Tuesday, July 31, 2007

" ಜಿಂದಗಿ ಕಟಿಂಗ್ ಸಲೂನ್ "

ನಮ್ಮೂರಿನಲ್ಲೇ ಜಗತ್ಪ್ರಸಿದ್ದವಾದ ಕಷ್ಟದಂಗಡಿಯ ನಿಂಗನಿಗೆ, ಯಾವ ದೇವತೆ ಕನಸಿನಲ್ಲಿ ಬಂದು ಅವನ ಅಂಗಡಿಗೆ " ಜಿಂದಗಿ ಕಟಿಂಗ್ ಸಲೂನ್" ಎಂಬ ಹೆಸರು ಸೂಚಿಸಿದ್ದಳೋ ಅರಿಯೆ,ರಾತ್ರೋ ರಾತ್ರಿ ಊರಿನ ಎಕೈಕ ಪಾರ್ಟ ಟೈಂ ಪೆಂಟರ ಆದ ಕೊಟ್ರನನ್ನು ಕರೆಸಿ, ಅವನ ಎಂದಿನ ಕಾಗಕ್ಕ ಗುಬ್ಬಕ್ಕ ಶೈಲಿಯಲ್ಲಿ "ಜಿಂದಗಿ ಕಟಿಂಗ್ ಸಲೂನ್" ಎಂದು ಬರೆಸಿ ಧನ್ಯನಾದ.

ನಿಂಗನಿಗೆ ಈ ಕಸುಬು ಅವನ ಹಿರಿಯರು ಬಿಟ್ಟು ಹೋದ ಎಕೈಕ ಬಳುವಳಿ.ನಮ್ಮೂರಿನ ಸಮಸ್ತ ತಲೆಗಳ ಉಸ್ತುವಾರಿಯೂ ಇವನದೇ ಆಗಿತ್ತು.ಅಷ್ಟಕ್ಕು ಇವನ ಕಷ್ಟದಂಗಡಿ ಎಂದರೆ ಊರಿನ ಮಧ್ಯದ ಪಂಚಾಯತಿ ಕಟ್ಟಡಕ್ಕೆ ಅಂಟಿದ, ಹಳೆ ಕಟ್ಟಿಗೆ ಹಲಗೆಗಳ ಗೂಡಂಗಡಿ.ಅದರ ಒಳಭಾಗವನ್ನೆಲಾ ಶುಕ್ರವಾರದ ಚಿತ್ರಮಂಜರಿಯ ಪೇಪರುಗಳನ್ನು ಅಂಟಿಸಿ, ಆ ಗೂಡಂಗಡಿಗೂ ಗ್ಲಾಮರ್ ನೀಡಿದ್ದ. ಆ ಚಿತ್ರಮಂಜರಿಯ ಪುಟ ಆರಿಸುವಾಗಲೂ ವೀಶೆಷ ಕಾಳಜಿ ವಹಿಸಿ, ಆಗಿನ ಕಾಲದ ಯುವಕರ ಅರಾದ್ಯ ದೈವವಾಗಿದ್ದ ಡಿಸ್ಕೊ ಶಾಂತಿ ಮತ್ತು ಸಿಲ್ಕ ಸ್ಮಿತಾರ ಪೋಸುಗಳು ಇರುವಂತೆ ನೋಡಿಕೊಂಡು ತನ್ನ " Marketing strategy " ತೋರಿದ್ದ.ಗೋಡೆಗೆ ತಗುಲಿದಂತೆ ಇರುವ ಒಂದು ಶೆಲ್ಫು, ಅದರ ಮೇಲೆ ತರಹೇವಾರಿ ಕತ್ತರಿಗಳು,ಹೊಲಸು ತುಂಬಿದ ಬಾಚಣಿಕೆಗಳು ಮತ್ತು ಹೆಸರೇ ಕೇಳಿರದ ಲೋಕಲ ಬ್ರಾಂಡಿನ ಬ್ಲೇಡು,ಶೇವಿಂಗ್ ಕ್ರೀಮು, ಸ್ನೋ,ಪೌಡರಗಳು ಮತ್ತು ಇಡೀ ಅಂಗಡಿಗೆ ಕಳಶಪ್ರಾಯವಾದ ಎರಡು ಅಭಿಮುಖವಾದ ಕನ್ನಡಿಗಳು, ಅದರ ಮೇಲೆ ವಿವಿಧ ಹೇರ ಸ್ಟೈಲಿನ ಫೋಟೊ ಮತ್ತದರ ಪಕ್ಕದಲ್ಲಿ ನಮ್ಮೂರ ಪಡ್ಡೆಗಳ ೨೪/೭ ಆರಾದ್ಯ ದೈವವಾದ ರವಿಚಂದ್ರನ್, ಖೂಷ್ಬುಳನ್ನು ತಬ್ಬಿ ನಿಂತ ದೊಡ್ಡ ಪೊಸ್ಟರು.ಇವೆಲ್ಲದರ ಜೊತೆಗೆ ಅಂಗಡಿಯ ತುಂಬೆಲ್ಲಾ ಬಿದ್ದಿರುವ ಕರಿ ಬಿಳಿ ಬಣ್ಣದ ವಿವಿಧ ಸೈಜಿನ ಕೂದಲುಗಳು..

