Showing posts with label ನನ್ನ ಜಗತ್ತು. Show all posts
Showing posts with label ನನ್ನ ಜಗತ್ತು. Show all posts

Sunday, February 10, 2008

ಹೀಗೊಂದು ಹುಚ್ಚು ಬರಹ!

ಇನ್ನೂ ಕಾಡುತ್ತಲೇ ಇರುವ ಮುಗಿಯದ ಪ್ರಾತಃ ಕಾಲದ ಸುಂದರ ಸ್ವಪ್ನವೇ,

ಸಂಭೋದನೆ ಬಹಳ ಉದ್ದವಾಯಿತು ಎಂಬ ಅರಿವಿದ್ದರೂ, ಅದನ್ನು ಗಿಡ್ದಗೊಳಿಸಿ ’ಬೋನ್ಸಾಯ್’ ಮಾಡಲು ಮನಸ್ಸಿಲ್ಲದೆ ಹಾಗೆ ಕರೆಯುತ್ತಿದ್ದೆನೆ. ಅಸ್ತಿತ್ವವೇ(?) ಇಲ್ಲದ ನಿನ್ನ ಬಗೆಗಿನ ನನ್ನ ಹುಚ್ಚಿಗೂ, ಹೊರಗೆ ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಚುಮು ಚುಮು ಮಳೆಗೂ ಎಂಥಹ ದಿವ್ಯ ಸಂಭಂದವೆಂದು ಇನ್ನೂ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲಾ ಮತ್ತು ಆ ನೆಪದಿಂದ ಸುಮ್ನೆ ಭಾವುಕನಾಗುವ ನನ್ನ ತೆವಲಾದರೂ ಎಂಥದು ಎಂದು ನಿರ್ಧರಿಸಲಾಗುತ್ತಿಲ್ಲಾ.

ಅಷ್ಟಕ್ಕೂ ನಿನ್ನಿಡೆಗಿನ ಒಂದು ನಿರಂತರ ಹುಡುಕಾಟದ ಅಭಿಯಾನದ ಆಯಸ್ಸೇಷ್ಟು? ಎಂದು ಖಂಡಿತ ನೆನಪಿಲ್ಲಾ, ಅದ್ರೆ ನಿನ್ನ ಬಗೆಗಿನ ತಪನೆ ನಿರ್ಲಜ್ಜಿತವಾಗಿ ಹೆಚ್ಚುತ್ತಲೆ ಹೋಗುತ್ತಿದೆ.ಪ್ರತಿಬಾರಿಯೂ ’ಲವ್ ಲವಿಕೆ’ ’ಈ ಗುಲಾಬಿ ನಿನಗಾಗಿ’ ಓದುವಾಗ ನೀ ಹೀಗಿದ್ದರೆ ಚೆನ್ನ ಅಂದುಕೊಳ್ಳುತ್ತೇನೆ, ಆದರೆ ಇನ್ನೊಂದು ಅಂಕಣ ಓದುತ್ತಲೇ ನೀನು ಹಾಗಿರದೆ, ಹೀಗೆದ್ದರೆ ಇನ್ನೂ ಚೆಂದ ಅಂದುಕೊಳ್ತಿನಿ.ಜಯಂತರ ಕಥೆಗಳಲ್ಲಿನ ಭಾವುಕ ಸ್ತ್ರೀ ಪಾತ್ರಗಳಲ್ಲಿ ನಿನ್ನ ಕಲ್ಪಿಸಿಕೊಳ್ಳಲು ಹೆಣಗಾಡುತ್ತೇನೆ, ರೋಮಾಂಟಿಕ್ ಚಿತ್ರದ ನಾಯಕಿರಲ್ಲಿ ನಿನ್ನ ಹುಡುಕಿ ಪದೆ ಪದೆ ಸೋಲ್ತಿನಿ, ಜಾಹೀರಾತುಗಳಲ್ಲಿ ಬರುವ ಅಂದಗಾರ್ತಿಯರ ಬೆನ್ನು ಬಿದ್ದು, ಅವರಲ್ಲಿ ನಿನ್ನ ಆರೋಪಿಸಿ ಸಮಾಧಾನಗೊಳ್ಳಲೆತ್ನಿಸುತ್ತೆನೆ.

ಗಾಂಧಿ ಬಜಾರಿನ ದೇಸಿ ಹುಡುಗಿಯರ ನಗುವಿನಲ್ಲಿ,ಗುಡಿ ಸುತ್ತುವ ದಾವಣಿಗಳ ಚೆಲುವಿನಲ್ಲಿ,BMTC ಬಸ್ಸಿನ ಮುಂದಿನ ಸೀಟುಗಳಲ್ಲಿ, ಕಾಫಿ ಡೆಯ ಮಗ್ಗುಗಳ ಹಿಂದೆ,ಕೈನಿಗಳ ಮೇಲಿನ ಹಲ್ಮೆಟ್ಟುಗಳಲ್ಲಿ ಹುದಿಗಿರುವ ಮುಖಗಳಲ್ಲಿ,ನನ್ನ ಮೋಬೈಲಿನಲ್ಲಿ ಧಾಖಲಾಗುವ ಆಗುಂತುಕ ನಂಬರಿನ ಮೆಸೇಜುಗಳಲ್ಲಿ,ಮಿಸ್ಡ ಕಾಲ್ ಗಳಲ್ಲಿ, ಸಾವಿರಗಟ್ಟಲೇ ಬರುವ ಫಾರ್ವರ್ಡು ಮೇಲುಗಳಲ್ಲಿ, ಪಿ,ವಿ ಆರ್ ನ ಸ್ತಬ್ದ ಥೇಟರುಗಳಲ್ಲಿ ದೃಶ್ಯಗಳಿಗುನವಾಗಿ ಪ್ರತಿಫಲಿಸುವ ಮುಖಗಳ ಮೇಲೆ, ಟ್ರಾಫಿಕ್ಕಿಗೆ ಸಿಕ್ಕಿ ಬಿದ್ದ ಆಟೋವಿನಲ್ಲಿ ಮೀಟರಿನತ್ತ ಕಣ್ಣು ನೆಟ್ಟ ಸ್ಲೀವ್ ಲೆಸ್ ಚೂಡಿಯಲ್ಲಿ ನಿನ್ನ ಹುಡುಕಿ ಹುಡುಕಿ ಸೋಲುತ್ತೇನೆ.ನಿನ್ನ ಚಿತ್ರವನ್ನು ನನ್ನ ಕಲ್ಪನೆಯ ಕ್ಯಾನವಾಸ್ಸಿನಲ್ಲಿ ಹಿಡಿದಿಡಲೂ ಆಗದೇ, ಸುಮ್ಮನಿರಲೂ ಆಗದೆ ಒಂದು ವಿಚಿತ್ರ ಆತಂಕದಲ್ಲಿ ಮತ್ತು ನಿರಾಶೆಯಲ್ಲಿ ದಿನ ನೂಕುತ್ತಿದ್ದೇನೆ.ಸಾವಿರ ಪಾತ್ರಗಳ ಅಚ್ಚಿನಿಂದ ನಿನ್ನ ಅದ್ದಿ ತೆಗೆದರೂ, ನಿನ್ನಲ್ಲಿ ಇನ್ನೂ ಎನೋ ಕೊರತೆ ಅನ್ನಿಸಿ ’ ಪರಿಪೂರ್ಣ’ ಅನ್ನಿವುಸುವುದೇ ಇಲ್ಲಾ, ಎಂಥದೋ ಅತೃಪ್ತಿ ಕಾಡಿ ಮತ್ತೆ ಹೊಸ ಪಾತ್ರ್ದದ ಅನ್ವೇಷಣೆಗೆ ನನ್ನ ನಾ ದಬ್ಬಿಕೊಳ್ಳುತ್ತೇನೆ.

ಪ್ರತಿಬಾರಿ ಕನ್ನಡಿ ಮೂಂದೆ ನಿಂತಾಗಲೂ,ಹೊಸ ಬಟ್ಟೆ ಆರಿಸುವಾಗಲೂ,ಗಡ್ಡ ಕೆರೆದು ಕೆನ್ನೆ ನುಣುಪು ಮಾಡಿಕೊಳ್ಳುವಗಲೂ, ಹೊಸ ಬರಹದ ಖುಷಿಯಲ್ಲೂ,ಎರಡೇ ಎರಡು ದಿನ ಕಸರತ್ತು ಮಾಡಿ ’ಅಬ್ಬ! ಸ್ವಲ್ಪವಾದರೂ ತೆಳ್ಳಗಾದೆ’ ಎಂಬ ಹುಸಿ ಭ್ರಮೆಯಲ್ಲೂ ಸಹ ನಾನು ಇಲ್ಲದ ನಿನ್ನನ್ನು ಮೆಚ್ಚಿಸಲು ಅರಿಯದೆಯೇ ಹೆಣಗಾಡುತ್ತೆನೆ.ನನ್ನ ಭಾವನೆಗಳ ಅಸ್ತಿತ್ವವೇ ನಿನ್ನನ್ನು ಕಲ್ಪಿಸಿಕೊಳ್ಳುವದರಲ್ಲಿ ಇದೆ ಎಂಬಂತೆ ಹುಚ್ಚು ಹುಚ್ಹಾಗಿ ವರ್ತಿಸುತ್ತೆನೆ. ನಿನ್ನ ’ಇರುವು’ ಸುಳ್ಳೂ ನಿಜವೋ ಗೊತ್ತಿಲ್ಲಾ, ನಿನ್ನ ಇರುವಿಕೆಯ ನಂಬಿಕೆಯಲ್ಲಿ ಬದುಕುತ್ತಿರುವ ಮತ್ತು ಸಾದ್ಯಂತ ಸುಳ್ಳೇ ಪುಳಕಗೊಳ್ಳುವ ನನ್ನ ಭಾವುಕ ಜಗತ್ತಿನ ಅಸ್ತಿತ್ವವಂತೂ ನಿತ್ಯ ನಿರಂತರ ಸತ್ಯ. ಅಷ್ಟಕ್ಕೂ ನೀನು ನಿಜವಾಗಿರಬೇಕೆಂಬ ಅನಿವಾರ್ಯತೆಯಾದರೂ ಏನು? ಕಾಣದ ದೇವರನ್ನು "ಸರ್ವವ್ಯಾಪಿ" ಎಂದು ಆರೋಪಿಸಿ ಧನ್ಯರಾಗುವ ಜಗತ್ತಿನಲ್ಲಿ, ನೀನು ಕಲ್ಪನೆಯೋ, ವಾಸ್ತವವೋ ಎಂದು ತಲೇ ಕೆಡಿಸಿಕೊಳ್ಲುವ ಜರೂರತ್ತಾದರೂ ಏನಿದೆ?

ಈ ಹುಡುಕಾಟದಲ್ಲೇ ಒಂದು ಸುಖವಿದೆ, ನಿರಂತರ ತಪನೆಯಿದೆ,ಕಾಣದ ಅದ್ರೆ ಅನುಭವಿಸಲುಬಹುದಾದ ಒಂದು ತೀವ್ರ ಉತ್ಕಟತೆಯಿದೆ, ನಿನ್ನ ಬಗೆಗಿನ ತೀರದ ಆರಾಧನಾ ಭಾವವಿದೆ, ತೀರದ ಮೋಹವೆದೆ,ಧುಮ್ಮಿಕ್ಕುವ ಭಾವನಾ ಸೆಳೆತವಿದೆ,ಸಿಹಿಯಾದ ನೋವಿದೆ ಮತ್ತೂ ಕಳೆದುಕ್ಕೊಳ್ಳದ ನಿನ್ನ ಇರುವಿಕೆಗಿನ ತುಂಬು ಭರವಸೆಯಿದೆ. ಈ ಜೀವಕ್ಕೆ ಇಷ್ಟು ಸಾಕಲ್ಲವೇ? ಯಾರಿಗ್ಗೊತ್ತು ಬೆಳಗಿನ ಕನಸುಗಳು ನಿಜವಾಗುತ್ತವೆಯಂತೆ! ಹಾಗೆ ನೀನು ಚಂದಮಾಮದ ಕಥೆಗಳಲ್ಲಿ ಬರುವ ಏಳು ಮಲ್ಲಿಗೆ ತೂಕದ ರಾಜಕುಮಾರಿಯರಂತೆ ನನ್ನೆಡೆ ನೀನು ಸಾಗಿ ಬರಬಾರದೇಕೆ?

ಅಂತಹ ಸಿಹಿಸುಳ್ಳಿನ ಚಿಪ್ಪಿನಲ್ಲಿರುವ,
ಚಿರವಿರಹಿ

Sunday, September 30, 2007

ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ.....



ಈ Week end ಯಾವ ಥೇಟರಿಗೆ ಲಗ್ಗೆ ಹಾಕಬೇಕೆಂದು ತಲೆ ಕೆರೆದುಕೊಳ್ಳುತ್ತಿರುವಾಗಲೇ ನಮ್ಮ ಮನೋಜ ಈ ವಾರ ನಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸ್ತಾರೆ ಎಂಬ ರೋಚಕ ವಿಚಾರವನ್ನು ಹೇಳಿದ.ನಿಮಗೆ ಇನ್ನೊಂದು ಮಾತು,ನಾನು ಹೊಸದಾಗಿ ಬಂದಾಗ ಈ ಬೆಂಗಳೂರಿಗರು ಹಿಂತಾ ಪ್ಯಾಲಿ ನನ್ ಮಕ್ಳು ಅಂತ ಖಂಡಿತ ಗೊತ್ತಿರಲಿಲ್ಲಾ, ನಮ್ ಕಡೆ ಗಣೇಶ ಚೌತಿ ಅಂದ್ರೆ ಎನು ಭಯ-ಭಕ್ತಿ, ಸಡಗರ, ಎಷ್ಟೊಂದು ಆಚರಣೆಗಳು ಅಂತೀರಾ? ಅದನ್ನು ಮಾಡಬಾರದು,ಇದನ್ನೂ ಮಾಡಬಾರದು, ಚಂದ್ರನ್ನ ನೋಡಬಾರದು ಅಂತೆಲ್ಲಾ ನೂರಾರು ಕಟ್ಟುಪಾಡುಗಳು, ಈ ಮುಂಡೆವಕ್ಕೆ ಒಂದಾದ್ರೂ ಬೇಡ್ವೆ? ಅದೂ ಹಾಳಾಗ್ಲಿ ಗುರುವೇ?, ಚೌತಿ ಮುಗಿದ್ರು ಈ ನನ್ ಮಕ್ಳ ಹಬ್ಬ ಮುಗಿದಿರುವದಿಲ್ಲಾ, ತಿಂಗಳು ಪೂರ್ತಿ ಡಂಕ ನಕ ಡಂಕ.. ತಮ್ಮ ಟೈಮ್ ನೋಡ್ಕೊಂಡು , ಆರ್ಕೆಸ್ಟ್ರಾ ಟೈಂ ನೊಡ್ಕೊಂಡು ಗಣೇಶನ್ನ ಕೂರಿಸೋ ನನ್ನ್ ಮಕ್ಳು ಇವರು. ಇದನ್ನು ಕುರಿತು ಸಿಕ್ಕಿದ್ದೆ ಚಾನ್ಸು ಅಂತ ಗಂಟಲು ಸರಿ ಮಾಡಿಕೊಂಡು ಭಾಷಣ ಬಿಗಿಯುತ್ತಿರುವಾಗ
ನಮ್ಮ ಮನೋಜನ ಸಹನೆ ಮೀರಿ "ಅಯ್ಯೊ ಹಾಳಾಗ್ಲಿ! ಯಾವಾಗ ಮಾಡಿದ್ರೆ ನಮಗೇನು? ನೀವು ಮಾತ್ರ ಫ್ರೈಡೆ ಸಂಜೆ ಬೇಗ ಬಂದು ಬಿಡಿ, ಇಬ್ರೂ ಪ್ರೊಗ್ರಾಮ್ ನೊಡೊಣಾ" ಅಂತ ಅಪ್ಪಣೆ ಮಾಡಿದ ನಮ್ಮ ಸುರ್ಯವಂಶಿ. ಆ ಮಹಾತ್ಮನ ಹುನ್ನಾರ ಬಲ್ಲವರಾರು?

"ಫ್ರೈಡೆ ಮದ್ಯಾಹ್ನ ಗಣೇಶನ್ನ ತರ್ತಾರೆ, ಸಾಯಂಕಾಲ ನಗೆಹಬ್ಬ, ಶನಿವಾರ ಮಧಾಹ್ನ ಮಕ್ಕಳಿಂದ ಮನರಂಜನೆ, ಸಂಜೆ ಆರ್ಕೆಸ್ಟ್ರಾ, ಭಾನುವಾರ ಗೇಮ್ಸ್ ಇರ್ತಾವೇ" ಅಂತ ಟೈಂ ಟೇಬಲ್ಲು ಸಹಾ ಹೇಳಿ ’ಇನ್ನೆನು ನಿಂದು ಮುಚ್ಕೊಂಡು ಬಾ’ ಎಂಬಂತೆ ಗುರಾಯಿಸಿ ಪೆಂಡಾಲು ಹಾಕುತ್ತಿದ್ದವರ ಜೊತೆ ಹರಟೆಗಿಳಿದ ನಮ್ಮ ಮನೋಜ್.

ಅವನಾಜ್ಞೆ ಉಲ್ಲಂಘಿಸಿದರೆ ರಾತ್ರಿ ನಿದ್ದೆ ಮಾಡಲು ಬಿಟ್ಟಾನೆಯೇ ಅಂತ ಹೆದರಿ ಶುಕ್ರವಾರ ಬೇಗ ಆಫೀಸ್ ಬಿಟ್ಟೆ. ಆಗ್ಲೆ ನಗೆಹಬ್ಬ(?) ಶುರುವಾಗಿಯೇಬಿಟ್ಟಿತ್ತು. ಯಾವ ಕೋನದಿಂದ ನೋಡಿದರೂ ಹುಡುಗಿಯರೇ ಕಾಣುವಂತಾ ಜಾಗದಲ್ಲಿ ನಮ್ಮ ಮನೋಜ ಖುರ್ಚಿ ಕಾಯ್ದಿರಿಸಿದ್ದ. ಅವನೆಡೆಗೆ ಕೃತಜ್ಞತೆಯಿಂದ ನೋಡಿ ಖುರ್ಚಿಯಲ್ಲಿ ಆಸೀನನಾದೆ. ವೇದಿಕೆ ಮೇಲೆ ನೊಡ್ತಿನೀ ಅದೇ ರಿಚರ್ಡೂ, ಅದೆ ಮೈಸುರು ಆನಂದು, ಪ್ರಾಣೇಶು.. ನಂಗಂತೂ ಸಿಕ್ಕಾಪಟ್ಟೆ ನಿರಾಶೆಯಾಯಿತು.

" ಅಲ್ವೋ ಮನೋಜ್, ಅಣ್ಣಮ್ಮನ ಉತ್ಸವಕ್ಕೂ ಇವರದೆ ಪ್ರೊಗ್ರಾಮ್ ಇತ್ತಲ್ಲವೋ? ಮತ್ತೆ ಎನೂ ಕೇಳ್ತಿಯಾ? ಹಾಡಿದ್ದಾಡೊ ಕಿಸಭಾಯಿ ದಾಸ ಎಂಬಂತೆ" ಎಂದು ಅಲವತ್ತು ಕೊಂಡೆ.

"ಅವರ ಮಾತು ಯಾವ ಬೋ.. ಮಗ ನಿಂಗೆ ಕೇಳು ಅಂದ" ಅಂತ ನಂಗೆ ಕೇಳುವಂತೆ ಗೊಣಗಿ ಆದ್ರೂ ಮಳ್ಳನಂತೆ ಮುಖದ ಮೇಲೆ ನಗು ತಂದುಕೊಂಡು " ಹ್ಹಿ ಹ್ಹಿ ಹ್ಹಿ ಅದರ ಜೊತೆ ಬೇರೆ Entertainment ಇರುತ್ತಪ್ಪಾ, ಸರಿಯಾಗಿ ಗಮನಿಸಿ" ಎಂದವನೆ Entertainment ಹುಡುಕತೊಡಗಿದ.

ಕಸದಲ್ಲಿ ರಸ ತೆಗೆಯುವ ಅವನ ಯುಕ್ತಿಗೆ ಮನದಲ್ಲೆ "ಎಲಾ ಬಡ್ಡಿಮಗನೆ" ಅನ್ಕೊಂಡು ಗಣೇಶನ ಮೂರ್ತಿ ಕಡೆ ನೊಡ್ತೀನಿ ಕೃಷ್ಣಾವತಾರಿ ಗಣೇಶ ರಾಧೆಯ ಮೇಲೆ ಕೈ ಹಾಕಿ ಕುಳಿತ್ತಿದಾನೆ. ನಂಗ್ಯಾಕೋ ಕಸಿವಿಸಿ ಅನ್ನಿಸಿ ದುಃಖ ತೋಡಿಕೊಳ್ಳಲು " ಮನು ಗಣೇಶನ ಮೂರ್ತಿ ನೊಡಿದ್ಯಾ?" ಅಂದೆ.

ಅವನಿಗೆ ಸಿಟ್ಟು ಬಂದಿರಬೇಕು ಈ ಮಗನಿಗೆ ನಾ ನೋಡು ಅಂತಿರೋದೆ ಬೇರೆ ಈ ಮಗ ನೋಡ್ತಿರೋದೆ ಬೇರೆ ಅಂತಾ, ಆದ್ರು ಭಯ ಬಕ್ತಿಯಿಂದ
" ಸಂತೋಷರ, ನಿಮ್ಮ R&D ಇಲ್ಲಿ ಬೇಡ. ಹೊರಗೆ ಹೋದಲ್ಲಾದರೂ ನಿಮ್ಮ ಹುಳುಕು ಹುಡುಕುವ ಬುದ್ಧಿ ಬಿಟ್ಟು Enjoy ಮಾಡೊದನ್ನು ಕಲಿಯಿರಿ" ಅಂತ ಉಪದೇಶ ಕಮ್ ವಾರ್ನಿಂಗ್ ಕೊಟ್ಟ.

" ಅಲ್ವೋ ಹೇಳಿ ಕೇಳಿ ಗಣೇಶ ಶುದ್ಧ ಬ್ರಹ್ಮಾಚಾರಿ, ರಾಧೆ ಪಕ್ಕ ಕುರಿಸೋದು ಅಭಾಸ ಅಗಲ್ವೇನೋ" ಅಂತ ಅವನ ಸಮರ್ಥನೆ ಬಯಸಿದೆ.

"ಹ್ಹಿ ಹ್ಹಿ ಹ್ಹಿ ಹೀಗೆ ಎಷ್ಟು ದಿನ ಅಂತ ಇದ್ದಾನು, ಅವನೂ Enjoy ಮಾಡ್ಲಿ ಬಿಡ್ರಿ. ನಿಮ್ಮ ಪಕ್ಕ ಯಾರಿಲ್ಲಾ ಅಂತ ಉರಿನಾ? ನೀವು ಸುಮ್ನ ಪ್ರೊಗ್ರಾಂ ನೊಡ್ರಿ" ಅಂತ ಉಡಾಫೆಯಿಂದ ಮಾತಾಡಿ ತನ್ನ ಚಟುವಟಿಕೆ ಮುಂದುವರೆಸಿದ.

ಸರಿ ಪ್ರೋಗ್ರಾಂ ಆದ್ರು ನೋಡಿದ್ರಾಯ್ತು ಅಂತ ನೋಡಿದ್ರೆ ರಿಚರ್ಡರ ಅವೇ ಹಳೆ ಪ್ರಸಂಗಗಳು, ಕೆಟ್ಟ ಜೋಕುಗಳು, ಮೈಸುರು ಆನಂದರ ಕಾಮೆಂಟರಿ,ಮೈಕುಣಿತ, ಪ್ರಾಣೇಶರ ಸೂಳೆಮಗ ಜೋಕುಗಳು. " ಥೂ ಸೂಳೆಮಕ್ಳಾ" ಅಂಥ ಮನಸ್ಸಲ್ಲೆ ಉಗಿದುಕೊಂಡೆ.ನಗಿಸಲು ಅವರು ಪಡುತ್ತಿದ್ದ ಕಷ್ಟ ಕಂಡು ಪಾಪ ಅನಿಸಿತು. ರೀಚರ್ಡ್ ಬೇರೆ ಹೊದ ಕಡೆಯವರನ್ನೆಲ್ಲಾ ಹೊಗಳುವ ಹೊಗಳುಭಟ್ಟತನ ಆರಂಭಿಸಿದ್ದ. ಪದೆ ಪದೆ ಸಂಕೋಚ ಪಡದೆ "ಬಾಯ್ತುಂಬ ನಗಿ ಬಾಯ್ತುಂಬ ನಗಿ" ಅಂತ ದೀನನಾಗಿ ಗೋಗರೆಯುತ್ತಿದ್ದ ಕಂಡು , ಬಾಯಿ ಬಿಟ್ಟೂ ಬೇರೆ ಅಂಗದಿಂದಲೂ ನಗಬಹುದಾ ಅನಿಸಿತು.ವೇದಿಕೆ ತುಂಬ ಅವರ ಲಘು ವರ್ತನೆ ಮತ್ತು ಹೇಳುವ ಪಿಜೇಗಳನ್ನು ಕೇಳಿ ಇನ್ನೂ ಸಹಿಸಲಾಗದು ಅಂದುಕೊಂಡು ಮನೋಜನ ಅವತ್ತಿನ ಖೋಟಾ ಮುಗಿಸಿ " ನಾಳೆ ಪೂರ್ತಿ ಕುರೋಣ" ಅಂತ ಪ್ರಮಾಣ ಮಾಡಿ ಮರಳಿ ರೂಮಿಗೆ ಕರೆದುಕೊಂಡು ಬಂದೆ.

ಶನಿವಾರವೂ ