಲ. ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ, ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ, ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ. ನನ್ನ ಈ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ’ನೀನೊಬ್ಬ ಟೈಟಲ್ ಬರಹಗಾರ, ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ,ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ’ ಎಂದೆಲ್ಲಾ ಬೈದಾಡಿದ್ದ.ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ " ಬರೀಲೇ ಸೂ... ಮಗನೇ" ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ, ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ.

ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ, ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ.ಆಗ ಕೆಲವರಂತೂ ವಿಷ ಅಂದ್ರು, ಹಾಲಾಹಲ ಅಂದ್ರು. ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ, ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು. ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?. ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು, ಅದು ಬಿಟ್ಟು ಈ ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ..

ಈ ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ. ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ, ಅಂತಹುದರಲ್ಲಿ ಈ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ. ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ " ಉತ್ತಮ ಓದುಗ" ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ. ಇಲ್ಲಿವರೆಗೂ ನನ್ನ ಬರಹಗಳನ್ನು, ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ ಎಲ್ಲರಿಗೂ ನನ್ನ ನಮನಗಳು, ಈ ಬಂಧ ನಿರಂತರವಾಗಿರಲಿ..

11 comments:

Anonymous said...

"ಅನಾಹುತ ಬರಹಗಾರ" ಸೊಗಸಾಗಿದೆ ಪದ..ನಿಮ್ಮ ಓದು-ಬರಹ ಹೀಗೆ ಮುಂದುವರೆಯಲಿ ನೇರ ದಿಟ್ಟ ನಿರಂತರವಾದ ಶೈಲಿಯಲ್ಲಿ ಶುಭ ಹಾರೈಕೆಗಳು

Anonymous said...

nimge yenu helo avashkate illa ankotini...... nim baraha ode huchu hididu nangu odo hagi madidri ,tumba thanks.....nim barahagala neeriksheyal irtini....:)

Anonymous said...

nimge yenu helo avashkate illa ankotini...... nim baraha ode huchu hididu nannanu odo hagi madidri ,tumba thanks.....nim barahagala neeriksheyal irtini....:)

NilGiri said...

ನಿಮ್ಮ ಬರಹ ನಂಗಂತೂ ಇಷ್ಟ ಕಣ್ರೀ. ಹೀಗೆ ಮುಂದುವರಿಸಿ. ನಿಮ್ಮ ಬ್ಲಾಗು ಅಲ್ಲಿ, ಇಲ್ಲಿ ಕಿತ್ತಾಕಿದ್ರೇನಂತೆ, ನಾವು ನಿಮ್ಮ್ ಬ್ಲಾಗು ಹುಡುಕ್ಕೊಂಡು ಬಂದು ಓದುತ್ತೀವಿ.

ಅಂದ ಹಾಗೆ ಹ್ಯಾಪೀ ಬರ್ತಡೇ :)

Anonymous said...

ಸಂತೋಷ, ನಿಮ್ಮನ್ನ ಬ್ಲಾಗ್‍ರೋಲಿನಿಂದ ಕಿತ್ತು ಹಾಕಿದರು ಅಂತ ತ್ರಾಸು ಮಾಡಿಕೋತೀರಿ. ಖರೆ ನಿಮ್ಮನ್ನ ರಗಡ ಮಂದಿ ಹೊಸದಾಗಿ ಬ್ಲಾಗ್‍ರೋಲಿಗೆ ಸೇರಿಸಿಕೊಂಡದ್ದರ ಬಗ್ಗೆ ವಿಚಾರ ಮಾಡ್ರಿಲಾ. ಬ್ಲಾಗ್‍ರೋಲ್‍ನಿಂದ ಕಿತ್ತುಹಾಕಿದ್ದಾಕ್ಕೂ ಸಣ್ಣತನಕ್ಕೂ ಯಾವ ಸಂಬಂಧನೂ ಇಲ್ಲ. ಆ ರೀತಿ judge ಮಾಡೂದು ತಪ್ಪು.

ಮತ್ತ ಗಂಭೀರವಾಗಿ ಬ್ಲಾಗ್ ಮಾಡೂದರ ಚರ್ಚಾ ನಡದಾವ ಅಂದೀರಿ. ಗಂಭೀರವಾಗಿ ಬ್ಲಾಗ್ ಮಾಡೂದು ಅಂದರ ಗಂಭೀರ ವಿಷಯಗಳ ಬಗ್ಗೆ ಮಾತ್ರ ಬ್ಲಾಗ್ ಅಷ್ಟ ಏನು? ಹಂಗ ನೋಡಿದರ, ಉತ್ತಮ ಮಟ್ಟದ ಹಾಸ್ಯಕ್ಕೆ ಬೇಕಾಗುವಷ್ಟು ಶ್ರಮ, ಆಳ, ಗಾಂಭೀರ್ಯ ಅಗದೀ ಹೆಚ್ಚು.
ಒಟ್ಟ ಹೇಳೂದಂದರ ಆ ಚರ್ಚೆಗಳಿಗೂ ಬ್ಲಾಗುಗಳ ಶೈಲಿ, ವಿಷಯವಸ್ತು ಇತ್ಯಾದಿಗಳಿಗೂ ಯಾವ ಸಂಬಂಧನೂ ಇಲ್ಲ. ಹಿಂಗಾಗಿ ಯಾರಿಗೂ ಕೇಡುಗಾಲ ಇಲ್ಲ.

ಮತ್ತ, ಹ್ಯಾಪೀ ಬರ್ಥ ಡೇ!

ರಾಜೇಶ್ ನಾಯ್ಕ said...

’ಅಮೃತ ಸಿಂಚನ’ದ ಹುಟ್ಟುಹಬ್ಬಕ್ಕೆ ಶುಭಾಶಯಗಳು. ನಿಮ್ಮ ಬರಹಗಳನ್ನು ಓದಲು ಹಾತೊರೆಯುವವರಿರುವಾಗ ನೀವಿಲ್ಲಿ ವಿಷಾದದ ಮಾತುಗಳನ್ನೇಕೆ ಆಡಿದ್ದೀರಿ ಎಂಬುದು ತಿಳಿಯಲಿಲ್ಲ. ಇನ್ನಷ್ಟು ಉತ್ತಮ ಬರಹಗಳು ಬರುತ್ತಿರಲಿ.

Anonymous said...

ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು...

ಅವರಿವರ ಮ್ಯಾಲೆ ಸಿಟ್ಟ್ಯಾಕ್ರಿ ಗೌಡ್ರ ತಗಿರಿ...

ಊರಾಗ ಇಲೇಕ್ಷನ್ ನೆಡದಾವು ನಿಮ್ಮದೆ ನಾಯಕತ್ವದಾಗ ಅಂದ್ರ ನಿವೇನ ಜೆ.ಡಿ.ಎಸ್.ದವರಂಗ ಅವರ ಬಿಟ್ರು ಇವ್ರು ಬಿಟ್ರು ಅಂತಿರಿ...

ಊರಾಗಿನ ಇಲೇಕ್ಷನ್ ಸುದ್ದಿ ಗುದ್ದಿ ಗುದ್ದಿ ಬರಿರಿ, ಹೋರಗಿನಿಂದ ಬೆಂಬಲ ಸದಾ ನಮ್ಮದೈತಿ (ಊರ ಬಿಟ್ಟಿವ್ಯಾಲ ಅದಕ) ಎನಂತಿರಿ?

ತಮ್ಮ ಶುಭಾಕಾಂಕ್ಷಿ

ಶೆಟ್ಟರು, ಮಾಜಿ ಮತದಾರಪ್ರಭು, ಕರ್ನಾಟಕ ಸರಕಾರ. ಹಾಲಿ ಎಡಬಿಡಂಗಿ ಪ್ರಜೆ, ಮಹಾರಾಷ್ಟ್ರ ಸರಕಾರ.

MD said...

ನಮಸ್ಕಾರ್ರಿ ಪಾಟೀಲ್ರ,
ಅಂತೂ ಒಂದು ವರ್ಷಾ ಮುಗಿಸಿದ್ರಲ್ಲಾ..
ಕಂಗ್ರಾಚುಲೇಷನ್.

ನಾವಂತೂ ಹುಡುಕ್ಯೊಂಡು ಬಂದು ಓದ್ತೀವ್ರಿ ನಿಮ್ಮ ಬ್ಲಾಗನ್ನು.
ಇನ್ನೂ ಹಿಂಗ ಬರೀರಿ, ಬರ್ಕೊಂತ ಇರ್ರಿ, ನಗಸ್ಕೊಂತ ಇರ್ರಿ
ಜಗಳ್ಯಾಡಕೊಂತನ ನಾವು ಬೆಳಿಬೇಕು.

ಸಂತೋಷಕುಮಾರ said...

ಎಲ್ಲರಿಗೂ ತಡವಾಗಿ ಪ್ರತಿಕ್ರಿಯಿಸುತ್ತಿರುವದಕ್ಕೆ ಕ್ಷಮೆ ಇರಲಿ,

ನಿರಚಿತ
ಮುನಿಸು ಮರೆತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಅನಾಮಿಕ
ಯಾರೀ ಆಗುಂತುಕ ಅಭಿಮಾನಿ(?)
ನಾನು ಎಲ್ಲೋ ಹೋಗಿಬಿಟ್ಟೆ ಬಿಡಿ.. ಟ್ಯಾಂಕ್ಯು ರೀ :)

ನೀಲಗಿರಿ ಮತ್ತು ಎಂ,ಡಿ
ನಿಮ್ಮ ಹಾರೈಕೆಗಳು ಸದಾ ನನ್ನೊಡನೆ ಇರಲಿ.. ತುಂಬಾ ತುಂಬಾ ಥ್ಯಾಂಕ್ಸ..

ರಾಜೇಶ್
ವಿಷಾದವಲ್ಲ! ವೈರಾಗ್ಯ :)
ನನ್ನ ಬರಹಗಳನ್ನು ಓದಲು ಕಾದಿರುತ್ತ್ತೀರಿ ಅಂದ್ರೆ ನಂಗೆ ರೆಕ್ಕೆ ಪುಕ್ಕ ಬರೋದೊಂದು ಬಾಕಿ. ಪ್ರತಿಕ್ರಿಯೆಗೆ ಮತ್ತು ನಿಮ್ಮ ಹಾರೈಕೆಗೆ ತುಂಬಾ ಥ್ಯಾಂಕ್ಸ.

ಚಕೋರ,
"ಬ್ಲಾಗ್‍ರೋಲ್‍ನಿಂದ ಕಿತ್ತುಹಾಕಿದ್ದಾಕ್ಕೂ ಸಣ್ಣತನಕ್ಕೂ ಯಾವ ಸಂಬಂಧನೂ ಇಲ್ಲ. ಆ ರೀತಿ judge ಮಾಡೂದು ತಪ್ಪ"
ಇರಬಹುದು ಆದರೂ ಅದು ದೊಡ್ಡತನ ಮಾತ್ರ ಅಲ್ಲಾ..
ನಿಮ್ಮ ಮಾತು ಒಪ್ತೀನಿ, ಆದ್ರೆ ಗಂಭೀರ ವಿಷಯಗಳನ್ನು ಎತ್ತಿಕೊಂಡು, ಚರ್ಚೆಗೆ ಎಳೆಯುವ ಶೈಲಿ ನನಗೆ ಒಲಿಯಲೆ ಇಲ್ಲ. ಬಹುಶಃ ಅದು ನನ್ನ ಬರಹದ ಮಿತಿಯೂ ಇರಬಹುದು.

ನೀವು ಮತ್ತು ಎಂ ಡಿ ನಿಮ್ಮ ನಿಜ ನಾಮಧೇಯಗಳನ್ನು ಅರುಹಿದರೆ ಮಹದುಪಕಾರವಾಗುತ್ತೆ..


ಶೆಟ್ಟರೆ,

"ನಿವೇನ ಜೆ.ಡಿ.ಎಸ್.ದವರಂಗ ಅವರ ಬಿಟ್ರು ಇವ್ರು ಬಿಟ್ರು ಅಂತಿರಿ... "
ಭ್ಯಾಡ್ರಿ ಮಾರಯ್ರೆ ಜೆ ಡಿ ಎಸ್ ಗೆ ಮಾತ್ರ ಹೋಲಿಕೆ ಮಾಡಬ್ಯಾಡ್ರಿ, ನಿಮಗ ಎಣ್ಣಾ ಅಂತೀನಿ ಆ ಹೋಲಿಕೆ ಮಾತ್ರ ಬ್ಯಾಡ. ಚುನಾವಣೆ ನೀವು ಅನ್ಕೋಂಡಷ್ಟು ಆವಾಜ್ ಇಲ್ಲ ಬಿಡ್ರಿ. ಎಲ್ಲಾ ಒಣಾ ಒಣಾ ಠಣಾ ಠಣಾ..

ವಿ.ರಾ.ಹೆ. said...

ಅಭಿನಂದನೆಗಳು ಸಂತೋಷ್,
ನೀವು ’ಚಿರವಿರಹಿ’ ಅನ್ನೋ ಹೆಸ್ರು ಬಿಟ್ಟಿದ್ದೇತಕ್ಕೆ ಅಂತ ?

Anonymous said...

vand varsha kalitu anta sumnagbedi santoshavare........ hosa baraha galige kayataidini....:)yaro helidru anta baribedi..... nimge baribeku ansidanna bariri.kaytairtini......;)