ಈ ನಿಂಗ,ಹೊಸ ಹೆಸರಿನೊಂದಿಗೆ ತಿರುಗುವ ಖುರ್ಚಿಯನ್ನು ಇಡಿ ಅಬ್ಬಿಗೇರಿಗೆ ಪ್ರಥಮವಾಗಿ ಪರಿಚಯಿಸಿ, ಊರಿನ ಮೊದಲಿಗರ ಪಟ್ಟಿಯಲ್ಲಿ ತಾನು ಸೇರಿಕೊಂಡ.ಅಂಗಡಿಗೆ ಬರುವ ಪಡ್ಡೆಗಳಿಗೆ ಮಿಲ್ಟ್ರಿ ಕಟ್ಟಿಂಗು, ಪಂಕು,ಸ್ಲೋಪು,ಸೈಡ್ ಲಾಕು ಅಂತೆಲ್ಲಾ ಅವರ ತಲೆಗಳನ್ನೆಲ್ಲಾ ತನ್ನ ಪ್ರಯೋಗಳಿಗೆ ಒಡ್ಡುತ್ತಿದ್ದ.ತನ್ನಂಗಡಿಗೆ ಹೊಸ ಟೇಪ ರೇಕಾರ್ಡರ್ ತಂದಾಗಲಂತೂ, ಇಡಿ ದಿನ ರವಿಚಂದ್ರನನ " ಕಮಾನು ಡಾರ್ಲಿಂಗ್" ಅಂತ ಹಾಡು ಹಾಕಿ, ದಾರಿಯಲ್ಲಿ ಓಡಾಡುವ ಹೆಂಗಸರಿಗೆ ಮುಜುಗರ ತಂದಿಕ್ಕುತ್ತಿದ್ದ.

ಈ ನಿಂಗ ಮಾತ್ರ ಹೀಗಿದ್ದನೋ ಅಥವಾ ಎಲ್ಲಾ ಊರ ಕ್ಷೌರಿಕರು ಹೀಗೋ ಗೊತ್ತಿಲಾ! ತಲೆಕೂದಲು ಕೆತ್ತುವದರೊಂದಿಗೆ, ಎಲ್ಲ ಮನೆಗಳ
ಗಾಸಿಪ್ಪುಗಳನ್ನು ಉಪ್ಪು ಖಾರ ಹಚ್ಚಿ ಮಸಾಲೆ ಅರೆದು ಹೇಳುತ್ತಿದ್ದ, ಮಲ್ಯನ ಬಗ್ಗೆ ರಂಜನಿಯ ಕಥೆಗಳನ್ನು ಹೇಳುತ್ತಿದ್ದ,"ಬೆಂಗ್ಳೂರಲ್ಲಿ ರಾಜ್ ಕುಮಾರನ್ನ ಬೈದರೆ ಅಲ್ಲೇ ಒದೆ ಬಿಳುತ್ತವೆ" ಅನ್ನುವ ಅತಿರಂಜಿತ ಸುದ್ದಿಗಳನ್ನು ಹೇಳುತ್ತಿದ್ದ ಮತ್ತು ರಾಜ್ಕುಮಾರನ್ನ "ಅಣ್ಣಾವ್ರು" ಅಂತಲೇ ಕರೀಬೇಕು ಅಂತ ಬೆಂಗಳೂರು ಶಿಷ್ಟಾಚಾರ ಕಲಿಸುತ್ತಿದ್ದ, ಸಿನಿಮಾ ನಟಿಯರ ಬಗ್ಗೆ ರೋಚಕ ಕಥೆಗಳನ್ನು ಹೇಳಿ ನಮ್ಮಂತಹ ಪಡ್ಡೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಮತ್ತು ಕೆಲ " ಆ ಥರಾ" ನಟಿಯರ ರೇಟುಗಳನ್ನು ಹೇಳಿ ನಮಗೇನೋ ಒಂತರ ಕೂತುಹಲವನ್ನೂ ಮೂಡಿಸಿದ್ದ.ಅವನ ಅಂಗಡಿ ಎಂದರೆ ಮುಕ್ತವಾಗಿ ಶುಕ್ರವಾರದ ಪೇಪರ್ ಓದುವ ಮತ್ತು ಹೀರೋಯಿನ್ನುಗಳನ್ನು ಮುಕ್ತವಾಗಿ ನೋಡುವ ಅಡ್ಡಾ ಆಗಿತ್ತು, ಹಳೆ ರೂಪತಾರಾ ತಂದಿಟ್ಟು ನಮ್ಮ ಕೂತುಹಲವನ್ನು ಇನ್ನು ಹೆಚ್ಚಿಸುತ್ತಿದ್ದ.ಕಾಲೇಜಿಗೆ ಹೋಗುವಾಗ ಯಾವುದಕ್ಕೂ ಇರ್ಲಿ ಅಂತ ಕ್ರಾಪು ತಿದ್ದಿಕೊಳ್ಳುವವರಿಗೆ ಅವನ ಅಂಗಡಿ ಆಧಾರವಾಗಿತ್ತು.ಹುಡುಗರ ಗುಪ್ತ ಸಮಸ್ಯೆಗಳಿಗೆ ಎಲ್ಲಾ ಬಲ್ಲವನಂತೆ ತನಗೆ ತಿಳಿದದ್ದನ್ನು ಹೇಳಿ ಅವರನ್ನೂ ಇನ್ನೂ ಗೊಂದಲಕ್ಕೆ ಕೆಡವುತ್ತಿದ್ದ.

ಮಧ್ಯವಯಸ್ಸು ದಾಟಿದ್ದರೂ ಒಂದು ಬಿಳಿ ಕೂದಲು ಕಾಣಿಸದ ದೊಡ್ಡ ಗೌಡರ ಕರಿಕೂದಲಿನ ರಹಸ್ಯ ಇವನಿಗೆ ಮಾತ್ರ ಗೊತ್ತಿತ್ತು. ಯಾರೇ ಬಂದು " ಗದ್ಲ ಐತೇನೋ ನಿಂಗಪ್ಪಾ? " ಅಂತ ಕೇಳಿದ್ರೆ " ನೆಕ್ಸ್ಟ ನಿಮ್ದ ಪಾಳೆ" ಅಂತೆಲ್ಲಾ ಒಳು ಬಿಟ್ಟು ಅನೇಕ " ನೆಕ್ಸ್ಟು" ಮಾಡಿ ಅವರನ್ನು ಕಾಯಿಸಿ ಕಾಯಿಸಿ ಸತಾಯಿಸುತ್ತಿದ್ದ.ಬಾಯಿ ಸುಮ್ನಿರದ ನಿಂಗ " ಈ ಭಾರಿ ಕಾಂಗ್ರೆಸ್ಸೇ ಬರೋದು " ಅಂತ ಭವಿಷ್ಯ ನುಡಿದು ನಮ್ಮೂರ ಭಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಒಟ್ನಲ್ಲಿ ನಿಂಗ ನಮ್ಮುರ ಜೀವನದ ಅವಿಭಾಜ್ಯ ಅಂಗವಾಗಿದ್ದ..

ಮೊನ್ನೆ "..... ಮೆನ್ಸ್ ಹೇರ ಸ್ಟೈಲ್" ಹೆಸರಿನ ಕಷ್ಟದಂಗಡಿಗೆ ಹೋಗಿದ್ದೆ " ಸಾರ್ , ಆಯಿಲ್ ಹಾಕ್ಲಾ " ಎಂದು ಕೇಳಿದಾಗ ಆಯಿಲ್ಲಿನ ಮರ್ಮ ತಿಳಿಯದೆ ಹೂಂ ಅಂದೆ. ಸ್ವಲ್ಪ ಎಣ್ಣೆ ಹಚ್ಚಿ ತಲೆ ಉಜ್ಜಿದವನೆ," ಎಷ್ಟು ಗುರು" ಅಂದ್ದಿದ್ದಕ್ಕೆ " ನೈಂಟಿ ರುಪೀಸ್ ಸರ್" ಎಂದು ತಲೆಯ ಜೊತೆಗೆ ಜೇಬನ್ನು ಬೋಳಿಸಿ ಕಳಿಸಿದಾಗ ನಿಂಗ ನೆನಪಾದ." ಉದ್ರಿ ಮಾನಭಂಗ" ಎಂದು ಬರೆದಿದ್ದರೂ ಚೆನ್ನಾಗಿ ಕೆರೆಸಿಕೊಂಡು "ಹತ್ತಿ ಬಂದಾಗ ಇಸಗೊಂಡು ಹೋಗು" ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದದು ಮತ್ತು ಅವನು ಉಚಿತವಾಗಿ ಮಸಾಜ್ ಮಾಡುತ್ತಿದ್ದುದು, ಚಿಕ್ಕವನಾಗಿದ್ದಗ " ಕಷ್ಟಕ ಒಲ್ಲೆ " ಅಂತಾ ಅಳುತ್ತಿದ್ದವನನ್ನು ಕಥೆ ಹೇಳಿ ಕ್ಷೌರ ಮಾಡುತ್ತಿದ್ದದು, ಎಲ್ಲಾ ಕಣ್ಮುಂದೆ ಹಾದು ಹೋಯಿತು..

Sunday, July 15, 2007

ಅಬ್ಬಿಗೇರಿಯ ಬಸ್ ಸ್ಟಾಂಡು

ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು.ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು, ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು.ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು.ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ! ಅದು ನರೇಗಲ್ಲಿಗೆ "ಕಾಲ್ಮೆಂಟ್ ಸಾಲಿ" ಕಲಿಯಲು ಹೋಗುವವರು, ಗದಗಿಗೆ ಕದ್ದು ಚೈನಿ ಹೊಡೆಯಲು ಹೋಗುವವರು, ಅಷ್ಟೆ ಯಾಕೆ ರೋಣಕ್ಕೆ ಹೋಗಿ " ಒಂದು ಕ್ವಾರ್ಟರ" ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು.ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ "ದಿಲ್ ರೂಬಾ ಪಾನ್ ಶಾಪ್" ನಿಂದ ಹಿಡಿದು, ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ, ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ " ಬಸವೇಶ್ವರ ಮಿಲಿಟ್ರಿ ಖಾನಾವಳಿ"ಗೂ ವ್ಯಾಪಾರಸ್ಥಾನವಾಯಿತು.

ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ :-)ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು.ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ, ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ... ಮಕ್ಕಳು " ಗಂಡಸರಿಗೆ" ಮತ್ತು " ಹೆಂಗಸರಿಗೆ" ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು.ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ " ಸುಮಾ ಐ ಲವ್ ಯೂ" " ಭಾಗ್ಯ ಪ್ರೀತ್ಸೆ" "ಬಸು ಜೊತೆ ವಾಣಿ" ಎಂದು ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು, ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು. ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ, ಪ್ರೇಮಲೋಕ,ರಸಿಕ, ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು.ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು. ಅವರು ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ "ಮಾಂತೇಶ" ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು.

ಪ್ರತಿ ಹೊಸವರ್ಷಕ್ಕೂ "Wish you happy new year 200... " ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ "ವೀವೆಕಾನಂದ ಯುವಕ ಸಂಘ" "ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್" " ಫೈವ ಸ್ಟಾರ ಕ್ರಿಕೆಟ್ ಕ್ಲಬ್" ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ. ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು, ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು,ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು, ಇವರ ಮನೆಯ ಹುಡುಗ ಫೇಲಾದ, ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ! ಅಂತೆಲ್ಲಾ ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು..

ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು.ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು, ನಾಯಕಿಯ ಕಣ್ಣಿಗೆ,ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ, ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು.ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು, ಅಪರೂಪಕ್ಕೆ ಪ್ರದರ್ಶನವಾಗುವ "ದೇವರ" ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ "ಡಿಸೆಂಟ್" ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು..

ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು.ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು.ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು, ಆ ಚಿಂಟುಗಳಿಗೆ ಚಾಕಲೇಟು, ಐಸ್ ಕ್ಯಾಂಡಿ ಕೊಡಿಸಿ " ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ, ಆ ಅಕ್ಕನ ಕೈಗೆ ಇದನ್ನು ಕೊಡು, ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು. ನೀ ಜಾಣಮರಿ ಅಲ್ವಾ? " ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು. ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ, ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು.

ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ "ಹೀರೊ" ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು. ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು " ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ" ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು.ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ "ಲವ್ವರು"ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು.


ಊರಿಗೆ ಹೊಸದಾಗಿ ಬರುವವರು, ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು,ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು, ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ, ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ "ದಿಲ್ ರೂಬಾ ಪಾನ್ ಶಾಪ್" ನ ಬಸುನ ಬಳಿ ಸದಾ ಲಬ್ಯ.ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ."ಕುಚ್ ಕುಚ್ ಹೋತಾ ಹೈ" ಚಿತ್ರದಲ್ಲಿನ "ಫ್ರೆಂಡ್ ಶಿಪ್" ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು. ಕದ್ದು ಸ್ಮಾಲ್,ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು.

ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು.ವಿಶೇಷವಾಗಿ ಈ "ಸ್ವಯಂಸೇವಕರು" ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು. ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು.ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು.ಆದರೆ ನಾವು ಮಾತ್ರ ಈ ವಿಷಯದಲ್ಲಿ " ವಿಶ್ವ ಮಾನವ " ತತ್ವಕ್ಕೆ ಬದ್ದರಾಗಿದ್ದೆವು..


ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ(?) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಈಗಲೂ ಅಬ್ಬಿಗೇರಿಗೆ ಹೋದರೆ " ದಿಲ್ ರೂಬಾ ಪಾನ್ ಶಾಪ್" ಗೆ ಭೇಟಿಯಾಗಿ, ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು "ನಾಲ್ಕು ಕಾಳು" ಹಾಕಿಯೇ ಬರುತ್ತೇವೆ, ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ.