Tuesday, August 26, 2008

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !

ಪ್ರತಿವರ್ಷವೂ ಶಾಲೆಗೆ ಅಧಿಕೃತ ಚಕ್ಕರ್ ಹಾಕಿ ರೋಣಕ್ಕೆ ಹೋಗಿ "ಅಬ್ಬಿಗೇರಿ To ನರೇಗಲ್" ವಿದ್ಯಾರ್ಥಿ ಬಸ್ ಪಾಸ್ ಪಡೆಯುವದು ನಮ್ಮೂರ ವಿದ್ಯಾರ್ಥಿಗಳ ಸತ್ಸಂಪ್ರದಾಯ.ಪಾಸಿನ ನೆಪ ಹೇಳಿ ಶಾಲೆ ತಪ್ಪಿಸಿದರೆ ಯಾವ ಮಾಸ್ತರನೂ ಕೆಮ್ಮಂಗಿಲ್ಲಾ ಅನ್ನೊದು ಒಂದು ಕಾರಣವಾದರೆ, ಪಾಸಿನ ನೆಪದಲ್ಲಿ ಅಧಿಕೃತವಾಗಿಯೇ ರೋಣದ ಪ್ಯಾಟಿಯ ಚೈನಿ ಹೊಡೆಯುವದೂ ಇನ್ನೊಂದು ಕಾರಣವಾಗಿತ್ತು. ನಮ್ಮೂರ ಎಲ್ಲಾ ಸತ್ಸಂಪ್ರದಾಯಗಳನ್ನು ಬಲು ನಿಷ್ಠೆಯಿಂದ ಪಾಲಿಸುವ ನನಗೆ ಹಿಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಬೇರೆ ಕಾರಣಗಳೇ ಇರುತ್ತಿರಲಿಲ್ಲ.ಹೀಗಾಗಿ ನಾನು, ಶೆಟ್ಟರ ಸಣ್ಯಾ,ಮೂಲಿಮನಿ ಚಂದ್ರ ಮತ್ತು ನಮ್ಮ ಕ್ಲಾಸಿನ ಹಿರಿ ವಿಧ್ಯಾರ್ಥಿಯಾದ ಮತ್ತು ನಮಗೆಲ್ಲಾ ಗುರು ಸಮಾನನಾದ ಜುಮ್ಮಿ ಎಲ್ಲರೂ ಸೇರಿ ನಮ್ಮ ಯೋಗ್ಯತಾನುಸಾರವಾಗಿ ಟಾಕು ಟೀಕಾಗಿ ರೋಣದ ಸವಾರಿಗೆ ಸಿದ್ದರಾಗಿ ಹೊರಡುತ್ತಿದ್ದೆವು.. ನನ್ನ ನೆನಪಿನಂತೆ ನಾವು ಆವಾಗ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದೆವು(?) , ಆ ವರ್ಷವೂ ನಮ್ಮ ಪಟಾಲಂ ಮಾಮೂಲಿನಂತೆ ಬಸ್ಸಿನ ಟಾಪನ್ನೇರಿ ರೋಣಕ್ಕೆ ಹೊರಟು ನಿಂತೆವು.. ರೋಣದ ಬಸ ಸ್ಟ್ಯಾಂಡಿನಲ್ಲಿ ಆಗಲೇ ಬೇರೆ ಊರುಗಳ ವಿಧ್ಯಾರ್ಥಿಗಳು ಬಂದು ಠಳಾಯಿಸಿದ್ದರು..

ರೋಣದ ಬಸ ಸ್ಟ್ಯಾಂಡು ಅಂದರೆ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಕೊಳಕಿನಲ್ಲಿ ಯಾವುದಕ್ಕೂ ಕಮ್ಮಿಯಿಲ್ಲಾ. ಆದರೆ ರೋಣದ ಬಸ್ ಸ್ಟ್ಯಾಂಡಿನ ಹಿರಿಮೆಯಿರುವುದು ಅಲ್ಲಿನ ದೊಡ್ದ ಮೂತ್ರಾಲಯದಲ್ಲಿ. ಯಾಕೆಂದರೆ ಅದೊಂತರಾ ರೋಣ ತಾಲೂಕಿನ ಪ್ರೇಮಿಗಳ ನೋಂದಣಿ ಕಚೇರಿಯಿದ್ದಂತೆ. ಎಲ್ಲಾ ಮಜ್ನುಗಳು ತಮ್ಮ ಲೈಲಾಗಳ ಹೆಸರುಗಳನ್ನು ಆ ಪಾಯಖಾನೆಯ ಗೋಡೆಯ ಮೇಲೆ ಬರೆದು ’ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಅಂತಾ ಹಾಡುತ್ತಾ ತಮ್ಮ ಪ್ರೇಮ ಚರಿತ್ರೆಯನ್ನು ಇಡಿ ತಾಲೂಕಿಗೆ ಸಾರಿಬಿಡುತ್ತಿದ್ದರು. ಆದರೆ ಇವರ ’ಎದೆಗಾರಿಕೆ’ ಅವರ ಮಜ್ನುಗಳಿಗೆ ಭಲು ಮುಜುಗುರ ತಂದಿಕ್ಕುತ್ತಿತ್ತು.. ಹೀಗಾಗಿ ಹುಡುಗಿಯರೂ ಸಹ ತಮ್ಮ ಹೆಸರೂ ಸಹ ’ನೋಂದಣಿ’ ಯಾಗಿದೆಯಾ ಅಂತಾ ಕದ್ದು ಕದ್ದು ಗಂಡಸರ ಪಾಯಖಾನೆ ಕಡೆಗೆ ನೋಡುವುದು ಸಾಮಾನ್ಯವಾಗಿತ್ತು..ಇವರ ಈ ದೆಶೆಯಿಂದ ಇಡಿ ಪಾಯಖಾನೆಯ ಗೋಡೆ ಹಲವಾರು ಹೆಸರುಗಳು, ಬಾಣ ಚುಚ್ಚಿರುವ ಹೃದಯದ ಚಿತ್ರಗಳಿಂದ ತುಂಬಿ ಹೋಗಿತ್ತು, ಜೊತೆಗೆ ಮೂಲೆಯಲ್ಲಿ ಇದು ಗಂಡಸರ ಮಾತ್ತು ಹೆಂಗಸರ ಪಾಯಖಾನೆ ಎಂದು ಪ್ರತ್ಯೇಕಿಸಲು ಒಂದೊಂದು ಗಂಡು- ಹೆಣ್ಣಿನ ಚಿತ್ರಗಳು ಕಾಣಬಹುದಾಗಿತ್ತು.

ಈ ಪಾಯಖಾನೆಗೆ ಅಭಿಮುಖವಾಗಿ ಇರುವ ಕಿಡಕಿ ಮೂಲಕವೇ ನಮಗೆಲ್ಲಾ ಪಾಸು ವಿತರಿಸುವ ಕಾರ್ಯಕ್ರಮ ಇರುತ್ತಿತ್ತು. ಯಥಾಪ್ರಕಾರ ಜುಮ್ಮಿ ಪಾಳಿಯಲ್ಲಿ ನಿಲ್ಲದೇ ಉಳಿದವರಿಗೆ ರೋಪ್ ಹಾಕಿ, ಕಾದಾಡಿ ಬಡಿದಾಡಿ ಬೇಗನೆ ನಮಗೆಲ್ಲರಿಗೂ ಬೇಗನೆ ಪಾಸು ತಂದು ಕೊಟ್ಟ. ನಮ್ಮ ಮುಂದಿನ ಕಾರ್ಯಕ್ರಮವನ್ನು ನಾನು ಜುಮ್ಮಿ ರಾತ್ರಿಯೇ ಫಿಕ್ಸ ಮಾಡಿ ಬಿಟ್ಟಿದ್ದೆವು.. ಪ್ಲಾನಿನಂತೆ ಜುಮ್ಮಿ " ಸುಮ್ನೆ ಅಡ್ದಾಡುವುದಕ್ಕಿಂತ ನಾವು ಪಿಚ್ಚರಿಗೆ ಹೋಗೊಣ" ಅಂತ ಅನೌನ್ಸ ಮಾಡಿದ.

ನಾನು ಮಳ್ಳನಂತೆ " ಯಾವ ಪಿಚ್ಚರೆಲೇ ಜುಮ್ಮಿ? ರಾಮಾಚಾರಿ ಪಿಚ್ಚರು ಮೊನ್ನೆ ಟಿವಿಲೇ ಬಂದಿತ್ತಲ್ಲಾ!" ಎಂದು ಜುಮ್ಮಿ ಹೇಳುತ್ತಿರುವದು "ಆ ತರದ" ಚಿತ್ರದ ಬಗ್ಗೆ ಅಂತ ಗೊತ್ತಿದ್ದರೂ ಮುಗ್ದನಂತೆ ನಟಿಸಿದೆ..

ಆಗ ಜುಮ್ಮಿ ಗತ್ತಿನಿಂದ" ಲೇ ಪ್ಯಾಲಿ ಗೌಡ! ರಾಮಾಚಾರಿ ನೋಡಾಕ ನೀವೆಲ್ಲಾ ಇನ್ನೂ ಪ್ರೈಮರಿ ಸಾಲಿ ಹುಡುಗ್ರಾ?, ಮಕ್ಳಾ ಲಗ್ನಾ ಮಾಡಿದ್ರ ಮೂರು ಮೂರು ಮಕ್ಳ ಹಡೀತಿರಿ, ರಾಮಾಚಾರಿ ಅಂತೆ ರಾಮಾಚಾರಿ" ಅಂತ ಹುಸಿಕೋಪದಿಂದ ನಾವೂ ನೋಡ ಹೊರಟಿರುವ ಚಿತ್ರದ ಬಗ್ಗೆ ಸುಳಿವು ಕೊಟ್ಟ.
ಆದರೂ ಸಣ್ಯಾ, ಚಂದ್ರರಿಗೆ ಇನ್ನು ಅರ್ಥವಾಗದ್ದನ್ನು( ಅಥವಾ ಅರ್ಥವಾಗದವರಂತೆ ನಟಿಸುತ್ತಿದ್ದರೋ ಗೊತ್ತಿಲ್ಲಾ) ಕಂಡು ಜುಮ್ಮಿಗೆ ಅವರ ’ಜನರಲ್ ನಾಲೇಜ್’ ಬಗ್ಗೆ ಕನಿಕರವೆನಿಸಿ " ಲೇ ಹುಚ್ಚಪ್ಯಾಲಿ ನನ್ ಮಕ್ಳ ನಾವೀಗ ಒಂದೂವರೆ ತಾಸಿನ ಪಿಚ್ಚರಿಗೆ ಹೋಗುಣು" ಅಂತ ತಿಳಿ ಹೇಳಿ ಪಿಚ್ಚರಿನ ಹೆಸರು " ಆಡಂ and ಈವ The first love story" ಅಂತಲೂ ವಿವರಿಸಿದ.

ನಾನು ಆಗಲೇ ತುಂಬಾ ದೊಡ್ದವನಾಗಿದ್ದೆ ಅಥವಾ ಹಾಗಂತ ಅಂದುಕೊಂಡಿದ್ದೆ, ಹೀಗಾಗಿ ಜುಮ್ಮಿಯ ಈ ಆಫರ್ರು ನಾನು ’ದೊಡ್ದವನು" ಅಂತಾ ಅದಿಕೃತವಾಗಿ ಸಾರಲು ಸಿಕ್ಕ ವೇದಿಕೆಯೇ ಸರಿ ಅಂದುಕೊಂಡು "ಒಂದೂವರೆ ತಾಸಿ"ನ ಚಿತ್ರ ನೋಡಲು ರಾತ್ರಿಯೇ ಸಮ್ಮತಿಸಿದ್ದೆ. ಶೆಟ್ಟರ ಸಣ್ಯಾ ಮೊದಮೊದಲು ಅನುಮಾನಿಸಿದ, ನಂತರ ಜುಮ್ಮಿ ಅವನಿಗೆ ನಾವೂ ನೋಡ ಹೊರಟಿರುವುದು ವೈಜ್ಣಾನಿಕ ಕಮ್ ಸಾಮಾಜಿಕ ಚಿತ್ರವೆಂದೂ, ಅದರಲ್ಲಿ ಮಾನವನ ಜನಾಂಗ ಹೇಗೆ ಬೆಳೆದುಬಂತು, ನಮ್ಮ ಪೂರ್ವಜರು ಯಾರು ಇತ್ಯಾದಿ ಇತಿಹಾಸದ ಅಂಶಗಳನ್ನು ಹೇಳಿದ್ದಾರೆಂದೂ, ಜೊತೆಗೆ ಬಯೋಲಾಜಿಯ ಅನೇಕ ವಿಷಯಗಳನ್ನು ’ನೋಡಿ’ ತಿಳಿಯಬಹುದು ಅಂತಲೂ, ಸಮಾಜ ಮತ್ತು ವಿಜ್ಣಾನ ಓದದೇ ಪಾಸಾಗಬಹುದೆಂದು ಆಸೆ ಹುಟ್ಟಿಸಿದ. ಮೊದಲೇ ಹುಟ್ಟಾ ಬೃಹಸ್ಪತಿಯಾದ ಸಣ್ಯಾನಿಗೆ "ಪಠ್ಯ ಮತ್ತು ಪಠ್ಯೇತರ" ಸಂಗಮವಾದ ಈ ಚಿತ್ರವನ್ನು ನೋಡದಿರುವುದು ತನ್ನ ವಿಧ್ಯಾರ್ಥಿ ಜೀವನದಲ್ಲಿ ತುಂಬಲಾರದ ನಷ್ಟ ಅನಿಸಿ ಚಿತ್ರ ನೋಡಲೂ ಸಣ್ಯಾನೂ ಸಮ್ಮತಿಸಿದ.

ಆದರೆ ಚಂದ್ರ ಮಾತ್ರ ತನ್ನ ಕ್ಯಾರೆಕ್ಟರ್ ಸರ್ಟಿಫೀಕೆಟ್ ತೆಗೆದು ತುಂಬಾ ಒಳ್ಳೆಯ ಹುಡುಗನಂತೆ ಆಡತೊಡಗಿದ. ಜುಮ್ಮಿ ನಾನಾ ತರದಲ್ಲಿ ಚಿತ್ರದ ವರ್ಣನೆ ಮಾಡಿ ಚಿತ್ರ ನೋಡುವದರಿಂದ ನಿನ್ನ ಕ್ಯಾರೆಕ್ಟರ್ರು ಹಾಳಾಗುವದಿಲ್ಲಾ, ಚಿನ್ನ ಎಲ್ಲಿಟ್ಟರೂ ಚಿನ್ನವೇ ಅಂತೆಲ್ಲಾ ಪುಸಲಾಯಿಸಿದರೂ ಜಪ್ಪೆನ್ನಲಿಲ್ಲ. ಕೊನೆಗೆ ನಾನು ನಮ್ಮ ಹುಡುಗರ ಮರ್ಮಕ್ಕೆ ತಾಗುವ ಅಸ್ತ್ರ ತೆಗೆಯಲೇಬೇಕಾಯ್ತು. " ಲೇ ಚಂದ್ರ್ಯಾ! ನೀ ನಿಜವಾಗ್ಲೂ ಗಂಡಸಾಗಿದ್ದರೆ ನಮ್ಮ ಜೊತೆ ಬಾ, ಇಲ್ಲಾಂದ್ರೆ ರೋಣದ ಸಂತ್ಯಾಗ ಬಳಿ ಇಟ್ಕೋಂಡು ಊರ ಕಡೆ ನಡಿ. ನೀ ಎಂಥ ಗಂಡಸಲೇ?" ಅಂತ ಅಂದುಬಿಟ್ಟೆ. ಅದು ತಾಕಬೇಕಾದ ಜಾಗಕ್ಕೆ ತಾಕಿ ತಾನೂ ಗಂಡಸು ಅಂತ ನಿರೂಪಿಸಲಾದರೂ ನಮ್ಮ ಜೊತೆ ಬರಬೇಕಾಯ್ತು.. ಅಂತೂ ಇಂತೂ ನಮ್ಮ ನಾಲ್ವರ ಸವಾರಿ ವಿ.ಎಫ್ ಪಾಟೀಲ್ ಹೈಸ್ಕೂಲಿನ ಪಕ್ಕದ ಹಳೆ ಥೇಟರಿನತ್ತ ಸಾಗಿತು. ದಾರಿಯಲ್ಲಿ ಜುಮ್ಮಿ ಮೊದಲ ಬಾರಿಗೆ ಆ ತರದ ಚಿತ್ರ ನೋಡಲು ಹೋಗುತ್ತಿರುವವರಿಗೆ "ಕೋಡ್ ಆಫ್ ಕಂಡಕ್ಟ್ಸ" ಹೇಳಿಕೊಡತೊಡಗಿದ, ಥೇಟರಿನಲ್ಲಿ ಚಿಕ್ಕವರನ್ನೂ ಬಿಡುವುದಿಲ್ಲವೆಂದೂ, ಅದು ದೊಡ್ದವರ ಚಿತ್ರವಾಗಿದ್ದರಿಂದ ನಮ್ಮ ವಯಸ್ಸು ಕೇಳಿದರೆ ಹದಿನೆಂಟು ಅಂತ ಹೇಳಬೇಕೆಂದೂ ಮತ್ತು ಯಾರಾದ್ರೂ ಕೇಳಿದ್ರೆ ಸುಳ್ಳು ಹೆಸರು ಹೇಳಬೇಕೆಂದೂ ತಾಕೀತು ಮಾಡಿದ. ನಾವೆಲ್ಲಾ ಗುರು ಭಕ್ತಿಯಿಂದ ಹೂಂಗುಟ್ಟಿದೆವು. ಕೊನೆಗೂ ಥೇಟರ್ ಬಳಿ ಬಂದಾಗ ಥೇಟರ್ ಖಾಲಿ ಹೊಡೆಯುತ್ತಿತ್ತು. ಅಲ್ಲಲ್ಲಿ ಚಿತ್ರದ ಪೊಸ್ಟರುಗಳನ್ನು ಅಂಟಿಸಿದ್ದರು ಮತ್ತು ಪೊಸ್ಟರಿನ ಕೆಲಬಾಗಗಳನ್ನು ನೀಲಿ ಬಣ್ಣದಿಂದ ಅಳಿಸಿದ್ದರು, ಜೊತೆಗೆ ಅಲ್ಲಿ ಗೋಡೆಯ ಮೇಲೆ ದೊಡ್ದದಾಗಿ "ವಯಸ್ಕರಿಗಾಗಿ ಮಾತ್ರ" ಎಂದು ಬರೆದಿದ್ದು ನೋಡಿ ನಾವೆಲ್ಲಾ ಒಮ್ಮೆ ಇಡೀ ಅಬ್ಬಿಗೇರಿಗೆ ಹಿರಿಯರಾದಂತೆ ಭಾಸವಾಯಿತು. ಒಳ ಹೊಕ್ಕು ಕೂತರೇ ಆಗಲೇ ಚಿತ್ರ ಶುರುವಾಗಿತ್ತು.

ಚಿತ್ರ ಇಂಗ್ಲೀಷನಲ್ಲಿದ್ದುದರಿಂದ ನಮಗಂತೂ ಅರ್ಥವಾಗುವ ಸಂಭವವೇ ಇರಲಿಲ್ಲಾ, ಆದರೂ ನಾನು ತಿಳಿದವನಂತೆ ಬಾಯಿಗೆ ಬಂದಂಗೆ ಅನುವಾದ ಮಾಡಿ ಉಳಿದವರ ಮುಂದೆ "ಶಾಣ್ಯಾ" ಅನ್ನಿಸಿಕೊಳ್ಲಲು ಯತ್ನಿಸಿದರೂ, ಆ ಮುಂಡೆವು ಕೇಳುವುದಕ್ಕಿಂತಲೂ "ನೋಡಲು" ತುಂಬಾ ಉತ್ಸುಕರಾದುದರಿಂದ ನನ್ನ ಪ್ರಯತ್ನಗಳು ಹುಸಿಯಾದವು. ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ ( ಯಾಕೆಂದರೆ ಜುಮ್ಮಿ ಆಡಂ, ಆಪಲ್ ತಿಂದ ಕೂಡಲೇ ಅವನಿಗೆ ಎಮೋಶನ್ ಬಂದು ಒಂದು ಮಹತ್ವದ ಘಟನೆ ಸಂಭವಿಸುತ್ತದೆ ಎಂದು ಹೇಳಿದ್ದ) . ಆದರೆ ಜುಮ್ಮಿ ಹೇಳಿದಂತೆ ಯಾವ ರೋಚಕ ಸನ್ನಿವೇಶವೂ ಬರಲೇ ಇಲ್ಲ ಮತ್ತು ಮುಖ್ಯವಾಗಿ ಆಡಂ, ಈವ್ ಚಿತ್ರದುದ್ದಕ್ಕೂ ನಮಗೆ ಬೆನ್ನು ತೋರಿಸಿಯೇ ಇರುತ್ತಿದ್ದುರಿಂದ ನಮಗೆ ಯಾವ ಮಹಾನ ಸಾಧನೆಯೂ ಆಗಲಿಲ್ಲ. ಆದರೂ ಜುಮ್ಮಿ ನಮ್ಮನ್ನೂ ಸಮಾಧಾನಿಸಿ ಒಮ್ಮೇಲೇ ಚಿತ್ರದ ಮದ್ಯೆ ಬೇರೆ ಯಾವುದೋ ಮಲಯಾಳಿ ಚಿತ್ರದ ತುಣುಕು ತೋರಿಸಿಯೇ ತೊರಿಸುತ್ತಾರೆಂದು ಹೊಸ ಆಸೆ ಹುಟ್ಟಿಸಿ, ಪೂರ್ತಿ ಚಿತ್ರ ಕಣ್ನಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದರೂ ಯಾವುದೋ ಅಂತಹ ಪವಾಡ ನಡೆಯಲೇ ಇಲ್ಲಾ ಮತ್ತು ಕೊನೆಗೂ ಆಡಂ ಆಪಲ್ ತಿನ್ನಲೇ ಇಲ್ಲಾ..

ಚಿತ್ರ ಮುಗಿದ ಮೇಲೆ ನಂಗೆ ಜುಮ್ಮಿಯ ಮೇಲೆ ಅಸಾದ್ಯ ಕೋಪ ಬಂದಿತ್ತು. ಆದರೆ ಚಂದ್ರ, ತನ್ನ ಗಂಡಸ್ತನ ನಿರೂಪಿಸಿದ ಸಾರ್ಥಕತೆ ಅನುಭವಿಸುತ್ತಿದ್ದ. ಸಣ್ಯಾ ಮಾತ್ರ ಸಮಾಜ ಮತ್ತು ಬಯಾಲಾಜಿಯ ಯಾವ ಯಾವ ಪಾಠಗಳನ್ನು ಚಿತ್ರ ಕವರ್ ಮಾಡಿತ್ತು ಅಂತ ಲೆಕ್ಕ ಹಾಕುತ್ತಿದ್ದ. ಜುಮ್ಮಿ ಕೊನೆಗೂ ಬಾಯಿ ಬಿಟ್ಟು " ಲೇ ಓರಿಜಿನಲ್ಲು ಫಿಲ್ಮಲ್ಲಿ ’ಎಲ್ಲಾ’ ಇರುತ್ತದೆ, ಈ ಥೇಟರು ಬೋ...ಮಕ್ಳು ಎಲ್ಲಾ ಕಟ್ ಮಾಡಿ ಬಿಸಾಕಿರುತ್ತಾರೆ" ಅಂತ ಗೋಳಾಡಿ, ನಮ್ಮೆಲ್ಲಾ ನಿರಾಶೆಗಳಿಗೆ ಥೇಟರಿನವರನ್ನು ಹೋಣೆಯಾಗಿಸಿ ನಿರಮ್ಮಳವಾದ. ನಾನು ಜುಮ್ಮಿಯನ್ನು ನಂಬಿದ್ದೆ ತಪ್ಪಾಯ್ತು ಅಂದುಕೊಂಡು ಉಳಿದವರನೆಲ್ಲಾ ಕರೆದುಕೊಂಡು ರೋಣದ ಸಂತೆ ಅಲೆಯಲು ನಡೆದೆ.

Sunday, July 20, 2008

ಸುಮ್ನೆ ದೇಶಾವರಿ ಮಾತುಕಥೆ..

ನಿನ್ನೆ ತಮ್ಮನಿಗೆ ಫೋನನಲ್ಲಿ ಹೇಳುತ್ತಿದ್ದೆ " ಲೇ ಇಲ್ಲಿ ಭಾರೀ ಮಳಿ ಹತ್ತೈತಿ, ಊರ ಕಡೆ ಎನ್ ಸುದ್ದಿ?" ಅಂತಾ.ಮಳೆ ಅಂದರೆ ಸಾಕು ಅವನ ಮೂಡೇ ಆಫ್ ಆಗಿ ಬಿಡುತ್ತೆ ಪಾಪ " ಎಲಾ ಇವನ ಇಲ್ಲಿ ಮೋಡ ಬಿತ್ತಿದ್ರೆ ಅಲ್ಲಿ ಮಳೆ ಆಗೈತಿ ನೋಡು, ಈ ಎಚ್,ಕೆ ಕೈ ಹಾಕಿದಾಗಲೇ ಎನೋ ಕಿತಾಪತಿ ಮಾಡ್ತಾನೆ ಅಂತ ಡೌಟಿತ್ತು " ಅಂತಾ ಬೆಂಗಳೂರಿನ ಮಳೆಗೂ, ಎಚ್,ಕೆ ಪಾಟೀಲರಿಗೂ ಲಿಂಕು ಸೇರಿಸಿ ಮಳೆಯ ಹೊಸ ಫಾರ್ಮುಲಾ ಹುಟ್ಟಿಸಿದ. ಮುಂದುವರೆಸಿ " ಯಣ್ಣಾ! ಹೆಸರು ಆಗ್ಲೇ ಹಳ್ಳ ಹಿಡಿದಾವು, ಜುಬ್ರ ಮಳಿನರ ಆದ್ರ ಶೇಂಗಾ ಜೀವಾ ಹಿಡಿತಾವ.ಒಂದು ದೊಡ್ದ ಮಳಿ ಅಗೋವರೆಗೂ ಉಳ್ಳಾಗಡ್ದಿ ಬಿತ್ತು ಮಾತ ಇಲ್ಲಾ! ಮಳಿ ಗೊತ್ತಿನದಲ್ಲಾ ಬ್ಯಾಡ ಅಂದ್ರೂ ನೇಗಿಲಾ ಹೊಡಿಸಿದಿ , ನೋಡೀಗ ಹೊಲದಾನ ಹೆಂಟಿ ಸಹ ಕರಗಿಲ್ಲಾ; ಅದರಾಗ ಹೆಂಗ ಬಿತ್ತಬೇಕು?. ತಿಳಿಲಿಲ್ಲಾ ಅಂದ್ರಾ ಮುಕಳಿ ಮುಚ್ಚಕೊಂಡು ಸುಮ್ನರಿಬೇಕು, ಈಗ ನೋಡು ಎಲ್ಲಾ ಅಡಿಪಾಲು ಬಾಳೆ ಆತು" ಅಂತಾ ಶುದ್ಧ ಗಾವಟಿ ಭಾಷೆಯಲ್ಲಿ ಮಳೆಯನ್ನೂ, ನನ್ನನ್ನೂ ಚೆನ್ನಾಗಿ ಉಗಿದು ಫೋನಿಟ್ಟ.

ಫೋನಿಟ್ಟ ಕೂಡಲೆ ಕಳೆದ ಮೂರು ವರುಶಗಳಿಂದ ’ಒಂದಾದರೂ ಗಂಡು ರಾಶಿ’ ಮಾಡಲೇಬೇಕೆಂದು ಅವ ನಡೆಸಿದ ಹತಾಶ ಯತ್ನಗಳನ್ನೆಲ್ಲಾ ನೆನೆದು ಪಾಪ ಎನಿಸಿತು. ಇದು ಕೇವಲ ನನ್ನ ತಮ್ಮನೊಬ್ಬನ ಹತಾಶೆಯ ನುಡಿಗಳಲ್ಲಾ, ಉತ್ತರ ಕರ್ನಾಟಕದಲ್ಲಿ ಒಣ ಬೇಸಾಯ ನಂಬಿ ಜೀವ ತೇಯುತ್ತಿರುವ ಎಲ್ಲಾ ರೈತರ ದಿನನಿತ್ಯದ ಅಳಲು. ಅವರಿಗೆ ಬರೀ ಪ್ರಕೃತಿಯಲ್ಲಾ, ಈ ವ್ಯವಸ್ಥೆಯೂ ಮೋಸ ಮಾಡುತ್ತಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ ಪ್ರತಿಯೊಂದು ರೈತ ಯೋಜನೆಗಳು ನೀರಾವರಿ ರೈತರನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗುತ್ತೆ. ಉದಾಹರಣೆಗೆ ರೈತರ ಪಂಪುಗಳಿಗೆ ಉಚಿತ ವಿದ್ಯುತ ನೀಡುವ ಯೋಜನೆಯನ್ನೇ ತೆಗೆದುಕೊಳ್ಳಿ ನಮ್ಮ್ಲಲ್ಲಿ ಎಷ್ಟು ಜನರಿಗೆ ಪಂಪುಸೆಟ್ಟುಗಳಿವೆ? ನಮ್ಮುರ ಕಡೆಗಳಲ್ಲಿ ಸುಮಾರು ೪೦೦ ಅಡಿ ಕೊರೆಸಿದರೂ ನೀರು ಬರುವದಿಲ್ಲಾ, ಅಂತದ್ರಲ್ಲಿ ಎಲ್ಲಿಂದ ಪಂಪುಸೆಟ್ಟು ಬರಬೇಕು?. ನೀರಾವರಿಗೆ ಶೇ೧೧ ಬಜೆಟ್ಟಿನಲ್ಲಿ ಅನುದಾನ ನೀಡಲಾಗುತ್ತೆ. ನಮ್ಮಲ್ಲಿ ಎಲ್ಲಿಂದ ಬರಬೇಕು ನದಿ,ನೀರಾವರಿ? ಅದೇ ಖಾತರಿಯಿಲ್ಲದ ಮಳೆಯೊಂದಿಗೆ ವರ್ಶಪೂರ್ತಿ ಗುದ್ದಾಡಬೇಕು. ಒಮ್ಮೆ ಮಳೆ ಬಾರದೆ ಕಾಡಿದರೆ( ೨೦೦೬) ಮಗದೊಮ್ಮೆ ಅಡ್ಡ ಮಳೆ ಬಿದ್ದು (೨೦೦೭)ಬೆಳೆದ ಬೆಳೆಗಳನೆಲ್ಲಾ ಅಡಿಪಾಲು ಮಾಡಿಬಿಡ್ದುತ್ತವೆ. ಎಲ್ಲಾ ಮೀರಿಯೂ ಉತ್ತಮ ಬೆಳೆ ಬಂದರೆ ನಮ್ಮ ತಾಯಾಣೆಗೂ ಆ ವರ್ಷ ಸರಿಯಾದ ಬೆಲೆ ಇರುವದೇ ಇಲ್ಲಾ. ಯಾವ ಸೌಬಾಗ್ಯಕ್ಕೆ ನಮ್ಮ ರೈತರು ಇನ್ನೂ ಕೃಷಿಯನ್ನೇ ನೆಚ್ಚಬೇಕು?. ನಮಗಾದರೋ ಕೃಷಿ ಆದಾಯದ ಒಂದು ಮೂಲ, ಆದರೆ ಅದನ್ನೆ ನಂಬಿ ಬದುಕುತ್ತಿರುವವರ ಪಾಡೇನು? ಕಳೆದ ಮೂರ್ನಾಕು ವರ್ಷಗಳಿಂದ ನಮ್ಮ ಊರಿನಲ್ಲಿ ಸರಿಯಾದ ಫಸಲೇ ಇಲ್ಲಾ. ಹೀಗಾದರೆ ದುಬಾರಿಯ ದಿನಗಳಲ್ಲಿ ಅವರು ಬದುಕುವದಾದರೂ ಹೇಗೆ?. ಕೆಲ ವರ್ಷಗಳಿಂದ ’ಕೃಷಿ ವಿಮೆ’ ಅನ್ನುವ ಭಾರೀ ಪ್ರಚಾರದ ಯೋಜನೆಯೊಂದು ಜಾರಿಗೆ ಬಂತು.ನನ್ನ ತಮ್ಮನೂ ನಾಲ್ಕಾರು ಕಚೇರಿ ಓಡಾಡಿ, ಎಲ್ಲಾ ಉತಾರ,ದಾಖಲೆ ತಂದು ವಿಮೆ ಮಾಡಿಸಿದ್ದ. ಯಥಾ ಪ್ರಕಾರ ಆ ವರ್ಷವೂ ಮಳೆ ಬಾರದೆ ಹೋಯ್ತು. ನಂತರ ಕೆಲ ವರ್ಷಗಳ ನಂತರ ವಿಮಾದಾರರ ಅರ್ಹ ಫಲಾನುಬವಿಗಳ ಪಟ್ಟಿ ನೋಡಿದರೆ, ನಮ್ಮ ಹೆಸರೇ ಇಲ್ಲಾ. ನಮ್ಮ ಪಕ್ಕದ ಜಮೀನುಗಳಿಗೆ ಹಣ ಬಂದಿದ್ದರೆ ನಮ್ಮ ಹೆಸರೇ ಇಲ್ಲಾ. ಇಡಿ ಊರಿನಲ್ಲಿ ಬರೀ ನಮ್ಮ ಹೊಲಕ್ಕಷ್ಟೆ ಮಳೆ ಬಂದು, ನಮ್ಮ ಹೊಲದಲ್ಲಷ್ಟೆ ಬೆಳೆ ಬೆಳೆಯಲು ಸಾದ್ಯವಾ?. ನನಗಂತೂ ಸಿಕ್ಕಾಪಟ್ತೆ ರೇಗಿ ಹೋಗಿತ್ತು. ತಮ್ಮನಂತೂ ಪಂಚಾಯಿತಿಗೆ ಹೋಗಿ " ಯಾವಾ ಸೂ..ಮಗ ನಿಮಗ ಸಾಲಿ ಕಲಿಸಿದ್ದು? ಹೊಟ್ಟಿಗೆ ಅನ್ನ ತಿಂತಿರೋ ಬ್ಯಾರೆ ಎನರ ತೀಂತಿರೋ, ಬರ ಅಂತ ಬಂದ್ರ ಎಲ್ಲಾರ ಹೊಲಕ್ಕು ಬರುತ್ತೆ, ಒಬ್ಬರ ಹೊಲಕ್ಕೆ ಮಳಿ ಆಗಿ, ಇನ್ನೋಬ್ಬರ ಹೊಲಕ್ಕೆ ಆಗದೇ ಇರುತ್ತನ್ರಲೆ" ಅಂತಾ ಒದರಾಡಿ ಅವರ ಎದುರಿಗೆ ತಹಶೀಲ್ದಾರರಿಗೆ ಮನವಿ ಕೊಟ್ಟು ಬಂದಿದ್ದ. ನಂತರ ಗ್ರಾಹಕ ನ್ಯಾಯಲಯಕ್ಕೆ ಕೇಸು ಹಾಕಿದೆವು. ಕೊನೆಗೂ ಕೇಸು ನಮ್ಮಂತೆ ಆಯಿತಾದರೂ ಲಾಯರಿಗೆ ಶೇ೩೫ ಫೀ ಕೊಟ್ಟು ಉಳಿದದ್ದನ್ನು ಪಾಲಿಗೆ ಬಂದದ್ದು ಪಂಚಾಮೃತ ಅಂತ ಸುಮ್ಮನಾದೆವು. ನಮ್ಮದಲ್ಲದ ತಪ್ಪಿಗೆ ನಾವೇಕೆ ಪರದಾಡಬೇಕೊ ನಾನರಿಯೆ. ನಮ್ಮಲ್ಲಿ ಅನೇಕ ರೈತರ ಜಮೀನುಗಳ ಅವರ ಹೆಸರನಲ್ಲಿ ಇಲ್ಲವೇ ಇಲ್ಲಾ! ಪರಾಂಪರಾಗತವಾಗಿ ಅವನ್ನೆ ಉತ್ತುತ್ತಾ ಬಂದಿದ್ದಾವೆ. ಹಿಂತವರಿಗೆ ಯಾವ ಸರಕಾರಿ ಯೋಜನೆಗಳೂ ತಲುಪುವುದೇ ಇಲ್ಲಾ. ಆದರೆ ಅವರಿಗೆ ಅವುಗಳ ಪರಿವೇಯೇ ಇಲ್ಲಾ.

ಸುಮಾರು ದಿನಗಳ ಹಿಂದೆ ಬ್ಲಾಗೋಂದರಲ್ಲಿ(ಸುಶ್ರುತನ ಬ್ಲಾಗ್ ಅನಿಸುತ್ತೆ, ಸರಿಯಾಗಿ ನೆನಪಿಲ್ಲಾ)ಯಾವೂದೋ ಚರ್ಚೆಯೋಂದರಲ್ಲಿ , ಒಬ್ಬ ಮಹಾಶಯ ಪ್ರತಿಕ್ರಿಯಿಸುತ್ತಾ ನಮ್ಮ ರೈತರಲ್ಲಿ ಮಾರ್ಕೆಟಿಂಗ ತಂತ್ರಗಳೇ ಇಲ್ಲಾ.ಇಳುವರಿ,ಪೂರೈಕೆ,ಬೇಡಿಕೆ ಇತ್ಯಾದಿಗಳನ್ನು ಪ್ರಸ್ತಾಪಿಸಿ ನಮ್ಮ ರೈತರು ಪೆದ್ದರು ಅಂತಾ ಶರಾ ಬರೆದು ಬಿಟ್ಟಿದ್ದ. ನನ್ನ ಪ್ರಕಾರ ಯಾವೋಬ್ಬ ರೈತನೂ ಮಾರ್ಕೇಟಿಂಗನಲ್ಲಿ MBA ಮಾಡುವುದಿಲ್ಲಾ ಮತ್ತು ಯಾವುದೋ ವಿಶ್ವ ವಿದ್ಯಾಲಯದ ಪಧವೀದರರಂತೂ ಅಲ್ಲವೇ ಅಲ್ಲಾ. ಅಥವಾ ಕೃಷಿ ಪದವಿ ಮಾಡಿದವರು ಹೊಲಕ್ಕೆ ಬಂದು ಊಳುವುದೂ ಇಲ್ಲಾ. ಯಾವುದೇ ಅಡ್ದಕಸುಬಿ ಕಂಪನಿಗೆ ಮನೆಹಾಳು ತಳಿ ಕಂಡು ಹಿಡಿದು ಕೊಟ್ಟು ದುಡ್ದು ಮಾಡುವುದರಲ್ಲೆ ಅವರು ಬ್ಯುಸಿ. ಇನ್ನು ಕೆಲವರು ಕೃಷಿ ಇಲಾಖೆ ಸೇರಿ ದೊಡ್ದ ದೊಡ್ದ ಹೆಗ್ಗಣುಗಳಾಗಿಬಿಡುತ್ತಾರೆ. ಅಂತದುರಲ್ಲಿ ನಮ್ಮ ರೈತರಿಗೆ ಇಳುವರಿ,ಪೂರೈಕೆ,ಬೇಡಿಕೆ ಅಂದರೆ ಎಲ್ಲಿಂದಾ ತಿಳಿಯಬೇಕು?. ಬೇಕಾದರೇ ಕೇಳಿ ನೋಡಿ ಅವರು ಹೇಳುವುದೇ ಇಷ್ಟು "ಯಪ್ಪಾ ಭೂಮಿ ತಾಯಿ ಕಣ್ಣ್ ತೆಗೆದ್ರ ಎನ್ ಕಡಿಮೆ ಮಾರಯಾ.ಆಕಿ ಮನಸ್ಸು ಮಾಡಬೇಕಷ್ಟ!" ಅಂತಾ ನಿರಾತಂಕವಾಗಿ ತಮ್ಮೆಲ್ಲಾ ಕಷ್ಟಗಳನ್ನು ಭೂಮಿ ತಾಯಿ ಮೇಲೆ ಹಾಕಿ ನಿರಮ್ಮಳವಾಗಿರುತ್ತಾರೆ.

ಒಂದೇ ಒಂದು ಹಂಗಾಮಿನ ಬೆಳೆ ಬಾರದೇ ಇದ್ದರೂ ಬಾಯಿ ಬಡಿದುಕೂಂಡು ರಾಜಕೀಯ ಮಾಡಿಬಿಡುವ ಹಳೇ ಮೈಸುರಿನ ಕಡೆಯ " ಶ್ರೀಮಂತ" ರೈತರೆಲ್ಲಿ? ಮತ್ತು ಮಳೆ ಆಗದೆ ಹೋದರೂ ಬದುಕು ಕಟ್ಟಿಕೊಳ್ಳಲು ಹುಟ್ಟಿದ ಊರು,ಸಾಕಿದ ದನಗಳನ್ನು ಸ್ತಿತಿವಂತರ ಮನೆಗೆ ಹೊಡೆದು ಬೆಂಗಳುರು,ಗೋವಾಕ್ಕೆ ಗುಳೆ ಹೋಗುವ ಬಾಯಿ ಸತ್ತ ನನ್ನ ರೈತರೆಲ್ಲಿ?. ಆದರೂ ರೈತರು ಅಂದ ಕೂಡಲೇ ನಮ್ಮ ರಾಜಕಾರಣೆಗಳಿಗೆ ನೆನಪಾಗುವುದು ಕಾವೇರಿ,ಕಬ್ಬು,ನೀರಾವರಿ ಮತ್ತು ಅದರ ಸುತ್ತಲಿನ ರಾಜಕೀಯ. ನನ್ನ ಜನ ಸಾಯುತ್ತಲೇ ಇರುತ್ತಾರೆ, ಇವರು ಅವರ ಸಾವಿನ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇರುತ್ತಾರೆ. ಹಾಗೆ ನೋಡಿದ್ರೆ ಇಷ್ಟೆಲ್ಲಾ ಕಷ್ಟಗಳ ನಡುವೆ ಅವರಿಗೆ ಬದುಕಲು ಕಾರಣಗಳನ್ನು ಹುಡುಕಬೇಕು ಅಲ್ವಾ?

Sunday, June 29, 2008

ಇದು ಕಥೆಯಲ್ಲಾ !!!

"ನಾನು ಸೈನ್ಸ ಮಾಡಿ, ಈ ಸಾಫ್ಟವೇರಿಗೆ ಬಂದಿದ್ದೇ ತಪ್ಪಾಯ್ತು" ಹಾಗಂತ ನಂಗೆ ಅನಿಸಲು ಇದ್ದ ಕಾರಣಗಳು ತೀರಾ ಗಂಭೀರವಾದವುಗಳೇನಲ್ಲಾ;ಮೊದಲನೆಯದಾಗಿ ನಂಗೆ ಚನ್ನೈಯಲ್ಲಿ ಬೇರೆ ಯಾರು ಮಿತ್ರರೇ ಇರಲಿಲ್ಲ.ಎರಡನೆಯದಾಗಿ ಟಿ,ವಿಯಲ್ಲಿ ಯಾವುದೇ ಮಸಾಲಾ ಕಾರ್ಯಕ್ರಮಗಳಿರಲಿಲ್ಲಾ ಮತ್ತು ನಾನು ತಂದಿದ್ದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ ಆಗಿತ್ತು(ಇನ್ನುಳಿದ ಕಾರಣಗಳನ್ನು ಸೆನ್ಸಾರ್ ಮಾಡಲಾಗಿದೆ :)). ಜೊತೆಗೆ ಹಿಂದಿನ ದಿನ ನನ್ನ ಲೀಡ್ ಜೊತೆ ನಡೆದ ಜಗಳವೂ ನನ್ನ ಈ ಏಕಾಏಕಿ ನಿರ್ಧಾರದ ಹಿಂದಿನ ಪ್ರೇರಣೆಯೂ ಆಗಿರಬಹುದು.ದುತ್ತನೇ ಆ ಕ್ಷಣದಲ್ಲಿ ಹೇಳದೇ ಕೇಳದೇ (ಹೇಳಿದರೂ ಸಹ ನಂಗೆ ಆಗ ಏನು ಮಣ್ಣು ತಿಳಿಯುತ್ತಿರಲಿಲ್ಲ ಬಿಡಿ) ಅವರಿವರ ವಶೀಲಿ ಹಿಡಿದು ಧಾರವಾಡದ ಜೆ ಎಸ್ ಎಸ್ ಸೈನ್ಸ ಕಾಲೇಜಿಗೆ ನನ್ನನ್ನು ಎತ್ತಿ ಹಾಕಿ ಬಂದ ಅಪ್ಪನ ನೆನಪಾಯ್ತು, ನನ್ನ ಈಗಿನ ಎಲ್ಲಾ ಕಷ್ಟಗಳಿಗೂ ಅಪ್ಪನೇ ಕಾರಣ ಎಂದೇನಿಸಿ ಅಪ್ಪನ ಮೇಲೆ ಭಯಂಕರ ಕೋಪ ಉಕ್ಕಿ ಬಂತು, ಜೊತೆಗೆ ಚೆಂದಾಗಿ ಪದ ಹೇಳುತ್ತಾ ಕನ್ನಡ ಕಲಿಸುತ್ತಿದ್ದ ಮಮತಾ ಮೇಡಂರ ನೆನಪು ಸಹ ಸೇರಿ " ಅಪ್ಪ ನನ್ನ ಜೀವನವನ್ನು ಹಾಳು ಮಾಡಿಬಿಟ್ಟ" ಎಂದು ನಾನು ಹಾಳಾದ ಕಾರಣವನ್ನು ಅಪ್ಪನ ಮೇಲೆ ಸಲೀಸಾಗಿ ಎತ್ತಿ ಹಾಕಿದ ಮೇಲೆ ಮನಸ್ಸಿಗೆ ತುಸು ನಿರಾಳವಾದಂತಾಯ್ತು.

ಕೆಟಲಿನಲ್ಲಿ ಮಾಡಿದ ಚಹಾ ಚೆನ್ನಾಗಿರುವುದಿಲ್ಲಾ ಅಂತ ತಿಳಿದಿದ್ದರೂ ಕೆಳಗೆ ಹೋಗಿ ಚಹಾ ಕುಡಿಯಲಾರದ ನನ್ನ ದರಿದ್ರತನಕ್ಕೆ ಎರಡೆರಡು ಎಕ್ಸಟ್ರಾ ಟೀ ಬ್ಯಾಗ ಅದ್ದಿ ಅದೇ ’ಕಡಕ್ ಚಾ’ ಎಂದುಕೊಂಡು ಚಹ ಗುಟುಕರಿಸತೊಡಗಿದೆ, ಯಥಾಪ್ರಕಾರ ಚಹಾ ಒಗರು ಒಗರಾಗಿ ರುಚಿ ಎನಿಸಿತು, ಆ ಕ್ಷಣದಲ್ಲಿ "ದೇವರು ಚಹಾದಲ್ಲೂ ಸಹ ಇಷ್ಟೊಂದು ಸುಖವಿಟ್ಟಿದ್ದಾನೆ" ಎಂಬ ಹೊಸ ಸತ್ಯ ಹೊಳೆದಂಗಾಗಿ ಎನೋ ಹೊಸದನ್ನು ಕಂಡು ಹಿಡಿದ ಧನ್ಯತೆ ಮೂಡಿ ಬಂತು.ಟಿ.ವಿಯಲ್ಲಿ ತಮಿಳಿನ ಧನುಷ್ , ನಯನತಾರಾಳನ್ನು ನಾನಾ ನಮೂನೆಯಲ್ಲಿ ಅಪ್ಪಿ ಕೊಂಡು, ತಬ್ಬಿಕೊಂಡು ಡ್ಯುಯೇಟ್ ಹಾಡುತ್ತಿದ್ದ, ಆ ಘನಘೋರ ದೃಶ್ಯ ಕಂಡು ನನ್ನ ಎಳೆಮನಸ್ಸು ಘಾಸಿಗೊಂಡು " ಎಂಥಾ ಸೂ... ಮಕ್ಳು ಎಂಥೆಂತಾ ಮಾಲ್ ಜೊತೆ ಡ್ಯಾನ್ಸ್ ಹೊಡಿತಾರಾ, ನಮ್ ಜೀವನ ಮಾತ್ರ ಬರೀ ನೋಡುದ ಆತು" ಎಂದೆನಿಸಿ ಭಲೆ ಸಂಕಟವಾಯ್ತು. ಜೊತೆಗೆ ನನ್ನ ಹಾಳಾದ ನನ್ನ ಟೀಮಿನಲ್ಲೂ ಯಾವುದೇ ಸುಂದರ ಫಿಗರುಗಳಿಲ್ಲಾ ಮತ್ತು ಇದ್ದ ಎಕೈಕ ನಾರ್ಥಿ ಫಿಗರಿಗೆ ’ಬಾಯ್ ಫ್ರೆಂಡ’ ಇದ್ದಾನೆ ಎಂದು ನೆನಪಾಗಿ ಮನಸ್ಸು ಮಮ್ಮಲ ಮರುಗಿತು. ಬಾಯ್ ಫ್ರೆಂಡ್ ಇದ್ದರೂ ಅವಳು ಆ ಪಾಟಿ ಎಕ್ಸಪೋಸ್ ಮಾಡ್ತಾಳಲ್ಲಾ ಆ ನನ್ನ ಮಗನ ’ಅದು’ ಉರಿಯುವದಿಲ್ಲವಾ? ಎಂದೆನಿಸಿ ಈ ಬಾರಿ ನನ್ನ ಮಗ ಚೆನ್ನಾಗಿ ಕುಡಿದಾಗ ಅವನ ಬಾಯಿ ಬಿಡಿಸಬೇಕೆಂದು ಸ್ಕೆಚು ಹಾಕಿದೆ.ಕೈಲಿರುವ ಚಹಾ ಬರಿದಾಗತೊಡಗಿತ್ತು ಮತ್ತು " ಚಹ ಜಾಸ್ತಿ ಕುಡಿದರೆ ಇನ್ನೂ ಕರ್ರಗಾಗುತ್ತಾರೆ" ಎಂಬ ನಮ್ಮೂರ ಹುಡುಗರ "ಬ್ಯೂಟಿ ಟಿಪ್" ನೆನಪಾಗಿ, ನಾನೂ ಕರ್ರಗಾಗುತ್ತಿದ್ದಂತೇ ಅನಿಸಿ ಸಂಜೆಯೇ ಬೇರೆ ಯಾವುದೋ " ಮೆನ್ಸ ಕ್ರೀಮು" ಕೊಳ್ಳುವುದೆಂದು ನಿರ್ಧರಿಸಿದೆ.

ರೂಮಿನಲ್ಲಿ ಥಂಡಿ ಜಾಸ್ತಿ ಅನಿಸಿ ಎ.ಸಿ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲೆ ಮತ್ತೆ ಸೆಕೆ ಅನಿಸತೊಡಗಿ ಅಂಗಿ, ಬನಿಯನ್ನು ಕಳಚಬೇಕೆನಿಸಿದ ಕೂಡಲೇ ಕಳಚಿ ಅವೆರಡನ್ನೂ ದಿಕ್ಕಿಗೊಂದು ತೂರಾಡಿ ಸಿ.ಅಶ್ವತರ ದ್ವನಿ ಅನುಕರಿಸಿ " ಮುಕ್ತ , ಮುಕ್ತ , ಮುಕ್ತ ಆಆಆಆಆಆಅ" ಎಂದು ಅರಚಿ ಮುಕ್ತತೆ ಅನುಭವಿಸಿದೆ. ಇನ್ನೂ ಮಡಚದೇ ಇದ್ದ ಹಾಸಿಗೆ,ರಗ್ಗುಗಳು,ಖಾಲಿ ಬಿಸ್ಲೇರಿ ಬಾಟಲ್ಲುಗಳು, ನನ್ನ ಇತ್ತಿಚಿನ ಕಥೆ ಬರೆವ ಹುಚ್ಚಿನ ಫಲವಾಗಿ ಪೂರ್ಣವಾಗದೇ ಅರ್ಧಕ್ಕೆ ಗರ್ಭಪಾತವಾದ ಅರ್ಧರ್ದ ಕಥೆಗಳ ಹಾಳೆಗಳು ಇಡೀ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿರುವದನ್ನು ಕಂಡು ’ವಾಯಕ್’ ಎನಿಸಿ ರೂಮ ಬಾಯ್ ಕರೆಯಬೇಕೆನಿಸಿದರೂ " ಬ್ಯಾಚುಲರ ರೂಂ ಹಿಂಗಿದ್ರೆ ಚಂದ" ಅಂತಾ ನನ್ನ ಅಂತರಂಗಕ್ಕೆ ಹೊಳೆದಂಗಾಗಿ ಹಾಸಿಗೆಯ ಮೇಲೆ ಡೈವ್ ಹೊಡೆದು ರಗ್ಗು ಎಳೆದುಕೊಳ್ಳತೊಡಗಿದೆ " ಲೋ! ಮಾರಿ ಮ್ಯಾಲ ಬಿಸಿಲ ಬಿದ್ರೂ, ಮುಕಳಿ ಮ್ಯಾಕ ಮಾಡಿ ಹೆಂಗ ಬಿದ್ದಾನ ನೋಡು ಸಂತ ಬಾಡ್ಯಾ" ಅಂತ ನನ್ನ ಹುಬ್ಬಳ್ಳಿ ಅಮ್ಮ ಕ್ಯಾಕರಿಸಿ ಉಗಿದಂಗಾಗಿ ಗಪ್ಪನೇ ಎದ್ದು ಕೂತು ಮತ್ತೆ ಎಲ್ಲಾ ಚಾನೆಲ್ಲು ಸ್ಕ್ಯಾನು ಮಾಡಿ " ಬಂಗಾರಿ ಬಾರೆ ನೀ ಬುಲ್ ಬುಲ್" ಹಾಡು ಕಂಡ ಕೂಡಲೆ ನಿಲ್ಲಿಸಿ ನಾನೂ ಸಹ ಬುಲ್ ಬುಲ್ ಎಂದು ಹಾಡತೊಡಗಿದೆ. ಆ ಆಟವೂ ಸ್ವಲ್ಪ ಹೊತ್ತಿಗೆ ಬೇಜಾರಾಗಿ , ಮಾಡಲು ಬೇರೆ ಕೆಲ್ಸವಿಲ್ಲದ್ದಕ್ಕೆ ’ ಅದಾದರೂ’ ಮಾಡಿ ಬರೋಣ ಅಂತ "ದಿ ಹಿಂದೂ" ಪೇಪರ್ ಹಿಡಿದುಕೊಂಡು ಪಾಯಖಾನೆಗೆ ಹೋಗಿ ಕಮೋಡಿನ ಮೇಲೆ ಅಂಡು ಊರಿ ಕುಳಿತೆ. ಮೊಟ್ಟ ಮೊದಲ ಬಾರಿ ಕಮೋಡನ್ನು ಕಂಡು ಬೆಚ್ಚಿ ಬಿದ್ದು ಅದರ ಮೇಲೆ ಕೂಡ್ರುವ ಬಗೆ ತಿಳಿಯದೇ ಪೇಚಾಡಿದ್ದು ಕಂಡು ನಗು ಒತ್ತರಿಸಿಕೊಂಡು ಬಂತು. ಈಗ ನಾನೂ ಸಹ ಬಹಳ "ಮುಂದುವರೆದವರ" ಲಿಸ್ಟಿನಲ್ಲಿರುವದರಿಂದ ಈಗ ಕಮೋಡಿನಲ್ಲಿಯೇ ಎಲ್ಲಾ ಸುರಾಗ ,ಸುಲಲಿತ ಅನಿಸುತ್ತದೆ.

ಹೊತ್ತು ಕಳೆಯಲು ಏನಾದರೂ ಮಾಡಲೇಬೇಕು ಅನ್ನಿಸಿ ನನ್ನ ಮೊಬೈಲು ತೆಗೆದು ನನ್ನ ಕಾಲೇಜು ಮಿತ್ರರಿಗೆ ಫೋನಾಯಿಸತೊಡಗಿದೆ.ಒಂದರಡು ಮಾತು ಮುಗಿಯುವಷ್ಟರಲ್ಲಿ " ಮತ್ತೆ ನಿನ್ನ ಕಡೆ ಏನು ಸಮಾಚಾರ?", " ಮುಂದ" ," ಮತ್ತೇ?" ಇವೇ ಜಾಸ್ತಿಯಾಗಿ "ಮತ್ತೆ ಬೆಂಗಳೂರಿಗೆ ಬಂದಾಗ ಈ ಬಾರಿ ಖಂಡಿತ ಭೇಟಿ ಆಗೊಣ! ಎಲ್ಲಾರೂ ಸೇರಿ ಭಾಳ ದಿನ ಆದ್ವು" ಅಂತ ಅದೇ ಹಳೆ ಸವಕಲು ಡೈಲಾಗು ಬಿಟ್ಟು ’ಫೊನಾಯಣ’ ಮುಗಿಸಿದೆ. ಆದರೂ ಗಂಟೆ ಗಟ್ಟಲೇ ( ದಿನಗಟ್ಟಲೇ(?))ತಮ್ಮ ಗರ್ಲ್ ಫ್ರೇಂಡುಗಳ ಜೊತೆ ಹರಟುವ ನನ್ನ ಮಿತ್ರರ ನೆನಪು ಬಂದು " ನನ್ ಮಕ್ಳು ಅಷ್ಟೋತ್ತು ಮಾತಾಡಲು ವಿಷಯಯವಾದ್ರು ಏನಿರುತ್ತೆ?" ಅಂತಾ ಅನಿಸಿದರೂ, ಮೊಬೈಲು ಹೊಂದಿದ ಲಕ್ಷ ಲಕ್ಷ ಹುಡುಗಿಯರಲ್ಲಿ ನನ್ನೊಂದಿಗೆ ಹರಟಲು ಒಬ್ಬ ಹುಡಿಗಿಯನ್ನೂ ಅನುಗ್ರಹಿಸದ ಭಗವಂತನ ತಾರತಮ್ಯಕ್ಕೆ ತುಂಬಾ ಸಿಟ್ಟು ಬಂದರೂ ಏನೂ ಕಿಸಿಯಲಾಗದ ಕಾರಣ ಎಲ್ಲಾ "ವಿಧಿ ವಿಪರ್ಯಾಸ" ಎಂದುಕೊಂಡು ಸುಮ್ಮನಾಗಬೇಕಾಯಿತು.

ಮತ್ತೆ ಮನಸ್ಸು ಬಡ್ದಿಮಗಂದೂ ಮೂಲ ಪ್ರಶ್ನೆಯಡೆಗೆ ತಿರುಗಿ "ನಾನು ಸೈನ್ಸ್ ಮಾಡಿರದೇ ಇದ್ದರೆ ಎನಾಗಿರುತ್ತಿತ್ತು?" ಎಂದು ಊಹಿಸತೊಡಗಿತು. ವರ್ಷಕ್ಕೋಮ್ಮೆ ಸಿಗುವ ಹೈಕಿಗಾಕಿ ವರ್ಷಪೂರ್ತಿ ಹಲ್ಲು ಗಿಂಜಿ ಬಾಲ ಅಲ್ಲಾಡಿಸುವ ಈ ಹಾಳು ಸಾಫ್ಹ್ಟವೇರ್ ಬದುಕಿಗಿಂತ ಅಬ್ಬೀಗೇರಿಯಲ್ಲಿ ಹೊಲ ಮನಿ ನೋಡಿಕೊಳ್ಳುತ್ತ ’ಗೌಡಕಿ’ ಮಾಡುವುದೇ better option ಅನಿಸಿತು ಮತ್ತು ನಾನು ಸೈನ್ಸನ ಹಿಂದೆ ಬಿದ್ದು ಧಾರವಾಡಕ್ಕೆ ಹೋಗದೇ ಇದ್ದರೇ ಹತ್ತನೇ ವರ್ಗದವರೆಗೂ ನನ್ನೋಂದಿಗೆ ಓದಿದ್ದ ನನ್ನ ಕನಸಿನ ಕನ್ಯೆ ಸುಮಾ( ಹಾಜರಾತಿ ಪ್ರಕಾರ) ಉರ್ಫ್ ಸುಮವ್ವ( ಅವರ ಮನೆಯವರ ಪ್ರಕಾರ) ಆಲಿಯಾಸ್ ಸುಮಿ( ಅವಳ ಗೆಳತಿಯರ ಪ್ರಕಾರ) ಕೊನೆಯದಾಗಿ ಸುಧಾರಾಣಿ ( ನಮ್ಮೂರ ಪಡ್ಡೆಗಳ ಪ್ರಕಾರ)ನನ್ನವಳಾಗಿರುತಿದ್ಲಾ? ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಊಹಿಸಿಕೊಂಡ ಮೇಲೆ ಮನಸ್ಸಿಗೆ "ನಂದೂ ಅಂತ ಪ್ರೀತಿಸುವ ಜೀವ" ಸಿಕ್ಕಂಗಾಗಿ ಮನಸ್ಸಿಗೆ ನಿರಾಳವೆನಿಸಿತು.ಬಡ್ಡಿಮಗ ಡಿಂಗ್ರಿಯ ಮಾತು ಕೇಳಿ ೯ ನೆಯ ವರ್ಗದಲ್ಲೇ "ಕಣ್ಣು ಕಮಲ, ಸಂಪಿಗೆ ನಾಸಿಕ, ತೊಂಡೆ ತುಟಿ" ಇತ್ಯಾದಿ ಇತ್ಯಾದಿ ಬಲ್ಲ ಉಪಮೇಯಗಳನ್ನು ಬಳಸಿ, ಕೊನೆಯಲ್ಲಿ ’ಚಂದ್ರ ಇರುವುದು ಬಾನಿನಲ್ಲಿ, ಕಮಲ ಇರುವುದು ಕೆಸರಿನಲ್ಲಿ, ನೀನು ಇರುವುದು ನನ್ನ ಹೃದಯದಲ್ಲಿ” ಅಂತೆಲ್ಲಾ ಕ್ರಿಯೇಟಿವಿಟಿಯಿಂದ ಬರೆದಿದ್ದ ನನ್ನ ಜೀವನದ ಮೊದಲ ಪ್ರೇಮ ಪತ್ರ ಸುಮಾಳ ಕೈಗೆ ಸಿಗದೆ( ಇದೂ ಸಹ ಡಿಂಗ್ರಿಯ ಐಡಿರಿಯಾದ ಪುಣ್ಯ ಫಲ)ಅವರ ಮನೆಯ ಆಳು ಮುತ್ಯಾನ ಕೈಗೆ ಸಿಕ್ಕು, ನಂತರ ಅವರಪ್ಪನ Via ಸೈನ್ಸ ಮಾಸ್ತರ್ ಲೋಕಾಪೂರನ ಕೈಗೆ ಸಿಕ್ಕು ಭಲೇ ಧರ್ಮ ಸಂಕಟಕ್ಕೀಡಾಗಿಸಿತು. ಆ ಲೋಕಾಪುರ ನನ್ನ ಕರೆದು " ಗೌಡ್ರು ಸಮುದ್ರದಂಗ ಅದಾರ, ಹೆಂಥಾವ್ರ ಹೊಟ್ಟ್ಯಾಗ ಎಂಥಾ ಮಗ ಹುಟ್ಟಿದೆ ಲೇ" ಅಂಥ ನನ್ನ ಹುಟ್ಟನ್ನೆ ಅವಮಾನಿಸಿ ಅಪ್ಪನನ್ನು ಸಮುದ್ರಕ್ಕೆ ಹೋಲಿಸಿ, ನನ್ನನ್ನು ಊರ ಮೂಂದಿನ ಅಗಸರ ಕೆರೆಗಿಂತಲೂ ಕೀಳಾಗಿಸಿದ ಈ ಸೈನ್ಸ್ ಮಾಸ್ತರು ಸಹ ನಂಗೆ ಸೈನ್ಸ ಮೇಲೆ ಸಿಟ್ಟು ಬರಲು ಕಾರಣವಾ? ಎಂದು ಗುಮಾನಿ ಬರತೊಡಗಿತು. ನಮ್ಮ ಈ ಪ್ರೇಮ ಪತ್ರವೆಂಬ ಜೀವನದ ಶ್ರೇಷ್ಠ ಕೃತಿಯ ಫಲವಾಗಿ ಅಲ್ಲಿಯವರೆಗೂ " ಗೌಡ್ರ ಮಗಾ ಭಾಳ ಶಾಣ್ಯಾ" ಅಂತಾ ಮುಕುಟವಿಲ್ಲದ ರಾಜನಂತಿದ್ದ ನನಗೆ " ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ" ಅನ್ನುವ ಗಾದೆಗೆ ಉದಾಹರಣೆಯಾಗಿಸಿತು.ಇದರ ಜೊತೆಗೆ ಈ ಪ್ರಸಂಗದಿಂದ ಸುಮಾ ಸಹ "ನಾನು ನಿನ್ನ ಆಂಥ ಹುಡುಗ ಅಂತಾ ಅನ್ಕೋಂಡಿದ್ದಿಲ್ಲಾ, ನಾವಿಬ್ಬರೂ ಒಳ್ಳೇಯ ಫ್ರೇಂಡ್ಸ್ ಅಷ್ಟೇ" ಅಂತಾ ಬಾಂಬು ಹಾಕಿ ಎಂದಿಗೂ ಮಾತಲಾಡರದ ನಾವು ಯಾವಾಗಿನಿಂದ ಒಳ್ಳೆಯ ಫ್ರೆಂಡ್ಸ್ ಆದೆವು ಅನ್ನುವುದೇ ತಿಳಿಯದೇ ಗೋಜಲಾಗಿಬಿಟ್ಟಿತ್ತು. ಕೊನೆಗೆ ನಾನು ನನ್ನ ಸುಮಾಳ ಮೇಲಿನ ಲವ್ವನ್ನು ತ್ಯಾಗಮಾಡಬೇಕಾಗಿ ಬಂದ ನನ್ನ ಅಸಹಾಯಕತೆಯೂ ಆ ಹೊತ್ತಲ್ಲದ ಹೊತ್ತಲ್ಲಿ ನೆನಪಾಗಿ ನನ್ನ ಮತ್ತು ಸುಮಾಳ "ವಿಫಲ ಪ್ರೇಮ"ಕ್ಕೆ ಗೌರವ ತೋರಲು " ನಲಿವ ಗುಲಾಬಿ ಹೂವೇ","ಪ್ರೇಮದ ಕಾದಂಬರಿ ಬರೆದೆನು ಕಣ್ಣಿರಲಿ" ಅಂತಾ ಹಾಡೀ ’ ಉಹು ಉಹು ಉಹು’ ಅಂತ ಕೆಮ್ಮಿ ಹಗುರವಾದೆ.ಮತ್ತೆ "ಟ್ರೂ ಲವ್" ಮೂಡ್ ಬಂದಂಗೆ ಆಗಿ ಕೈಗೆ ಸಿಕ್ಕ ಹಾಳೆಯ ಮೇಲೆ ’ಸುಮಾ’ ಅಂತಾ ಬರೆದೆ, ಖುಷಿಯಾಯ್ತು; ಮತ್ತೆ ’ಸುಮಾ ಐ ಲವ್ ಯೂ’ ಅಂತಾ ಬರೆದೆ, ಇನ್ನೂ ಖುಶಿಯಾಯ್ತು; ಕೊನೆಗೆ ’ಸಂತೋಷ್ Weds ಸುಮಾ’ ಅಂತಾ ಬರೆದುಕೊಂಡ ಮೇಲಂತೂ ಖುಷಿ ಉಕ್ಕಿ ಉಕ್ಕಿ ಬಂತು, ಅದೇ ಖುಷಿಯಲ್ಲಿ ಸ್ನಾನಕ್ಕೆ ಹೋಗಿ " ಹೂವು, ಮುಳ್ಳು, ಪ್ರೀತಿ, ಪ್ರೇಮ, ಟೊಂಗೆ, ತಪ್ಪಲು" ಅಂತೆಲ್ಲಾ ಹಾಡು ಹಾಡುತ್ತಾ ಸ್ನಾನ ಮುಗಿಸಿ ’ಸಾವರಿಯಾ’ ಸ್ಟೈಲಲ್ಲಿ ಟಾವೆಲ್ಲು ಸುತ್ತಿಕೊಂಡು ಒಂದೆರಡು ಸ್ಟೆಪ್ಪು ಹಾಕಿದ ಮೇಲೆ, ಸ್ನಾನ ಮಾಡುವ ಮೊದಲೇ ಶೇವ್ ಮಾಡುವುದನ್ನು ಮರೆತಿದ್ದನ್ನು ಕಂಡು ಭಲೇ ಖೇದಯಾಯ್ತು. ನಂತರ ಹುಡುಗಿಯರಿಗೆ ದಾಡಿ ಬಿಟ್ಟ "ಕರಡಿಮರಿ"ಯಂತಹ ಹುಡುಗರೇ ಇಷ್ಟವಾಗುತ್ತಾರೆ ಎಂದು ಯಾವುದೋ ’ಲವ್ ಲವಿಕೆ’ಯಲ್ಲೋ ’ಈ ಗುಲಾಬಿ ನಿನಗಾಗಿ’ಯಲ್ಲೋ ಓದಿದ ನೆನಪಾಗಿ ನಾನು ಶೇವ್ ಮಾಡದೇ ಇರುವ ನಿರ್ಧಾರಕ್ಕೆ ನಾನೇ ಬೆನ್ನು ಚಪ್ಪರಿಸಿಕೊಂಡು ಇರುವ ದಾಡಿಯನ್ನೇ ಟ್ರಿಮ್ ಮಾಡಲು ಕತ್ತರಿ ಹುಡುಕತೊಡಗಿದೆ. ಕನ್ನಡಿ ಮುಂದೆ ನಿಂತು ಸಾದ್ಯಾನುಸಾರ ಸ್ಮಾರ್ಟ್ ಕಾಣಿಸಲು ಯತ್ನಿಸಿ ’ಪರ್ವಾಗಿಲ್ಲಾ ಓಕೆ’ ಅನ್ನಿಸಿದ ಮೇಲೆ ’ಸುಮಾ ಈಗ ಏನು ಮಾಡುತ್ತಿರಬಹುದು?’ಅಂದುಕೊಳ್ಳುತ್ತಿರುವಾಗ ಅವಳ ಮದುವೆಯಾಗಿ ಅವಳ ಗಂಡನೊಂದಿಗೆ, ಕೈಲಿ ಕೂಸು ಹಿಡಿದು ಕಂಠಿ ಬಸವಣ್ಣನ ಜಾತ್ರೆಯಲ್ಲಿ ಖಾರ ಚುರಮುರಿ ತಿನ್ನುತ್ತ್ಜ ನಿಂತಂತೇ ಅನಿಸಿ ಬೆಚ್ಚಿಬಿದ್ದು " ಛೇ ಛೇ ನನ್ನ ಸುಮಾಳ ಮದುವೆ ಇನ್ನೂ ಆಗಿರಲಿಕ್ಕಿಲ್ಲ" ಅಂತಾ ಅನ್ಕೊಂದು ನಿರಾಳವಾಗಿ ಈ ಬಾರಿ ಊರಿಗೆ ಹೋದಾಗ ಖಂಡಿತ ಅವಳನ್ನು ಹುಡುಕಿ ನೇರವಾಗಿ ಮಾತಾಡಿ ಪ್ರಪೋಸ್ ಮಾಡಿಬಿಡಬೇಕು ಅನ್ಕೋಂಡ ಮೇಲೆ ಎನೋ ಗೆದ್ದ ಭಾವ ಮೂಡಿತು..

Tuesday, May 27, 2008

ಲಂಕೇಶ್, ಮೂರ್ತಿಗಳು ಮತ್ತು ನನ್ನ ಹೊಸ ತೆವಲುಗಳು.

ಲಂಕೇಶ್, ಅನಂತಮೂರ್ತಿಗಳನ್ನು ಓದಿ ನಾನು ತೀರಾ ಈ ಮಟ್ಟಿಗೆ ಹಡಬೆದ್ದು ಹೋಗುತ್ತೇನೆ ಅಂತಾ ಕನಸು ಮನಸಲ್ಲೂ ಅನ್ಕೊಂಡಿರಲಿಲ್ಲಾ.ಅವರ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಬರುವ ಯಾವುದಾದರೂ ಸ್ತ್ರೀ, ಪುರುಷ ಪಾತ್ರಗಳು ಅತಿ ಉದಾತ್ತ ಅನಿಸತೊದಗಿದರೆ; ಮನಸ್ಸು ಆಗ್ಲೆ ಕಥೆಯ ಮುಂದಿನ ತಿರುವುಗಳನ್ನು ಊಹಿಸತೊಡಗಿ, ಆ ಪಾತ್ರಗಳು ಯಾರ ಜೊತೆಯಲ್ಲಿ,ಯಾವ ಹೊತ್ತಿನಲ್ಲಿ "ಅದನ್ನು" ಮಾಡುತ್ತವೋ ಅಂತಾ ಲೆಕ್ಕ ಹಾಕುತ್ತಲೇ ಪುಟ ತಿರುವುತ್ತೇನೆ. ಅಚಾನಕ್ ಆಗಿ ಹಾಗೆನಾದರೂ ನಡೆಯದಿದ್ದರೆ " ಥೂ ಬೋ...ಮಕ್ಳು ಮೋಸ ಮಾಡಿದ್ರು" ಅನ್ನೊ ನಿರಾಶಾ ಭಾವದಲ್ಲಿ ಕಥೆಗಾರನನ್ನು ಬೈಯುತ್ತ ಪುಟ ತಿರುವಿತ್ತೇನೆ. ನಮ್ಮ ನಸೀಬು ನೆಟ್ಟಗಿದ್ದು "ಆ ಥರ"ದ ಘಟನೆಗಳು ನಡೆದರೆ ಆ ಭಾಗವನ್ನು ಇನ್ನೊಮ್ಮೆ ಎನಾದರೂ ಸಿಕ್ಕಿತು ಎಂಬಂತೆ ಓದಿ ಧನ್ಯನಾಗುತ್ತೇನೆ. ಅದ್ಯಾಕೋ ಗೊತ್ತಿಲ್ಲ್ಲ ಮೂರ್ತಿಗಳಿಗೆ ಉದಾತ್ತ ಪಾತ್ರಗಳಿಂದ "ಅದನ್ನು" ಮಾಡಿಸಿ ಆ ಉದಾತ್ತ ಪಾತ್ರಗಳ ವ್ಯಕ್ತಿತ್ವವನ್ನು ಭೂಮಿಗಿಳಿಸುವದರಲ್ಲಿ ಎನೋ ಖುಶಿ.

ಇದು ಸಾಯ್ಲಿ, ಇನ್ನೂ ಹುಡುಗ, ವಯಸ್ಸು ಅಂತಾ ಎನೋನೋ ಸಮಾಧಾನ ಮಾಡ್ಕೊಬಹುದು. ಆದ್ರೆ ಮೂರ್ತಿಗಳ "ಭಾರತೀಪುರ" ಓದಿದ್ದೆ ಓದಿದ್ದು ಮನಸ್ಸು ’ದೇವರು’ ಎಂಬ ಅಮೂರ್ತ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದೆ. ಅತ್ಲಾಗೆ ದೇವರನ್ನು ದಿಕ್ಕರಿಸುವ ಆತ್ಮ ಸ್ಥೈರ್ಯವೂ ಇಲ್ಲದೆ, ದೇವರಲ್ಲಿ ಪೂರ್ಣ ಶ್ರದ್ದೆಯಿಡಲೂ ಆಗದೇ ಎಡಬಿಡಂಗಿ ಆಗ್ತಾ ಇದ್ದೀನಿ ಅನ್ನೊ ಭಯ. ಸಂಕಷ್ಟಿಯ ದಿನ ಗೊತ್ತಗದೇ ಆಮ್ಲೇಟ್ ತಿಂದಿದ್ದಕ್ಕೆ ನನ್ನ ಲ್ಯಾಬ ಎಕ್ಸಾಮ್ ಫೇಲ್ ಆಯ್ತು ಅಂತ ನಂಬುವ ನಂಗೆ "ದೇವರು" ಅನ್ನುವ ಮ್ಯಾಜಿಕನ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಇವೆಲ್ಲದುರ ಮದ್ಯೆ ಪೂಜೆಗೂ, ಸ್ನಾನಕ್ಕೂ ಹತ್ತಿರದ ಲಿಂಕಿರುವದರಿಂದ ಎರಡನ್ನೂ ತ್ಯಜಿಸಿ ನಾಸ್ತಿಕನಾದ ಫಿನಿಕ್ಸು ನಂದೆಲ್ಲಿಡಲಿ ಅನ್ನುವಂತೆ " ನಿಂದು ಭಕ್ತಿ ಅಲ್ಲವೇ ಅಲ್ಲ. ನಿಂದು ಅಸ್ತಿತ್ವದ ಭಯ, ಭಯವೇ ಧರ್ಮದ ಮೂಲ" ಅಂತೆಲ್ಲಾ ಕಂಡೋರ ಡೈಲಾಗು ಕದ್ದು ಹೇಳಿ ನನ್ನನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿದ್ದಾನೆ.

"ರೂಡಿಯೇ ನಂಬಿಕೆಗೆ ಮೂಲ, ಆ ನಂಬಿಕೆಯ ಬೇರನ್ನು ಕತ್ತರಿಸಿದರೆ ದೇವರು ಇಲ್ಲಾ, ಧರ್ಮವೂ ಇಲ್ಲ್ಲ" ಇತ್ಯಾದಿ ಇತ್ಯಾದಿ ಸಾಲುಗಳು ನನ್ನ ರೂಡಿಗಳನ್ನು, ನಂಬಿಕೆಗಳನ್ನು ಪ್ರಶ್ನಿಸಿಕೊಳ್ಲುವಂತೆ ಮಾಡಿ " ಅರೇ ಹೌದಲ್ಲವೇ!" ಎಂಬ ಖುಶಿಯೋಂದಿಗೆ " ಛೇ ಛೇ ದೇವರ ವಿಷ್ಯದಲ್ಲಿ ಹಾಗೆಲ್ಲಾ ಯೋಚಿಸಬಹುದಾ?" ಎಂಬ ಪಾಪ ಪ್ರಜ್ಣೆಯ ಜೊತೆಗೆ, ಈ ರೀತಿ ಎಲ್ಲಾ ಯೋಚಿಸಿದ್ದಕ್ಕೆ ಮತ್ತೆ ದೇವರಿಗೆ ಸಿಟ್ಟು ಬಂದು ಅಪ್ರೈಸಲ್ ಟೈಮಲ್ಲಿ ಕಿರಿಕ್ಕು ಮಾಡಿದರೆ ಹೇಗೆ? ಅನ್ನುವ ಭಯವೂ ಸೇರಿ ನನ್ನ ಮಾನಸಿಕ ನೆಮ್ಮದಿಯನ್ನೆ ಕಳೆದುಕೊಂಡಿದ್ದೇನೆ.

ಮೇಲಿನ ಎಲ್ಲಾ ಸಕಾರಣಗಳಿಗಾಗಿ ನಾನು ಸದ್ಯಕ್ಕೆ ಮೂರ್ತಿಗಳ ಮತ್ತು ಲಂಕೇಶರ ಸಹವಾಸವೇ ಸಾಕು ಎನ್ನಿಸಿ "ಪ್ರಗತಿ ಪರ" ಸಾಹಿತ್ಯ ಕೃಷಿಗೆ ತಾತ್ಕಾಲಿಕ ವಿರಾಮ ನೀಡಿದ್ದೇನೆ. ಮತ್ತೆ ನನ್ನ ಪಾರಂಪರಿಕ ಶ್ರದ್ದೆಯನ್ನು ಮರುಸ್ಥಾಪಿಸಲು ಮತ್ತೆ ಭೈರಪ್ಪನವರ ಮೊರೆ ಹೊಕ್ಕಿದ್ದೇವೆ ಎಂದು ಹೇಳಲು ಭಾರಿ ಖುಷಿ ಮತ್ತು ನನ್ನ ಈ ತಿಕ್ಕಲುತನಕ್ಕೆ ನಾಚಿಕೆಯೂ ಆಗುತ್ತಿದೆ..

Monday, May 12, 2008

ಚುನಾವಣೆ ಎಂಬ ಪರ್ವಕಾಲ

ಚುನಾವಣೆಗೂ ನಮ್ಮೂರಿಗೂ ಭಲೇ ಅವಿನಾಭಾವ ಸಂಬಂಧ, ಹುಟ್ಟಾ ಸೋಮಾರಿಗಳಾದ ನಮ್ಮೂರ ಪ್ರಜಾ ಪ್ರಭುಗಳಿಗೆ ಚುನಾವಣೆ ಸೀಜನ್ನು ಬಂತೆಂದರೆ ಭಲೇ ಖುಷಿ. ಅಬಾಲ ವೃದ್ದರಾಗಿ ಎಲ್ಲರೂ ತಮ್ಮದೇ ಆದ ಕಾರಣಗಳಿಗಾಗಿ ಈ ಖುಷಿಯಲ್ಲಿ ಪಾಲ್ಗೋಳ್ಳುತ್ತಾರೆ. ಊರ ಚಿಳ್ಳೆಗಳಿಗೆ ಓಡಾಡಿ ಎಲ್ಲಾ ಪಕ್ಷದವರ ಪಾಂಪ್ಲೆಟು ಮತ್ತು ಸ್ಟಿಕರು ಸಂಗ್ರಹಿಸುವ ಚಪಲ ಮತ್ತು ಹಿರಿಯರಿಗೆ ಕಟ್ಟೆಗೆ ಕೂತು ತಿಳಿದದ್ದು ತಿಳೆಗೆಟ್ಟದ್ದು ಎಲ್ಲವನ್ನೂ ಚರ್ಚಿಸುವ ವಿಕ್ಷಿಪ್ತ ಚಪಲ, ಇನ್ನೂ ಕಾರ್ಯಕರ್ತರೊಂಬ ಪರ್ಮನೆಂಟು ಪುಡಾರಿಗಳಿಗಂತೂ ಇದು ದುಡಿಮೆಯ ಕಾಲ,ನಮ್ಮೂರ ಪಡ್ಡೆಗಳಿಗೆ ಪ್ರಚಾರದ ನೆಪದಲ್ಲಿ ಯಾವಾಗ ಬೇಕಾದರೂ, ಬೇಕಾದವರ ಮನೆ ನುಗ್ಗಿ ಅವರ ಡವ್ ಗಳ ದರ್ಶನ ಭಾಗ್ಯವನ್ನೂ ಸವಿಯುವ ಪುಣ್ಯಕಾಲ. ಹೀಗಾಗಿ ಚುನಾವಣೆ ಘೋಷಣೆಯಾದದ್ದೆ ನಮ್ಮೂರ ಸಕಲ ಜನಸ್ತೋಮವೂ ಒಂದಲ್ಲಾ ಒಂದು ಕಾರಣಗಳಿಗಾಗಿ ಬ್ಯುಸಿಯಾಗಿ ಬಿಡುತ್ತಾರೆ.

ನನ್ನ ಮಟ್ಟಿಗೆ ಹೇಳುವುದಾರೆ, ಚಿಕ್ಕಂದಿನಲ್ಲಿ ಎಲ್ಲಾ ಪಕ್ಷಗಳಿಗೂ ಅವರು ಕೊಡುತ್ತಿದ್ದ ದ್ವಜ,ಟೋಪಿ,ಟೀ ಶರ್ಟುಗಳ ಕಾರಣ ಪಕ್ಷಾತೀತನಾಗಿ ನಾನು ದುಡಿದೆದ್ದೇನೆ; ಯಾವ ಪಕ್ಷದವರು ಪ್ರಚಾರಕ್ಕೆ ಸಿನಿಮಾ ನಟರನ್ನು ಕರೆ ತರುತ್ತಾರೋ ಆ ಸಭೆಗಳಿಗೆ ನಿಷ್ಠೆಯಿಂದ ಪಾಲ್ಗೋಂಡಿದ್ದೇನೆ. ಚಿತ್ರನಟರಾದ ಸುಧೀರ್,ಅನಂತ್ ನಾಗ, ಉಮಾಶ್ರೀಯವರ ಧರ್ಶನ ಭಾಗ್ಯ ನಮಗೆ ದೊರೆತದ್ದೆ ಚುನಾವಣೆ ದೆಶೆಯಿಂದ. ನನ್ನ ಪಕ್ಷಾತೀತ ಮನೋಭಾವನೆಯಿಂದ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುತ್ತಿದ್ದ ನನ್ನ ಅಪ್ಪನಿಗೆ ಮುಜುಗುರ ತಂದಿಕ್ಕುತ್ತಿದ್ದೆ. ಆಗ ತೆರೆದ ಜೀಪುಗಳಲ್ಲಿ ಕರಪತ್ರ ಎಸೆಯುತ್ತಾ " ಕಾಂಗ್ರೆಸ್ಸಿಗೆ ಮತ, ದೇಶಕ್ಕೆ ಹಿತ" "ಚಕ್ರ, ಚಕ್ರ, ಚಕ್ರ" " ಕಮಲಕ್ಕೆ ನಿಮ್ಮ ಓಟು" ಇತ್ಯಾದಿಯಾಗಿ ಲೌಡ ಸ್ಪೀಕರುಗಳಲ್ಲಿ ಅರಚುತ್ತಾ ಬಂದರೆ ನಮಗೆ ದೇವಲೋಕದ ಪುಷ್ಪಕ ವಿಮಾನ ಕಂಡಷ್ಟು ಖುಷಿ.

ಸ್ವಲ್ಪ ದೊಡ್ದವನಾದ ಮೇಲೆ, ಕಾಂಗ್ರೆಸ್ಸೆಂದರೆ, ನೆಹರೂ ಎಂದರೆ ಒಂತರಾ ತಿರಸ್ಕಾರ ಶುರುವಾಗಿತ್ತು ಮತ್ತು ಆಗಲೇ ಕೆಲ ಆರ್, ಎಸ್ ,ಎಸ್ ಕಾರ್ಯಕರ್ತರು ನಮ್ಮ ಮೆದುಳಿಗೆ ಕೈ ಹಾಕಿ ಬೇಕಾದುದನ್ನು ತುರುಕಿ, ಬ್ಯಾಡದುದುನ್ನು ಕಿತ್ತೆಸೆದು ನಮ್ಮನ್ನೂ ಸಹ ಬಿಜೆಪಿ ಬೆಂಬಲಿಗರನ್ನಾಗಿಸಿದ್ದರು. ಆಗಿನ್ನೂ ನಮಗೆ "ಕೋಮುವಾದಿ, ಜಾತ್ಯಾತೀತ" ಇತ್ಯಾದಿ ರಾಜಕಾರಣಿಗಳ ಪವಿತ್ರ ಪದಗಳ ಪರಿಚಯ ಇರಲಿಲ್ಲಾ ಅಥವಾ ಬುದ್ದಿಜೀವಿಗಳಾಗ ಬೇಕಾದರೆ ಬಿಜಿಪಿಯನ್ನು ವಿರೋಧಿಸಬೇಕು ಎಂಬ ಕಾಮನ್ ಸೆನ್ಸು ಇರದ ಕಾರಣ ಚಿಕ್ಕಂದಿನಿಂದಲೇ ಬುದ್ದಿಜೀವಿಯಾಗುವ ಚಾನ್ಸು ಮಿಸ್ಸಾಗಿ ಹೋಯಿತು. ಹೀಗಾಗಿ ಭಲೇ ಹುಮ್ಮಸ್ಸಿನಲ್ಲಿ , ಭಕ್ತಿಯಲ್ಲಿ ನಮ್ಮ ಪಕ್ಷದ ಪ್ರಚಾರ ಕಾರ್ಯ ನಡೆಯುತ್ತಿತ್ತು. ಆಗಲೇ ನಾವು ಒಂದೊದಾಗಿ ಚುನಾವಣಾ ತಂತ್ರಗಳನ್ನು ಕಲಿಯತೊಡಗಿದ್ದೆವು. ಕೆಲ ಏರಿಯಾಗಳಲ್ಲಿ ದುಡ್ಡು ಹಂಚುವದರಿಂದ ಹಿಡಿದು ಚುನಾವಣೆ ದಿನ ಇನ್ನೊಬ್ಬರ ಹೆಸರಿನಲ್ಲಿ ಓಟು ಗುದ್ದುವವರೆಗೂ ನಮ್ಮ ಕೌಶಲಗಳು ಬೆಳೆದಿದ್ದುವು, ಈ ಓಣಿಲಿ ಇಷ್ಟೆ ಹಸ್ತ, ಇಷ್ಟೆ ದಳ, ಇಷ್ಟೆ ಕಮಲ ಎಂದು ಹೇಳಬಲ್ಲವರಾಗಿದ್ದೆವು. ಆಸಾಮಿಯನ್ನು ನೋಡಿದ ಕೂಡ್ಲೆ ಆತನ ಓಟಿನ ರೇಟನ್ನು ಊಹಿಸಬಲ್ಲವರಾಗಿದ್ದೇವು. ಮತ್ತು ಕಮರೀಪೇಟೆಯಿಂದ ದೋ ನಂಬರಿನ ಲಿಕ್ಕರನ್ನು ಅಲ್ಲಲ್ಲಿ ಮಾಮೂಲಿ ಕೊಟ್ಟು ಸಾಗಿಸುವ ರೇಂಜು ನಮ್ಮದಾಯಿತು. ಪಾದಯಾತ್ರೆಯಲ್ಲಂತೂ ಹೆಗಲಿಗೆ ಕೇಸರಿ ಶಾಲು ಹೊದ್ದು ಅಬ್ಯರ್ಥಿಯ ಆಚೀಚೆ ಓಡಾಡಿ ಶೋ ಆಫ್ ನೀಡಿದ್ದೆ ನೀಡಿದ್ದು. ಇನ್ನು ಚುನಾವಣೆ ಇನ್ನೆರಡು ದಿನಗಳಿರುವಾಗಲೇ ಎದುರು ಪಾರ್ಟಿಯ ಮತಗಟ್ಟೆ ಏಜಂಟರನ್ನು ಹುಡುಕಿ ಅವರನ್ನೂ ಮತ್ತು ಚುನಾವಣೆ ಕೆಲಸಕ್ಕೆ ಬರುವ ಸರಕಾರಿ ನೌಕರರನ್ನು ಪತ್ತೆ ಹಚ್ಚಿ ಖರೀದಿಸುವ ಮಹತ್ಕಾರ್ಯ ನಡೆಯುತ್ತಿತ್ತು ಮತ್ತು ಚುನಾವಣೆ ಹಿಂದಿನ ದಿನ ರಾತ್ರಿಯೆಲ್ಲ ಗುಬ್ಬಿ ಪಾಕೀಟು ಹಂಚುವ ಮತ್ತು ಚುನಾವಣೆ ದಿನ ಉಪ್ಪಿಟ್ಟು ಚಹಾ ಮಾಡಿಸುವ ವ್ಯವಸ್ಥೆಯೂ ಇರುತ್ತಿತ್ತು. ಎಲ್ಲಾ ಓಣಿಯವರನ್ನೂ ಜೀಪಿನಲ್ಲಿ ತುಂಬಿಸಿ ಮತಗಟ್ಟೆ ಬರುವರೆಗೂ ಅವರಿಗೆ ನಮ್ಮ ಪಕ್ಷದ ಚಿಹ್ನೆಯನ್ನು ತೋರಿಸಿ, ಕೊನೆ ಕ್ಷಣದ ಪ್ರಚಾರವನ್ನು ಮಾಡಿ, ಅಂಗವಿಕಲರು, ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರೊಂದಿಗೆ ಹೋಗಿ ಅವರ ಓಟನ್ನೂ ನಾವೇ ಗುದ್ದಿ ನಮ್ಮ ಪಕ್ಷದ ಗೆಲುವನ್ನು ಖಾತ್ರಿ ಮಾಡುತ್ತೆದ್ದೆವು.ಈ ಮದ್ಯೆ ಕೆಲ ಅಕ್ಷರ ಗುರುತಿಸುವ ಸಾಕ್ಷರ ಕಾರ್ಯಕರ್ತರನ್ನು ಹಿಡಿದು ಎಲ್ಲರ ಹೆಸರು ಮತ್ತು ಮತಗಟ್ಟೆ ಸಂಖ್ಯೆಯನ್ನೂ ಬರೆಸುವ ಹೊಣೆಯೂ ಇರುತ್ತಿತ್ತು. ನಮಗೆ ಖಾತ್ರಿ ಇರದ ಜನರನ್ನು ಶತಾಯಗತಾಯ ಓಟು ಮಾಡದಂತೆ ತಡೆಯುತ್ತಿದ್ದೇವು. ಅವತ್ತು ಮುಗಿದರೆ, ಫಲಿತಾಂಶದ ದಿನದವರೆಗೂ ನಮಗೆ ವಿಶ್ರಾಂತಿ. ಫಲಿತಾಂಶದ ದಿನ ಮತ್ತೆ ಜನರನ್ನು ಕರೆದುಕೊಂಡು ಕೈಯಲ್ಲಿ ಯಾವುದಕ್ಕೂ ಇರಲಿ ಅಂತಾ ಒಂದು ಮಾಲೆ ತಗೊಂಡು ಹೋಗಿ , ನಮ್ಮ ಅಭ್ಯರ್ಥಿ ಗೆದ್ದರೆ ಸೈ ಡಂಕ ನಕ ಅಂತ ಕುಣಿದು, ಗುಲಾಲು ಅರಚಿ, ತೆರೆದ ಜೀಪಿನಲ್ಲಿ ಮತ್ತೆ ಮೆರವಣಿಗೆ ಮಾಡುವುದರೊಂದಿಗೆ ರಾತ್ರಿ ಸುರಾಪಾನದ ವ್ಯವಸ್ಥೆಯೂ ಮಾಡಬೇಕಾಗುತ್ತಿತ್ತು. ನಮ್ಮ ಅಭ್ಯರ್ಥಿ ಸೋತರಂತೂ ಯಾರಿಗೂ ತಿಳಿಯದಂತೆ ಊರ ದಾರಿ ಹಿಡುಯುವದಂತೂ ಇದ್ದೆ ಇತ್ತು.

ಇನ್ನೂ ಚುನಾವಣೆ ಎಂದರೆ ಕೆಲ ಗಾಸಿಪ್ಪು ವೀರರಿಗೆ ಪರ್ವಕಾಲ. ವಿಜಯ ಮಲ್ಯ ನ ಬಗ್ಗೆಯಂತೂ ನಮ್ಮೂರಲ್ಲಿ ರಸವತ್ತಾದ ಕಥೆಗಳಿದ್ದವು. ನಮ್ಮೂರ ಯುವಕರಿಗೆ ಮಲ್ಯ ಆದರ್ಶವಾಗಿ ಬಿಟ್ಟಿದ್ದ. ಮಲ್ಯನ ಸ್ವಿಮ್ಮಿಂಗ್ ಪೂಲಿನಲ್ಲಿ ಶಿಲ್ಪಾ ಶೆಟ್ಟಿಯ ನಗ್ನ ಪ್ರತಿಮೆ ಇದೆ ಅನ್ನುವದರಿಂದ ಹಿಡಿದು ಮಲ್ಯನ ಪಾರ್ಟಿ ಸೇರಿದರೆ ಯಾವಗಲೂ ಉಚಿತವಾಗಿ ಕಿಂಗ್ ಫಿಶರ್ ಕುಡಿಯಲು ಕೂಪನ್ ಕೊಡ್ತಾರಂತೆ ಅನ್ನೊವರೆಗೂ ರಂಗು ರಂಗಿನ ಕಥೆಗಳಿದ್ದವು. ಪಟೇಲರ ರಸಿಕತನ ನಮ್ಮ್ಮೂರ ಗೌಡರಿಗೆ ಆದರ್ಶಪ್ರಾಯವಾಗಿತ್ತು. ಇನ್ನೂ ವಿಜಯ ಸಂಕೇಶ್ವರ ಕನ್ನಡನಾಡು ಪಾರ್ಟಿ ಮಾಡಿದಾಗ, ಸಂಕೇಶ್ವರರು ಆಗ ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರರು ಕೊಟ್ಟಿದ್ದ ಮೂರು ನೂರು ಕೋಟಿ ತಿಂದಿದ್ದಕ್ಕೆ ಅವರಿಗೆ ಜಗಳ ಆಗಿ ಹೊಸ ಪಾರ್ಟಿ ಮಾಡಿದ್ರು ಅಂತ ನಮ್ಮ ಜನ ನಿಷ್ಟೆಯಿಂದ ನಂಬಿದ್ದರು.ಆದರೆ ಈ ಭಾರಿಯ ಐಕಾನುಗಳು ಮಾತ್ರ ರಾಮುಲು ಮತ್ತು ಗಣಿ ಧಣಿಗಳಾದ ರೆಡ್ಡಿ ಬ್ರದರ್ಸ. ಈ ಭಾರಿ ಚುನಾವಣೆ ಘೋಷಣೆಯಾದ ಕೂಡಲೇ ರೆಡ್ಡಿಗಳು ಪ್ರಚಾರಕ್ಕಾಗಿ ಐನೂರು ಸ್ಕಾರ್ಪ್ಯಿಯೋ , ಸಾವಿರ ಪಲ್ಸರ್ರು ಆರ್ಡರು ಮಾಡಿದ್ರು ಮತ್ತು ಚುನಾವಣೆ ಆಯೋಗದ ದೆಶೆಯಿಂದ ಆರ್ಡರು ಕ್ಯಾನ್ಸಲ್ಲ ಮಾಡಬೇಕಾಯ್ತು, ಇಲ್ಲವಾದರೇ ನಮಗೂ ಪಲ್ಸರ್ ಸಿಗುತ್ತಿತ್ತು ಎಂಬ ನಂಬಿಕೆಯಲ್ಲಿಯೇ ನಮ್ಮೂರ ಬಿಜೆಪಿ ಕಾರ್ಯಕರ್ತರಿದ್ದಾರೆ.

ಬೆಂಗಳೂರಿನಲ್ಲಿ ಚುನಾವಣೆ ಬಂತು ಹೋಯ್ತು, ನನಗಂತೂ ಆ ಚುನಾವಣೆಯ ಫೀಲ್ ಆಗಲೇ ಇಲ್ಲಾ. ಊರಲ್ಲಿಯೂ ಚುನಾವಣೆ ಹೀಗೆ ಇದೆಯಂತೆ ನನ್ನ ತಮ್ಮನೂ ಭಲೇ ಬೇಜಾರಾಗಿದ್ದ, ಅವನೂ ಸಹ ಪಲ್ಸರ್ ಗಿರಾಕಿಯೇ ಮತ್ತು ಅಬ್ಬೀಗೇರಿಗೆ ರಾಮುಲು ಬಂದು ಪ್ರಚಾರ ಮಾಡಿದ್ರೆ ನಮ್ಮೂರ ಓಟುಗಳೆಲ್ಲಾ ಬಿಜೆಪಿಗೆ ಅನ್ನೋದು ಅವನ ಅಭಿಮತ. "ಬಿಜೆಪಿ ಡೌಟು ಬಿಡ್ಲೆ ಈ ಸರ್ತಿ" ಅಂದ್ರೆ ಅವನು ನಿಮ್ಮನ್ನು ದೇಶದ್ರೋಹಿಯಂತೆ ಅಥವಾ ಸಿಮಿ ಸಂಘಟನೆಯ ಸದಸ್ಯನಂತೆ ನೋಡುತ್ತಾನೆ . ಒಟ್ಟಿನಲ್ಲಿ ನಮ್ಮೂರ ಜನತೆ ಮಾತ್ರ ತಮ್ಮದೇ ಆದ ಕಾರಣಗಳಿಗಾಗಿ ಆಯೋಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ದಿನಾ ಪೇಪರ್ ಓದುವ ನನಗೂ ಸಹಿತ ಅನೇಕ ಕ್ಷೇತ್ರಗಳ ಅಭ್ಯರ್ತಿಗಳೇ ಗೊತ್ತಿಲ್ಲ್ಲಾ, ಇನ್ನೂ ಓದೇ ಬಾರದಿವರ ಕಥೆ ಏನು?. ಕೆಲವರಿಗಂತೂ ಚುನಾವಣೆ ಬಂದಿರುವುದು ಗೊತ್ತಿಲ್ಲಾ. ಈಗಲೇ ಹೀಗಾದ್ರೆ ಮುಂದಿನ ಚುನಾವಣೆಗಳು ಹೇಗಿರುತ್ತವೋ ಗೊತ್ತಿಲ್ಲಾ. ನಾನಂತೂ " ಆ ದಿನಗಳನ್ನು" ಭಾಳ ಮಿಸ್ ಮಾಡ್ಕೋತೀದಿನಿ..

Tuesday, April 29, 2008

ವರ್ಷದ ಹೊಸ್ತಿಲಿನಲ್ಲಿ..

ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಈ ಬ್ಲಾಗು ಶುರು ಮಾಡಿ, ತೀರಾ ಸರಿಯಾಗಿ ವಾರ, ತಿಥಿ, ನಕ್ಷತ್ರ ನೆನಪಿಲ್ಲಾ. ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ; ಎಲ್ಲಾ ಕುರಿಗಳಂತೆ ನಂಗೂ ಬ್ಯಾ ಅನ್ನುವ ಚಪಲ. ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ, ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ, ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ. ನನ್ನ ಈ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ’ನೀನೊಬ್ಬ ಟೈಟಲ್ ಬರಹಗಾರ, ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ,ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ’ ಎಂದೆಲ್ಲಾ ಬೈದಾಡಿದ್ದ.ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ " ಬರೀಲೇ ಸೂ... ಮಗನೇ" ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ, ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ.

ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ, ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ.ಆಗ ಕೆಲವರಂತೂ ವಿಷ ಅಂದ್ರು, ಹಾಲಾಹಲ ಅಂದ್ರು. ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ, ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು. ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?. ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು, ಅದು ಬಿಟ್ಟು ಈ ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ..

ಈ ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ. ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ, ಅಂತಹುದರಲ್ಲಿ ಈ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ. ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ " ಉತ್ತಮ ಓದುಗ" ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ. ಇಲ್ಲಿವರೆಗೂ ನನ್ನ ಬರಹಗಳನ್ನು, ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ ಎಲ್ಲರಿಗೂ ನನ್ನ ನಮನಗಳು, ಈ ಬಂಧ ನಿರಂತರವಾಗಿರಲಿ..

Thursday, April 3, 2008

ದೇವರಾಣೆಗೂ ಇದು ಸತ್ಯ!

ನಿಮಗೆಲ್ಲಾ ದೇವರ ಒಡವೆಗಳು ಕಳವಾಗುವ ಸುದ್ದಿ ಹೊಸದಾಗಿರಲಿಕ್ಕಿಲ್ಲ, ಆದ್ರೆ ಮೂಲ ವಿಗ್ರಹವನ್ನೇ ಕದ್ದುಕೊಂಡು ಹೋಗಿದ್ದನ್ನು ಕೇಳಿದ್ದೀರಾ? ಅದು ಯಾವುದೇ ಆಭರಣಗಳನ್ನು ಮುಟ್ಟದೇ!. ಹಿಂತಹ ಒಂದು ಕಳ್ಳತನ ನಮ್ಮೂರ ಪ್ರಸಿದ್ದ ಕಂಠಿ ಬಸವಣ್ಣನ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಹಿಂದೆ ನಡಿದಿತ್ತು, ಆಗ ಪೂಜಾರಪ್ಪನನ್ನು ’ಎನೀದು ಹಕೀಕತ್ತು? ದೇವರನ್ನೇ ಊರು ಬಿಡಿಸಿಬಿಟ್ರಲ್ಲ್ಲಾ" ಎಂದು ದೇಶಾವರಿಯಾಗಿ ಕೇಳಿದ್ರೆ ಆ ಯಪ್ಪಾ " ಬಸವಣ್ಣನಿಗೆ ನಮ್ಮೂರು ಬೇಜಾರಾಗಿತ್ತಂತೂ, ಹೀಗಾಗಿ ಆ ಕಳ್ಳನ ಕನಸಿನಲ್ಲಿ ಹೋಗಿ ನನ್ನನ ಈ ಊರು ಬಿಟ್ಟು ಕರ್ಕೋಂಡು ಹೋಗು ಅಂತಾ ಬಸವಣ್ಣ ಕೇಳಿದ್ನಂತೆ;ದೇವರೆ ಬಂದು ಹೇಳೀದ ಮೇಲೆ ಆ ಕಳ್ಳ ನಮ್ಮ ಬಸವಣ್ಣನ ಎತ್ಕೊಂಡು ಹೋಗಿದ್ದಾನೆ"ಅಂತಾ ಕಥೆ ಕಟ್ಟಿ ಎಲ್ಲಾ ಭಕ್ತಾದಿಗಳಿಗೂ ಹೇಳತೊಡಗಿದರು. ನಮ್ಮೂರ ಹಿರಿಯರು ದೇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟರು, ಪ್ರತಿಫಲ ಮಾತ್ರ ಶೂನ್ಯವಾಯಿತು..

ನಮ್ಮ ಮನೆತನದಲ್ಲಂತೂ ಒಂಥರಾ ದಿಗಿಲು;ಊರ ದೇವರೇ ಊರು ಬಿಟ್ರೆ ಹ್ಯಾಗೆ ಅನ್ನೊದರ ಜೊತೆಗೆ ಇನ್ನೊಂದು ಕಾರಣವೂ ಇದೆ. ಈ ಕಂಠಿ ಬಸವಣ್ಣ ಅಬ್ಬಿಗೇರಿಗೆ ಹೇಗೆ ಬಂದ ಅನ್ನೊದಕ್ಕೆ ನಮ್ಮ ಮನೆಯ ಹಳೆ ತಲೆಗಳು ಒಂದು ಕಥೆಯನ್ನೇ ಹೇಳುತ್ತವೆ. ಅದೆನಪ್ಪಾ ಅಂದ್ರೆ ನಮ್ಮ ಮನೆತನದ ಮೂಲಪುರುಷ ಹೊಲದಿಂದ ಮನೆಗೆ ಬರುವಾಗ ಒಂದು ಜಾಗದಲ್ಲಿ ಚಕ್ಕಡಿ ಮುಂದೆ ಹೋಗಲೇ ಇಲ್ಲವಂತ್, ಅಲ್ಲೇ ನಿಂತು ಬಿಟ್ಟಿತಂತೆ. ಏನಿದು ವಿಚಿತ್ರ ?ಎಂದು ಆ ಮಾರಾಯ ನೋಡಿದ್ರೆ ಚಕ್ಕಡಿಯಲ್ಲಿ ಬಸವಣ್ಣನನ್ನು ಹೋಲುವ ಕಲ್ಲಿತ್ತಂತೆ, ಯುರೇಕಾ ಅಂದುಕೊಂದು ಅಲ್ಲೆ ಪಕ್ಕದಲ್ಲಿಯ ಕಂಠಿಯಲ್ಲಿ ಅದನ್ನು ಎಸೆದು ಮನೆಗೆ ಬಂದು ಮಲಗಿದರೆ, ರಾತ್ರಿ ಕನಸಿನಲ್ಲಿ ದೇವರು ಬಂದು " ನಾನು ನಿನ್ನ ಚಕ್ಕಡಿಯಲ್ಲಿ ಬಂದರೆ ನೀನು ನನ್ನ ಕಂಠಿಯಲ್ಲಿ ಎಸೆಯುತ್ತೀಯಾ?" ಎಂದು ಆವಾಜ್ ಹಾಕಿದ್ನಂತೆ. ಮರುದಿನ ಬಂದು ಆ ಕಂಠಿ ಹುಡುಕಿ ಅಲ್ಲಿಯೇ ಗುಡಿ ಕಟ್ಟಿಸಿದರಂತೆ. ಹೀಗಾಗಿ ಕಂಠಿ ಬಸವಣ್ಣ ನಮ್ಮವನೆಂದೂ ನಮ್ಮ ಮನೆಯಲ್ಲಿ ಹಕ್ಕು ಸಾಧಿಸುತ್ತಾರೆ.[ಕಾಕತಾಳಿಯವೆಂಬಂತೆ ಅದೇ ದಾರಿಯಲ್ಲಿ ನಮ್ಮ ಹೊಲವಿದೆ.ಅಲ್ಲದೇ ಶ್ರಾವಣದ ಮೊದಲ ಪೂಜೆ ಸಲ್ಲುವದೂ ಗೌಡರ ಮನೆಯಿಂದಲೇ,ತೇರಿನ ಕಳಸ, ಹಗ್ಗ ಬರುವುದು ಗೌಡರ ಮನೆಯಿಂದಲೇ ಮತ್ತು ನನ್ನ ತಾಯಿಯ ತವರುಮನೆಯ ಮನೆದೆವ್ರು ಸಹ ಈ ಕಂಠಿ ಬಸವಣ್ನನೇ ಮತ್ತು ಬಸವಣ್ಣನಿಗೆ ತೇರು ಮಾಡಿಸಿದ್ದು ಅವರೇ].ಇಷ್ಟೆಲ್ಲಾ ಇರಬೇಕಾದ್ರೆ ಚಿಂತೆ ಆಗದೇ ಇರುತ್ಯೆ?. ಕೊನೆಗೂ ಹಲವಾರು ದಿನ ಹುಡುಕಾಡಿ ಎಲ್ಲಿಂದಲೋ ಅದೇ ವಿಗ್ರಹವನ್ನು ಹೋಲುವ ವಿಗ್ರಹವನ್ನು ತಂದು ಗುಡಿಯಲ್ಲಿ " ಇದೇ ನಮ್ಮ ಬಸವಣ್ಣ" ಅಂತ ಸಮಾಧಾನ ಮಾಡ್ಕೋಂಡ್ರು. ಅದ್ರೂ ಎಲ್ಲರ ಮನದಲ್ಲಿ ಇದು ನಿಜವಾದ ಬಸವಣ್ಣಾನಾ ಅಂಥಾ ಡೌಟ್ ಇವತ್ತೀಗೂ ಇದ್ದೇ ಇದೆ..

ಅದ್ರೆ ಮೇನ್ ಪಾಯಿಂಟ ಇದಲ್ಲ್ಲಾ. ಪ್ರತಿ ಯುಗಾದಿಗೆ ನಮ್ಮ ಬಸವಣ್ಣನ ಗುಡಿಯಲ್ಲಿ ಒಂದು ಪವಾಡ(?) ನಡೆಯುತ್ತೆ. ಯುಗಾದಿಯ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೆ ಗುಡಿಯ ಮುಂದಿನ ಬಯಲಿನಲ್ಲ, ಕಲ್ಲು ಸಂಧಿಗಳಲ್ಲಿ ವಿವಿಧ ಧಾನ್ಯಗಳ ಸಸಿಗಳು ಏಕಾ ಎಕಿ ಉದ್ಬವವಾಗಿಬಿಟ್ಟುರುತ್ತವೆ. ಯಾವ ಧಾನ್ಯದ ಸಸಿ ಯಥೇಚ್ಚವಾಗಿ ಬೆಳೆಯುತ್ತೋ ಮುಂದಿನ ವರ್ಷ ಆ ಬೆಳೆ ಚೆನ್ನಾಗಿ ಬರುತ್ತಂತೆ.ಆದರೆ ಸೂರ್ಯನ ಬಿಸಿಲು ಬಿದ್ದ ಕೂಡಲೇ ಅವೆಲ್ಲಾ ಕರಗಿ ಬಿಡುತ್ತವಂತೆ;ಹೀಗಾಗಿ ನಚ್ಚ ನಸುಕಿನಲ್ಲೇ ನಮ್ಮೂರ ಜನತೆ ಗುಡಿ ಬಯಲಿನಲ್ಲಿ ಬ್ಯಾಟರಿ ಹಿಡಿದು, ಲಾಟೀನು ಹಿಡಿದು ಸಂಧು ಗೊಂದುಗಳಲ್ಲಿ ಸಸಿಯನ್ನು ಹುಡುಕುತ್ತಿರುತ್ತಾರೆ ಮತ್ತು ಕಷ್ಟ ಪಟ್ಟು ಸಸಿಯನ್ನು ಗುರುತಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಚಿಕ್ಕವನಾಗಿದ್ದಾಗ ನಾನೂ ಈ ಹುಡುಕಾಟದ ಸಕ್ರಿಯ ಸದಸ್ಯನಾಗಿದ್ದೆ. ಮತ್ತು ಸಿಕ್ಕ ಸಸಿಯನ್ನು ಮನೆಗೆ ತಂದು ದೊಡ್ದ ಗಿಡ ಮಾಡುವ ಭರದಲ್ಲಿ ಹಿತ್ತಲಿನಲ್ಲಿ ನೆಟ್ಟರೆ ಬಿಸಿಲು ಬಿದ್ದ ಮೇಲೆ ಬಂದು ನೋಡಿದ್ರೆ ಸಸಿ ಮಂಗಮಾಯ. ವಿಚಿತ್ರ ಎಂದರೆ ಬಸವಣ್ಣನನ್ನು ಕದ್ದ ವರ್ಷವೂ , ಅಂದ್ರೆ ಗುಡಿಯಲ್ಲಿ ಬಸವಣ್ಣ ಇಲ್ಲದಾಗ್ಲೂ ಸಸಿ ಹುಟ್ಟಿದ್ದುವು ಮತ್ತು ಒರಿಜನಲ್ ಬಸವಣ್ಣ ಇಲ್ಲದಿದ್ರೂ ಹುಟ್ಟುತ್ತಿವೆ. ಹೀಗಾಗಿ ಈ ಸಸಿಯ ಮರ್ಮ ನನಗೂ ತಿಳೀತಿಲ್ಲಾ. [ತಿಳಿದವರು ಹೇಳಿದರೆ ಮಹದುಪಕಾರವಾಗುತ್ತೇ]

ವೈಜ್ನಾನಿಕ ಕಾರಣಗಳೇನೆ ಇರಲಿ, ನಾನಂತೂ ಯುಗಾದಿಗೆ ಹೊರಟ್ಟಿದ್ದೇನೆ ಮತ್ತು ಅವತ್ತು ಸಸಿ ಹುಡುಕುವ ಕಾರ್ಯಕ್ರಮವೂ ಇದೆ. ಈ ತರದ ನಂಬಿಕೆಗಳಲ್ಲಿ, ಆಚರಣೆಗಳಲ್ಲಿ ಎನೋ ಒಂದು ಖುಷಿ.

ಮುಂಚಿತವಾಗಿಯೇ ಸರ್ವರಿಗೂ ಯುಗಾದಿಯ ಶುಭಾಶಯಗಳು