Showing posts with label ನನ್ನ ಜನ. Show all posts
Showing posts with label ನನ್ನ ಜನ. Show all posts

Sunday, December 2, 2007

ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ..




ನೀವೊಮ್ಮೆ ನವೆಂಬರ್,ಡಿಸೆಂಬರ್ ಗಳಲ್ಲಿ ಅಬ್ಬಿಗೇರಿಗೆ ಬಂದು ನೋಡಬೇಕು, ಎಲ್ಲೆಲ್ಲಿ ಬಯಲು ಜಾಗವಿರೊತ್ತೋ ಮತ್ತು ಎಲ್ಲೆಲ್ಲಿ ಸಾದ್ಯವೋ, ಅಲ್ಲೇಲ್ಲಾ ಉಳ್ಳಾಗಡ್ಡಿ ರಾಶಿ ಸುರುವಿರುತ್ತಾರೆ.ಗೌಡರ ಹತ್ತಿ ಜೀನಿನ ಖಾಲಿ ಜಾಗ, ಊರ ಮುಂದಿನ ಜಿಡ್ಡಿಯ ಬಳಿ, ಅದೂ ಹೋಗ್ಲಿ ದ್ಯಾಮವ್ವನ ಗುಡಿಯ ಮೂಂದಿನ ಕಿರುಜಾಗದಲ್ಲೂ ಬರೀ ಉಳ್ಳಾಗಡ್ಡಿಯ ಆರ್ಭಟವೇ ಅರ್ಭಟ.ಅದೋಂಥರ ವಿಚಿತ್ರ ಲೋಕವೇ ಉಳ್ಳಾಗಡ್ಡಿ ಸೀಜನ್ನಿನಲ್ಲಿ ನಮ್ಮೂರಿನಲ್ಲಿ ತೆರೆದುಕೊಂಡಿರುತ್ತದೆ.ಇಂತಿಪ್ಪ ಉಳ್ಳಾಗಡ್ಡಿಯ ರಾಶಿಯ ಸುತ್ತಲೂ ಗಡ್ದೆಯನ್ನು ಅದರ ತಪ್ಪಲಿನಿಂದ ಪ್ರತ್ಯೇಕಿಸಲು ಈಳಿಗೆಮಣೆ ಕೈಲಿ ಹಿಡಿದು ಕೂತ ಕೆಲಸದ ಹೆಂಗಸರು ಸೆನ್ಸಾರಿನ ಭಯವಿಲ್ಲದೆ ಧಾರಾಳವಾಗಿ ಸಂಸ್ಕ್ರತ ಪದಗಳನ್ನು ಬಳಸಿ ಹರಟತೊಡಗಿರುತ್ತಾರೆ.ಆದಷ್ಟು ಬೇಗ ಲೋಡ್ ಮಾಡಿ ಮಾರ್ಕೆಟ್ಟಿಗೆ ಕಳಿಸುವ ತರಾತುರಿಯಲ್ಲಿರುವ ಉಳ್ಳಾಗಡ್ಡಿ ಮಾಲೀಕರು ರಾತ್ರಿಯಾದರೂ ಎಲ್ಲಿಂದಲೋ ವೈರೆಳೆದು ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಿ ಈ ಹೆಂಗಸರ ಕಾರ್ಯ ಮತ್ತು ಹರಟೆಗೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ನಿದ್ದೆ ಓಡಿಸಲು ಬೇಡಿಕೆ ಅನುಸಾರ ಎಲಿ,ಅಡಿಕೆ ,ತಂಬಾಕು ಅಥವಾ ಚಹಾದ ಪೂರೈಕೆಯೂ ಇರುತ್ತದೆ. ಇವರೊಂದಿಗೆ ಉಳ್ಳಾಗಡ್ಡಿಗಳನ್ನು ಗಾತ್ರಾನುಸಾರ ಪ್ರತ್ಯೇಕಿಸಿ ಚೀಲಕ್ಕೆ ತುಂಬಲು ಚಿಣ್ಣರ ಪಡೆ ಸನ್ನದ್ಧವಾಗಿರುತ್ತದೆ ಮತ್ತು ಬಿಸಾಕಿದ ಉಳ್ಳಾಗಡ್ಡಿ ಸಿಪ್ಪೆಗಳಿಗಾಗೆ ಮತ್ತು ಅದರ ತಪ್ಪಲಿಗಾಗಿ ದನಗಳು ಅಲ್ಲೇ ಸುಳಿದಾಡುತ್ತಿರುತ್ತವೆ. ಅದರಿಂದಾಗಿ ಆ ಸೀಜನ್ನಿನಲ್ಲಿ ಎಲ್ಲರ ಮನೆಯ ಹಾಲು ಮತ್ತು ಅದರಿಂದ ಮಾಡಿದ ಚಹಾವು "ಉಳ್ಳಾಗಡ್ಡಿ ಫ್ಲೇವರ್" ಸೂಸುತ್ತಿರುತ್ತವೆ. ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ತಿಳಿಯದಂತೆ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ, ಹೀಗಾಗಿ ಕೆಲ " ಪತಿ, ಪತ್ನಿ ಔರ್ ವೋ" ಕಥೆಗಳಿಗೂ ಉಳ್ಳಾಗಡ್ಡಿ ಸೀಜನ್ನು ತಿಳಿಯದೆ ಕಾರಣವಾಗಿಬಿಟ್ಟಿರುತ್ತೆ.

ನಮ್ಮೂರಿನ ಜನರ ಬಾಯಲ್ಲಂತೂ ಬರೀ " ಗೌಡ್ರ, ನಿಮ್ಮವು ಎಷ್ಟು ಪಿ,ಸಿ ಆದ್ವು?" "ನಿಂಗಪ್ಪ ಈ ವರ್ಷ ಚಾನ್ಸು ಹೊಡೆದ ನೊಡಪಾ" "ಇವತ್ತು ಎಷ್ಟು ಲಾರಿ ಲೋಡಾಗಿವೆ?" " ರೇಟು ಇನ್ನೂ ಏರುತ್ತೆ ನೊಡ್ತಾ ಇರೀ" " ಥೂ ಈ ಆಳು ಸುಳೆಮಕ್ಳುದು ಹಡಿಬಿಟ್ಟಿ ವ್ಯವಹಾರ ಜಾಸ್ತಿ ಆಯ್ತು" ಇತ್ಯಾದಿ ಮಾತುಗಳು ಸರ್ವೇಸಾಮಾನ್ಯವಾಗಿರುತ್ತೆ.

ಆದ್ರೇ ಒಂದಂತೂ ನಿಜ, ಈ ಸೂಳೆಮಗನ ಉಳ್ಳಾಗಡ್ಡಿ ರೇಟು ಮಟಕಾ ನಂಬರಿದ್ದ ಹಾಗೇ, ಒಂದು ದಿನ ಇದ್ದುದು ಇನ್ನೊಂದು ದಿನ ಇರುವುದೇ ಇಲ್ಲಾ. ಭಲೇ ರಿಸ್ಕಿನ ಜೂಜನ್ನು ನಮ್ಮೂರಿನ ರೈತರು ಪ್ರತಿ ವರುಶವೂ ಆಡುತ್ತಲೇ ಇರುತ್ತಾರೆ.ಏನೇ ಆದರೂ ನಮ್ಮೂರಿನ ರೈತರಿಗೆ ಉಳ್ಳಾಗಡ್ಡಿ ಮೇಲಿನ ನಂಬಿಕೆ, ನಿಷ್ಠೆ, ಪ್ರೀತಿ ಕಡಿಮೆಯಾಗಿಲ್ಲಾ ಅನ್ನುವುದೇ ಸೋಜಿಗ.ನಿಮಗೆ ನೆನಪಿರಬೇಕು ಹಿಂದೊಮ್ಮೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿ ಸರಕಾರವೇ ಉರುಳುವ ಮಟ್ಟಕ್ಕೆ ಬಂದಾಗ,ನಮ್ಮೂರಿನ ಜನತೆ ತಾವು ಬೆಳೆಯುವ ಉಳ್ಳಾಗಡ್ಡಿಗಿರುವ ಪವರ್ ಕಂಡು ಹಿರಿಹಿರಿ ಹಿಗ್ಗಿದ್ದರು. ಉಳ್ಳಾಗಡ್ಡಿಗೆ ಸರಕಾರ ಉರುಳಿಸುವ ಶಕ್ತಿ ಇದೆ ಎಂಬ ಭಾವವೇ ನಮ್ಮೂರಿನ ರೈತ ಸಮುದಾಯಕ್ಕೆ ಇನ್ನಷ್ಟು ಉಳ್ಳಾಗಡ್ಡಿ ಬೆಳೆಯುಲು ಪ್ರೇರಣೆ ನೀಡಿತ್ತು. ನಿಮಗೆ ಹೇಳ್ತಿನಿ ಆ ವರ್ಷ ನಮ್ಮುರಿನ ರೈತರು ಉಳ್ಳಾಗಡ್ಡಿ ರೇಟಿನೊಂದಿಗೆ ತಾವೂ ಆಕಾಶಕ್ಕೇರಿಬಿಟ್ಟಿದ್ದರು. ಪ್ರತಿಯೊಬ್ಬನ ಮನೆಯ ಮುಂದೆಯೂ "ಹಮಾರ ಬಜಾಜ", ಆ ವರುಶ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳ ಮೈತುಂಬ ಬಂಗಾರ, ಗಣೇಶ ಬೀಡಿ ಸೇದಲೂ ಉದ್ರಿ ಕೇಳುತ್ತಿದ್ದ ಚಪರಾಸಿಗಳ ತುಟಿಯ ಮೇಲೆ ಕಿಂಗು ಸೀಗರೇಟು, ಕಂಟ್ರಿ ಕುಡಿಯುತ್ತಿದ್ದವರೂ ಗದಗಿಗೆ ಹೋಗಿ "DSP" ಏರಿಸಿ ಬರತೊಡಗಿದರು, ಆಶ್ರಯ ಯೋಜನೆಗಳ ಮನೆಯಲ್ಲೂ ಕಲರ್ ಟಿವ್ಹಿ ಮತ್ತು ಟೇಪ್ ರೇಕಾರ್ಡರ್ರು ಮತ್ತು " ತಪ್ಪಾ? ಪ್ರೀತ್ಸೊದ್ ತಪ್ಪಾ?" ಅಂತ ಅರಚುವ ರವಿಚಂದ್ರನ್ ಹಾಡುಗಳು ಕೇಳಿಬರತೊಡ್ಗಿದ್ದವು. ಇನ್ನೊಂದೆಡೆ ದಲ್ಲಾಳಿಗಳು ನಮ್ಮೂರಿನ ರೈತರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಬಂದು ವ್ಯವಹಾರ ಕುದುರಿಸತೊಡಗಿದರು. ಇನ್ನೂ ಬೇಂಗಳೂರಿಗೆ ಲಾರಿ ಒಯ್ದ ರೈತರಿಗಂತೂ ದಲ್ಲಾಳಿಗಳಿಂದ ರಾಜೋಪಚಾರ;ರೈತ ಭವನದ ಸೆಕ್ಯುರಿಟಿಯೂ ಭರ್ಜರಿ ಸೆಲ್ಯುಟು ಕುಟ್ಟತೊಡಗಿದ್ದ. ಇದೆಲ್ಲಾ ಕಂಡು,ಅನುಭವಿಸಿದ ನಮ್ಮೂರಿನ ರೈತ ಧಣಿಗಳ ಲೆವೆಲ್ಲ್ಲೆಬದಲಾಗತೊಡಗಿತ್ತು.ಉಳ್ಳಾಗಡ್ಡಿ ಬೆಳೆದವರೆಲ್ಲರೂ ತಮ್ಮ ನಸೀಬಿಗೆ ಬೀಗಿದ್ದೇ ಬೀಗಿದ್ದು.ಉಳ್ಳಾಗಡ್ಡಿ ಮಾರಲು ಬೆಂಗಳೂರಿಗೆ ಹೋಗೆ ಬಂದ ಜನ ತಮ್ಮ ಯಾತ್ರೆಯ ಜೊತೆಗೆ ಉಳ್ಳಾಗಡ್ಡಿ ಮಾರಿ ಬಂದ ಹಣವನ್ನು ತಮ್ಮ ಅಂಡರವೇರಿನಲ್ಲೋ, ಹಳೆಯ ಚಾದರದಲ್ಲೋ ಮುಚ್ಚಿಟ್ಟು ಜೋಪಾನವಾಗಿ ಕಳ್ಳರಿಂದ ಪಾರಾದ ರೋಚಕ ಕಥೆಯನ್ನು ಉಪ್ಪು ಖಾರ ಹಾಕಿ ಹೇಳುತ್ತಿದ್ದರೆ ಉಳಿದವರ ಮುಂದೆ ಹೇಳುತ್ತಿದ್ದವ ಸಲ್ಮಾನಖಾನ್ ಆಗಿಬಿಡುತ್ತಿದ್ದ.

ಮುಂದೆ ನಡೆದಿದ್ದೆ ನಮ್ಮೂರ ರೈತರ ಅರ್ಧ ರಾತ್ರೀಲಿ ಕೊಡೆ ಹಿಡಿಯುವ ಕಾಯಕ.ಯಾವುದೋ ಮಹಾಶಯ "ಬನಶಂಕರಿ"ಗೆ ಬಂಗಾರದ ಉಳ್ಳಾಗಡ್ಡಿ ದೇಣೆಗೆ ನೀಡಿದ ಪ್ರಹಸನವೂ ನಡೆದು ಹೋಯಿತು. ಅದು ಹಾಳಾಗ್ಲಿ ನಮ್ಮೂರಲ್ಲೆ ಉಳ್ಳಾಗಡ್ಡಿ ದೇವಸ್ಥಾನ ನಿರ್ಮಿಸುತ್ತ್ತಾರೆ ಎಂಬ ತಲೆಬುಡವಿಲ್ಲದ ಗಾಳಿಸುದ್ದಿಯೂ ಸೇರಿಕೊಂಡು ಉಳ್ಳಾಗಡ್ಡಿಗೆ ದೈವತ್ವವನ್ನು ಆರೋಪಿಸುವ ಸತ್ಕಾರ್ಯವೂ ನಡೆಯಿತು, ಹೀಗಾಗಿ ’ಉಳ್ಳಾಗಡ್ಡಿ’ ಅಂದ್ರೆ ನಮ್ಮೂರ ಜನಕ್ಕೆ ಭಯ ಭಕ್ತಿ ಉಕ್ಕತೊಡಗಿತ್ತು.ಆ ವರ್ಷ ನಡೆದ ಪಂಚಾಯಿತಿ ಚುಣಾವಣೆಯಲ್ಲಿ ಉಳ್ಳಾಗಡ್ಡಿ ಯನ್ನು ಚುನಾವಣಾ ಚಿಹ್ನೆಯಾಗಿ ಪಡೆಯಲು ನಮ್ಮೂರಿನ ರೈತರ ಧುರೀಣರ ನಡುವೆ ಪೈಪೋಟಿ ಶುರುವಾಗಿತ್ತು.ಕೊನೆಗೆ ನಮ್ಮೂರಿನ ರೈತರ ಶ್ರೀಮಂತಿಕೆ "ಮಲಪ್ರಭಾ ಗ್ರಾಮೀಣ ಬ್ಯಾಂಕಿ"ನವರ ಕಣ್ಣು ಕುಕ್ಕಿ ಒಂದು ಶಾಖೆಯನ್ನು ಅಗಸೆ ಬಾಗಿಲಿನಲ್ಲಿ ತೆರೆದೆ ಬಿಟ್ಟರು ಮತ್ತು ಕಳ್ಳರ ಭಯದಿಂದ ನಮ್ಮೂರಿಗೆ ರಾತ್ರಿ ಡ್ಯೂಟಿಗೆ ಇಬ್ಬರು ಪೋಲಿಸರೂ ಬರತೊಡಗಿದ ಮೇಲೆ ನಮ್ಮ ಊರಿನ ಖದರ್ರೆ ಬದಲಾಗತೊಡಗಿತ್ತು.

ಮುಂದೆ ಶುರುವಾಗಿದ್ದೆ ಕಹಾನಿ ಮೇ ಟ್ವಿಸ್ಟ. ಮುಂದಿನ ಹಂಗಾಮಿನಲ್ಲಿ ಎಲ್ಲಾ ಹಿರಿ ಕಿರಿ ರೈತರು ಉಳಿದ ಎಲ್ಲಾ ಬೆಳೆಗಳನ್ನು ಬಿಟ್ಟು ಉಳ್ಳಾಗಡ್ಡಿಯನ್ನು ಮಾತ್ರ ಬಿತ್ತತೊಡಗಿದ್ದರು.ತುಟ್ಟಿಯ ಯೂರಿಯಾ ತಂದು ಸುರಿದದ್ದೆ ಸುರಿದದ್ದು,ಮೇಲಿಂದ ಮೇಲೆ ಕಳೆ ಕಿತ್ತು ಮಕ್ಕಳಂತೆ ಉಳ್ಳಾಗಡ್ಡಿ ಸಸಿಗಳನ್ನು ಪೋಷಿಸಿದ್ದಕ್ಕೆ ಉಳ್ಳಾಗಡ್ಡಿ ಕೈ ಬಿಡಲಿಲ್ಲಾ. ಎಲ್ಲರ ಹೊಲದಲ್ಲೂ ಬಂಪರ್ ಬೆಳೆ. ಯಡವಟ್ಟು ಆಗಿದ್ದೆ ಇಲ್ಲಿ, ಅತಿ ಆದರೆ ಅಮೃತವೂ ವಿಷ ಅಂತೆ, ಹಾಗೇಯೇ ಆ ವರ್ಷ ಉಳ್ಳಾಗಡ್ಡಿ ರೇಟು ಪಾತಾಳ ಕಂಡಿತ್ತು. ಅದರೂ ದೀಪಾವಳಿ ಕಳೆದ ಮೇಲೆ ರೇಟು ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಉಳ್ಳಾಗಡ್ಡಿ ಕಿತ್ತು ಗುಡ್ಡೆ ಹಾಕತೊಡಗಿದರು.ಮೊದಲೆಲ್ಲಾ ಮನೆ ಬಾಗಿಲಿಗೆ ಬಂದು ಚೌಕಾಸಿ ಆರಂಭಿಸುತ್ತಿದ್ದ ದಲ್ಲಾಳಿಗಳು ನಮ್ಮೂರಿನ ಕಡೆ ತಲೆ ಹಾಕಿ ಮಲಗುವದನ್ನೆ ಬಿಟ್ಟಿದ್ದರು. ಆಗಲೇ ನಮ್ಮೂರಿನ ರೈತರ ಪಸೆ ಆರತೊಡಗಿತ್ತು. ಎಕರೆಗೆ ಸಾವಿರಾರು ಖರ್ಚು ಮಾಡಿದ ಹೊಟ್ಟೆಯೊಳಗಿನ ಸಂಕಟ ಪ್ರತಿಭಟನೆ ರೂಪು ಪಡೆದು, ಉಳ್ಳಾಗಡ್ಡಿಯನ್ನು ರಸ್ತೆಯಲ್ಲೆ ಸುರುವಿ, ಸರಕಾರಿ ಬಸ್ಸು ನಿಲ್ಲಿಸಿ " ಅಬ್ಬಿಗೇರಿ ರೈತರಿಂದ ಉಳ್ಳಾಗಡ್ಡಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ. ದಿ||......... " ಅಂತ ಬಸ್ಸಿನ ಏರಡೂ ಕಡೆ ಬರೆಸಿ "ಉಗ್ರ ಓರಾಟ" ಶುರು ಮಾಡಿದರೂ ಉಳ್ಳಾಗಡ್ಡಿ ಚಿಹ್ನೆಯಿಂದಲೇ ಅರಿಸಿ ಹೋದ ರೈತ ಧುರೀಣರು ಇತ್ತ ಕಡೆ ಹಾಯಲೇ ಇಲ್ಲಾ.ಕೆಲವರು ಧೈರ್ಯ ಮಾಡಿ ಲೋಡು ಮಾಡಿಸಿ ಬೆಂಗಳೂರಿಗೆ ಲಾರಿ ತಂದು ರೇಟು ವಿಚಾರಿಸಿದಾಗ ಲಾರಿಯ ಬಾಡಿಗೆಯೂ ಗಿಟ್ಟುವುದಿಲ್ಲಾ ಎಂಬ ಖಾತ್ರಿಯಾದಾಗ ತಂದ ಉಳ್ಳಾಗಡ್ಡಿಯನ್ನು ಲಾರಿಯಲ್ಲೇ ಬಿಟ್ಟು ರಾತ್ರೋ ರಾತ್ರಿ ಊರಿಗೆ ಮರಳಿ ಬಿಟ್ಟಿದ್ದರು, ಕೆಲ ಹತಾಶ ರೈತರು ಮಾರ್ಕೆಟ್ಟಿನಲ್ಲೇ ಉಳ್ಳಾಗಡ್ಡಿ ಸುರುವಿ ತಮ್ಮ ಆಕ್ರೋಶ ತೋರ್ಪಡಿಸತೋಡಗಿದ್ದರು.ಇಡಿ ಊರಲ್ಲಿ ಸೂತಕದ ಛಾಯೆ. ಎಲ್ಲರೂ ಸರಕಾರವನ್ನು, ತಮ್ಮ ಹಣೆಬರಹವನ್ನು ಜರೀಯುವವರೆ ಆದರು. ಕೆಲ ಅರ್ಧ ಕೊಡಗಳು ಎಕ್ಸಪೋರ್ಟ್ ಪರ್ಮಿಶನ್ನು, ಪಾಕಿಸ್ತಾನ ಮಾರ್ಕೇಟ್ಟು, ಆಂಧ್ರದ ಉಳ್ಳಾಗಡ್ಡಿ ಲಾಬಿ ಅಂತೆಲ್ಲಾ "ಅರ್ಥಶಾಸ್ತ್ರ"ದ ಕೊಲೆ ಮಾಡತೊಡಗಿದರು.ಎನೇ ಆದರೂ ನಮ್ಮೂರ ರೈತನ ಸ್ಥಿತಿ ಇಂಗು ತಿಂದ ಮಂಗನದಾಗಿತ್ತು..

ಮೊನ್ನೆ ರಿಲಾಯನ್ಸ್ ಪ್ರೆಶ್ ಗೆ ಹೋದಾಗ ಉಳ್ಳಾಗಡ್ಡಿ ಬೆಲೆ ಕೆಜಿಗೆ ಹದಿನೆಂಟು ಅಂತ ನೋಡಿ ಹೊಟ್ಟೆ ಉರಿಯಿತು. ಯಾಕೆಂದರೆ ಕಳೆದ ದಿನವಷ್ಟೆ ಉಳ್ಳಾಗಡ್ಡಿ ಮಾರಲು ಬಂದ್ ನಮ್ಮೂರ ರೈತನೊಬ್ಬ ಮೆಜೆಸ್ಟಿಕನಲ್ಲಿ ಸಿಕ್ಕಾಗ " ಎಷ್ಟಕ್ಕೆ ಮಾರಿದೆ?" ಅಂತ ಕೇಳಿದ್ರೆ " ಆರು ನೂರಕ್ಕಿಂತ ನಯಾ ಪೈಸೆನೂ ಮುಂದೆ ಜಗ್ಗಲಿಲ್ಲಾ ಗೌಡ್ರೆ " ಅಂತ ಬೇಸರದಿಂದ ಹೇಳಿ, ಕೊನೆಗೆ " ಈ ವರ್ಸಾನು ನಮ್ಮನ ಹಟ್ರು ನೊಡ್ರಿ ಗೌಡ್ರ" ಅಂದ.ಎಷ್ಟು ಯೋಚಿಸಿದರೂ ಅವರನ್ನೂ ಹಟ್ಟಿದ್ದೂ ಸರಕಾರವಾ? ದಲ್ಲಾಳಿಗಳಾ? ಅಥವಾ ಎಲ್ಲವನ್ನೂ ನುಂಗುತ್ತಿರುವ ಭಂಡವಾಳಶಾಯಿಗಳಾ? ಅಂತ ತಿಳಿಲೇ ಇಲ್ಲಾ.ಅದ್ಯಾಕೋ ಗೊತ್ತಿಲ್ಲಾ! ನಮ್ಮೂರಿನ ರೈತರ ದಡ್ದತನ, ಅವರ ದರಿದ್ರತನ, ಮುಂದಾಲೋಚನೆಯೇ ಇಲ್ಲದ ಪೆದ್ದುತನ,ಹುಸಿ ನಂಬಿಕೆಯಲ್ಲಿ ದೇವರ ಮೇಲೆ ಭಾರ ಹಾಕಿ ಪ್ರತಿವರ್ಷವೂ ಅವರು ಉಳ್ಳಾಗಡ್ಡಿ ರೇಟಿನೋಂದಿಗೆ ಆಡುವ ಜೂಜು ನೆನಪಿಗೆ ಬಂತು. ಯುಗಾದಿಯ ಹೊಸ ಬಟ್ಟೆ, ಹೆರಿಗೆಗೆ ಬಂದ ಅಕ್ಕನ ಬಾಣಂತನದ ಖರ್ಚು,ಅಜ್ಜನ ಕಣ್ಣಿನ ಪೊರೆಯ ಆಪರೇಶನ್ನು, ಅವ್ವನ ಧಡಿ ಸೀರೆಯ ಕನಸು, ಮಳೆಗಾಲಕ್ಕೆ ಬಿದದೆ ಸೋರುವ ಮಾಳಿಗೆಯ ರೀಪೆರಿಯ ಖರ್ಚು, ಅಣ್ಣನ ಓದಿನ ಖರ್ಚು ಇತ್ಯಾದಿ ಕನಸುಗಳು "ಉಳ್ಳಾಗಡ್ಡಿ ಧಾರಣಿ" ಎಂಬ ನಮ್ಮ ಎಣಿಕೆಗೆ ನಿಲುಕದ ಮಾಯೆಯೆ ಜೊತೆಗೆ ತಳಕು ಹಾಕಿಕೊಂಡಿರುವುದು ನಮ್ಮೂರಿನ ದುರ್ದೈವ.ಬೇಡ ಬೇಡವೆಂದರೂ ಬಿಸಿಲಿಗೆ ಬಾಡಿದ ಕಪ್ಪುಮೊಗದ,ಪ್ಯಾಲಿ ನಗೆಯ,ಹರಿದ ಬನೀನಿನ,ಹಳೆಯ ಎಕ್ಕಡದ, ಅದೆ ತುಂಬು ಭರವಸೆಗಣ್ಣಿನ ನಮ್ಮೂರಿನ ರೈತನ ಚಿತ್ರ ಕಣ್ಣಿಂದ ಕದಲುತ್ತಲೇ ಇಲ್ಲ್ಲ........

Sunday, November 18, 2007

ನಾವು ಶಾಪಗ್ರಸ್ತರೇ?


ಗದಗ-ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ.ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ. ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ.ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ.ಸಾರ್ವಜನಿಕ ಶೌಚಾಲಯಗಳಿಗೆ ಹೋದರಂತೂ "ಇಶ್ಶಿ" ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ.ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು, ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ.ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ. ಅಲ್ಲಿಗೆ ರೈಲು ಬರುತ್ತೆ, ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ. ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ. ಬೇಸಿಗೆಯಲ್ಲಿ ಇಡಿ ಗದಗಕ್ಕೆ "ನೀರು" ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ. ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ- ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ. ಇನ್ನು ದೂರದ ಗುಲ್ಬರ್ಗ, ಬೀದರ,ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ..

ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು; "ಕಾವೇರಿ" ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು, ಮೈಕು ಹಿಡ್ಕೊಂಡು "ಪಾದಯಾತ್ರೆ" ಅಂತ ತಮ್ಮ "ಜನಪರ ಕಾಳಜಿ(?)" ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ
ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ.ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ? ಕೇವಲ ಒಂದು ಹಂಗಾಮಿನ ಕಬ್ಬು, ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ?. ಪ್ರತಿ ವರ್ಷವೂ ಅದೇ ಬೆಲೆ ಕುಸಿತ, ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು. ಪ್ರತಿ ವರ್ಷವೂ ಅದೆ ಕಥೆ. "ಹಾಡಿದ್ದು ಹಾಡೊ ಕಿಸುಬಾಯಿ ದಾಸ" ಎಂಬಂತೆ ಅವೇ ಹಳೆ ಭರವಸೆಗಳು, ಕಣ್ಣೊರಿಸುವ ಹಲ್ಕಟ್ ರಾಜಕೀಯ.ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು?.ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ.ಕರ್ನಾಟಕದವರು. ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು?.ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ.ಕರ್ನಾಟಕದ ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ, ಕೇಳುವುವರು ಯಾರೂ ಇಲ್ಲದದಂತಾಗಿದೆ. ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ, ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ, ನಮ್ಮ ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು?. ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ.ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು?

ಮುಕಳಿ ತಿರುವಿದಲ್ಲಿ ಒಂದು ಪಾರ್ಕು,ಹೆಜ್ಜೆಗೊಂದು ಬೀದಿದೀಪ, ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ?. ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ, ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ. ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ, ಸ್ನಾನ ಮಾಡಿಸಿ, ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ.ಕರ್ನಾಟಕದ ಅವ್ಯವಸ್ಠೆ, ಬಡತನ ಕಾಣುವುದೇ ಇಲ್ಲಾ. ಇನ್ನು ನಾರಾಯನ ಮೂರ್ತಿ, ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ.ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ " ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ" ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು.

ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ? ಅಂತಾ. ಸಮಸ್ಯೆ ವ್ಯವಸ್ಥೆಯದಾ? ಅಥವಾ ನಮ್ಮ ಜನಗಳದಾ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ?. ಎಲ್ಲೋ ಓದಿದ ನೆನಪು " If we are not part of the solution, then we are part of the problem" ಅಂತಾ, ಹಂಗಾದ್ರೆ ಬಹುಶಃ ನಾವೂ ಸಹ " part of problem" ಆಗಿರಬಹುದಲ್ವಾ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ?

Tuesday, July 31, 2007

" ಜಿಂದಗಿ ಕಟಿಂಗ್ ಸಲೂನ್ "

ನಮ್ಮೂರಿನಲ್ಲೇ ಜಗತ್ಪ್ರಸಿದ್ದವಾದ ಕಷ್ಟದಂಗಡಿಯ ನಿಂಗನಿಗೆ, ಯಾವ ದೇವತೆ ಕನಸಿನಲ್ಲಿ ಬಂದು ಅವನ ಅಂಗಡಿಗೆ " ಜಿಂದಗಿ ಕಟಿಂಗ್ ಸಲೂನ್" ಎಂಬ ಹೆಸರು ಸೂಚಿಸಿದ್ದಳೋ ಅರಿಯೆ,ರಾತ್ರೋ ರಾತ್ರಿ ಊರಿನ ಎಕೈಕ ಪಾರ್ಟ ಟೈಂ ಪೆಂಟರ ಆದ ಕೊಟ್ರನನ್ನು ಕರೆಸಿ, ಅವನ ಎಂದಿನ ಕಾಗಕ್ಕ ಗುಬ್ಬಕ್ಕ ಶೈಲಿಯಲ್ಲಿ "ಜಿಂದಗಿ ಕಟಿಂಗ್ ಸಲೂನ್" ಎಂದು ಬರೆಸಿ ಧನ್ಯನಾದ.

ನಿಂಗನಿಗೆ ಈ ಕಸುಬು ಅವನ ಹಿರಿಯರು ಬಿಟ್ಟು ಹೋದ ಎಕೈಕ ಬಳುವಳಿ.ನಮ್ಮೂರಿನ ಸಮಸ್ತ ತಲೆಗಳ ಉಸ್ತುವಾರಿಯೂ ಇವನದೇ ಆಗಿತ್ತು.ಅಷ್ಟಕ್ಕು ಇವನ ಕಷ್ಟದಂಗಡಿ ಎಂದರೆ ಊರಿನ ಮಧ್ಯದ ಪಂಚಾಯತಿ ಕಟ್ಟಡಕ್ಕೆ ಅಂಟಿದ, ಹಳೆ ಕಟ್ಟಿಗೆ ಹಲಗೆಗಳ ಗೂಡಂಗಡಿ.ಅದರ ಒಳಭಾಗವನ್ನೆಲಾ ಶುಕ್ರವಾರದ ಚಿತ್ರಮಂಜರಿಯ ಪೇಪರುಗಳನ್ನು ಅಂಟಿಸಿ, ಆ ಗೂಡಂಗಡಿಗೂ ಗ್ಲಾಮರ್ ನೀಡಿದ್ದ. ಆ ಚಿತ್ರಮಂಜರಿಯ ಪುಟ ಆರಿಸುವಾಗಲೂ ವೀಶೆಷ ಕಾಳಜಿ ವಹಿಸಿ, ಆಗಿನ ಕಾಲದ ಯುವಕರ ಅರಾದ್ಯ ದೈವವಾಗಿದ್ದ ಡಿಸ್ಕೊ ಶಾಂತಿ ಮತ್ತು ಸಿಲ್ಕ ಸ್ಮಿತಾರ ಪೋಸುಗಳು ಇರುವಂತೆ ನೋಡಿಕೊಂಡು ತನ್ನ " Marketing strategy " ತೋರಿದ್ದ.ಗೋಡೆಗೆ ತಗುಲಿದಂತೆ ಇರುವ ಒಂದು ಶೆಲ್ಫು, ಅದರ ಮೇಲೆ ತರಹೇವಾರಿ ಕತ್ತರಿಗಳು,ಹೊಲಸು ತುಂಬಿದ ಬಾಚಣಿಕೆಗಳು ಮತ್ತು ಹೆಸರೇ ಕೇಳಿರದ ಲೋಕಲ ಬ್ರಾಂಡಿನ ಬ್ಲೇಡು,ಶೇವಿಂಗ್ ಕ್ರೀಮು, ಸ್ನೋ,ಪೌಡರಗಳು ಮತ್ತು ಇಡೀ ಅಂಗಡಿಗೆ ಕಳಶಪ್ರಾಯವಾದ ಎರಡು ಅಭಿಮುಖವಾದ ಕನ್ನಡಿಗಳು, ಅದರ ಮೇಲೆ ವಿವಿಧ ಹೇರ ಸ್ಟೈಲಿನ ಫೋಟೊ ಮತ್ತದರ ಪಕ್ಕದಲ್ಲಿ ನಮ್ಮೂರ ಪಡ್ಡೆಗಳ ೨೪/೭ ಆರಾದ್ಯ ದೈವವಾದ ರವಿಚಂದ್ರನ್, ಖೂಷ್ಬುಳನ್ನು ತಬ್ಬಿ ನಿಂತ ದೊಡ್ಡ ಪೊಸ್ಟರು.ಇವೆಲ್ಲದರ ಜೊತೆಗೆ ಅಂಗಡಿಯ ತುಂಬೆಲ್ಲಾ ಬಿದ್ದಿರುವ ಕರಿ ಬಿಳಿ ಬಣ್ಣದ ವಿವಿಧ ಸೈಜಿನ ಕೂದಲುಗಳು..

ಈ ನಿಂಗ,ಹೊಸ ಹೆಸರಿನೊಂದಿಗೆ ತಿರುಗುವ ಖುರ್ಚಿಯನ್ನು ಇಡಿ ಅಬ್ಬಿಗೇರಿಗೆ ಪ್ರಥಮವಾಗಿ ಪರಿಚಯಿಸಿ, ಊರಿನ ಮೊದಲಿಗರ ಪಟ್ಟಿಯಲ್ಲಿ ತಾನು ಸೇರಿಕೊಂಡ.ಅಂಗಡಿಗೆ ಬರುವ ಪಡ್ಡೆಗಳಿಗೆ ಮಿಲ್ಟ್ರಿ ಕಟ್ಟಿಂಗು, ಪಂಕು,ಸ್ಲೋಪು,ಸೈಡ್ ಲಾಕು ಅಂತೆಲ್ಲಾ ಅವರ ತಲೆಗಳನ್ನೆಲ್ಲಾ ತನ್ನ ಪ್ರಯೋಗಳಿಗೆ ಒಡ್ಡುತ್ತಿದ್ದ.ತನ್ನಂಗಡಿಗೆ ಹೊಸ ಟೇಪ ರೇಕಾರ್ಡರ್ ತಂದಾಗಲಂತೂ, ಇಡಿ ದಿನ ರವಿಚಂದ್ರನನ " ಕಮಾನು ಡಾರ್ಲಿಂಗ್" ಅಂತ ಹಾಡು ಹಾಕಿ, ದಾರಿಯಲ್ಲಿ ಓಡಾಡುವ ಹೆಂಗಸರಿಗೆ ಮುಜುಗರ ತಂದಿಕ್ಕುತ್ತಿದ್ದ.

ಈ ನಿಂಗ ಮಾತ್ರ ಹೀಗಿದ್ದನೋ ಅಥವಾ ಎಲ್ಲಾ ಊರ ಕ್ಷೌರಿಕರು ಹೀಗೋ ಗೊತ್ತಿಲಾ! ತಲೆಕೂದಲು ಕೆತ್ತುವದರೊಂದಿಗೆ, ಎಲ್ಲ ಮನೆಗಳ
ಗಾಸಿಪ್ಪುಗಳನ್ನು ಉಪ್ಪು ಖಾರ ಹಚ್ಚಿ ಮಸಾಲೆ ಅರೆದು ಹೇಳುತ್ತಿದ್ದ, ಮಲ್ಯನ ಬಗ್ಗೆ ರಂಜನಿಯ ಕಥೆಗಳನ್ನು ಹೇಳುತ್ತಿದ್ದ,"ಬೆಂಗ್ಳೂರಲ್ಲಿ ರಾಜ್ ಕುಮಾರನ್ನ ಬೈದರೆ ಅಲ್ಲೇ ಒದೆ ಬಿಳುತ್ತವೆ" ಅನ್ನುವ ಅತಿರಂಜಿತ ಸುದ್ದಿಗಳನ್ನು ಹೇಳುತ್ತಿದ್ದ ಮತ್ತು ರಾಜ್ಕುಮಾರನ್ನ "ಅಣ್ಣಾವ್ರು" ಅಂತಲೇ ಕರೀಬೇಕು ಅಂತ ಬೆಂಗಳೂರು ಶಿಷ್ಟಾಚಾರ ಕಲಿಸುತ್ತಿದ್ದ, ಸಿನಿಮಾ ನಟಿಯರ ಬಗ್ಗೆ ರೋಚಕ ಕಥೆಗಳನ್ನು ಹೇಳಿ ನಮ್ಮಂತಹ ಪಡ್ಡೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಮತ್ತು ಕೆಲ " ಆ ಥರಾ" ನಟಿಯರ ರೇಟುಗಳನ್ನು ಹೇಳಿ ನಮಗೇನೋ ಒಂತರ ಕೂತುಹಲವನ್ನೂ ಮೂಡಿಸಿದ್ದ.ಅವನ ಅಂಗಡಿ ಎಂದರೆ ಮುಕ್ತವಾಗಿ ಶುಕ್ರವಾರದ ಪೇಪರ್ ಓದುವ ಮತ್ತು ಹೀರೋಯಿನ್ನುಗಳನ್ನು ಮುಕ್ತವಾಗಿ ನೋಡುವ ಅಡ್ಡಾ ಆಗಿತ್ತು, ಹಳೆ ರೂಪತಾರಾ ತಂದಿಟ್ಟು ನಮ್ಮ ಕೂತುಹಲವನ್ನು ಇನ್ನು ಹೆಚ್ಚಿಸುತ್ತಿದ್ದ.ಕಾಲೇಜಿಗೆ ಹೋಗುವಾಗ ಯಾವುದಕ್ಕೂ ಇರ್ಲಿ ಅಂತ ಕ್ರಾಪು ತಿದ್ದಿಕೊಳ್ಳುವವರಿಗೆ ಅವನ ಅಂಗಡಿ ಆಧಾರವಾಗಿತ್ತು.ಹುಡುಗರ ಗುಪ್ತ ಸಮಸ್ಯೆಗಳಿಗೆ ಎಲ್ಲಾ ಬಲ್ಲವನಂತೆ ತನಗೆ ತಿಳಿದದ್ದನ್ನು ಹೇಳಿ ಅವರನ್ನೂ ಇನ್ನೂ ಗೊಂದಲಕ್ಕೆ ಕೆಡವುತ್ತಿದ್ದ.

ಮಧ್ಯವಯಸ್ಸು ದಾಟಿದ್ದರೂ ಒಂದು ಬಿಳಿ ಕೂದಲು ಕಾಣಿಸದ ದೊಡ್ಡ ಗೌಡರ ಕರಿಕೂದಲಿನ ರಹಸ್ಯ ಇವನಿಗೆ ಮಾತ್ರ ಗೊತ್ತಿತ್ತು. ಯಾರೇ ಬಂದು " ಗದ್ಲ ಐತೇನೋ ನಿಂಗಪ್ಪಾ? " ಅಂತ ಕೇಳಿದ್ರೆ " ನೆಕ್ಸ್ಟ ನಿಮ್ದ ಪಾಳೆ" ಅಂತೆಲ್ಲಾ ಒಳು ಬಿಟ್ಟು ಅನೇಕ " ನೆಕ್ಸ್ಟು" ಮಾಡಿ ಅವರನ್ನು ಕಾಯಿಸಿ ಕಾಯಿಸಿ ಸತಾಯಿಸುತ್ತಿದ್ದ.ಬಾಯಿ ಸುಮ್ನಿರದ ನಿಂಗ " ಈ ಭಾರಿ ಕಾಂಗ್ರೆಸ್ಸೇ ಬರೋದು " ಅಂತ ಭವಿಷ್ಯ ನುಡಿದು ನಮ್ಮೂರ ಭಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಒಟ್ನಲ್ಲಿ ನಿಂಗ ನಮ್ಮುರ ಜೀವನದ ಅವಿಭಾಜ್ಯ ಅಂಗವಾಗಿದ್ದ..

ಮೊನ್ನೆ "..... ಮೆನ್ಸ್ ಹೇರ ಸ್ಟೈಲ್" ಹೆಸರಿನ ಕಷ್ಟದಂಗಡಿಗೆ ಹೋಗಿದ್ದೆ " ಸಾರ್ , ಆಯಿಲ್ ಹಾಕ್ಲಾ " ಎಂದು ಕೇಳಿದಾಗ ಆಯಿಲ್ಲಿನ ಮರ್ಮ ತಿಳಿಯದೆ ಹೂಂ ಅಂದೆ. ಸ್ವಲ್ಪ ಎಣ್ಣೆ ಹಚ್ಚಿ ತಲೆ ಉಜ್ಜಿದವನೆ," ಎಷ್ಟು ಗುರು" ಅಂದ್ದಿದ್ದಕ್ಕೆ " ನೈಂಟಿ ರುಪೀಸ್ ಸರ್" ಎಂದು ತಲೆಯ ಜೊತೆಗೆ ಜೇಬನ್ನು ಬೋಳಿಸಿ ಕಳಿಸಿದಾಗ ನಿಂಗ ನೆನಪಾದ." ಉದ್ರಿ ಮಾನಭಂಗ" ಎಂದು ಬರೆದಿದ್ದರೂ ಚೆನ್ನಾಗಿ ಕೆರೆಸಿಕೊಂಡು "ಹತ್ತಿ ಬಂದಾಗ ಇಸಗೊಂಡು ಹೋಗು" ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದದು ಮತ್ತು ಅವನು ಉಚಿತವಾಗಿ ಮಸಾಜ್ ಮಾಡುತ್ತಿದ್ದುದು, ಚಿಕ್ಕವನಾಗಿದ್ದಗ " ಕಷ್ಟಕ ಒಲ್ಲೆ " ಅಂತಾ ಅಳುತ್ತಿದ್ದವನನ್ನು ಕಥೆ ಹೇಳಿ ಕ್ಷೌರ ಮಾಡುತ್ತಿದ್ದದು, ಎಲ್ಲಾ ಕಣ್ಮುಂದೆ ಹಾದು ಹೋಯಿತು..

Sunday, July 15, 2007

ಅಬ್ಬಿಗೇರಿಯ ಬಸ್ ಸ್ಟಾಂಡು

ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು.ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು, ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು.ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು.ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ! ಅದು ನರೇಗಲ್ಲಿಗೆ "ಕಾಲ್ಮೆಂಟ್ ಸಾಲಿ" ಕಲಿಯಲು ಹೋಗುವವರು, ಗದಗಿಗೆ ಕದ್ದು ಚೈನಿ ಹೊಡೆಯಲು ಹೋಗುವವರು, ಅಷ್ಟೆ ಯಾಕೆ ರೋಣಕ್ಕೆ ಹೋಗಿ " ಒಂದು ಕ್ವಾರ್ಟರ" ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು.ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ "ದಿಲ್ ರೂಬಾ ಪಾನ್ ಶಾಪ್" ನಿಂದ ಹಿಡಿದು, ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ, ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ " ಬಸವೇಶ್ವರ ಮಿಲಿಟ್ರಿ ಖಾನಾವಳಿ"ಗೂ ವ್ಯಾಪಾರಸ್ಥಾನವಾಯಿತು.

ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ :-)ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು.ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ, ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ... ಮಕ್ಕಳು " ಗಂಡಸರಿಗೆ" ಮತ್ತು " ಹೆಂಗಸರಿಗೆ" ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು.ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ " ಸುಮಾ ಐ ಲವ್ ಯೂ" " ಭಾಗ್ಯ ಪ್ರೀತ್ಸೆ" "ಬಸು ಜೊತೆ ವಾಣಿ" ಎಂದು ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು, ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು. ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ, ಪ್ರೇಮಲೋಕ,ರಸಿಕ, ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು.ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು. ಅವರು ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ "ಮಾಂತೇಶ" ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು.

ಪ್ರತಿ ಹೊಸವರ್ಷಕ್ಕೂ "Wish you happy new year 200... " ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ "ವೀವೆಕಾನಂದ ಯುವಕ ಸಂಘ" "ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್" " ಫೈವ ಸ್ಟಾರ ಕ್ರಿಕೆಟ್ ಕ್ಲಬ್" ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ. ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು, ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು,ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು, ಇವರ ಮನೆಯ ಹುಡುಗ ಫೇಲಾದ, ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ! ಅಂತೆಲ್ಲಾ ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು..

ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು.ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು, ನಾಯಕಿಯ ಕಣ್ಣಿಗೆ,ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ, ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು.ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು, ಅಪರೂಪಕ್ಕೆ ಪ್ರದರ್ಶನವಾಗುವ "ದೇವರ" ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ "ಡಿಸೆಂಟ್" ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು..

ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು.ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು.ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು, ಆ ಚಿಂಟುಗಳಿಗೆ ಚಾಕಲೇಟು, ಐಸ್ ಕ್ಯಾಂಡಿ ಕೊಡಿಸಿ " ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ, ಆ ಅಕ್ಕನ ಕೈಗೆ ಇದನ್ನು ಕೊಡು, ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು. ನೀ ಜಾಣಮರಿ ಅಲ್ವಾ? " ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು. ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ, ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು.

ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ "ಹೀರೊ" ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು. ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು " ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ" ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು.ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ "ಲವ್ವರು"ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು.


ಊರಿಗೆ ಹೊಸದಾಗಿ ಬರುವವರು, ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು,ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು, ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ, ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ "ದಿಲ್ ರೂಬಾ ಪಾನ್ ಶಾಪ್" ನ ಬಸುನ ಬಳಿ ಸದಾ ಲಬ್ಯ.ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ."ಕುಚ್ ಕುಚ್ ಹೋತಾ ಹೈ" ಚಿತ್ರದಲ್ಲಿನ "ಫ್ರೆಂಡ್ ಶಿಪ್" ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು. ಕದ್ದು ಸ್ಮಾಲ್,ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು.

ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು.ವಿಶೇಷವಾಗಿ ಈ "ಸ್ವಯಂಸೇವಕರು" ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು. ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು.ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು.ಆದರೆ ನಾವು ಮಾತ್ರ ಈ ವಿಷಯದಲ್ಲಿ " ವಿಶ್ವ ಮಾನವ " ತತ್ವಕ್ಕೆ ಬದ್ದರಾಗಿದ್ದೆವು..


ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ(?) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಈಗಲೂ ಅಬ್ಬಿಗೇರಿಗೆ ಹೋದರೆ " ದಿಲ್ ರೂಬಾ ಪಾನ್ ಶಾಪ್" ಗೆ ಭೇಟಿಯಾಗಿ, ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು "ನಾಲ್ಕು ಕಾಳು" ಹಾಕಿಯೇ ಬರುತ್ತೇವೆ, ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ.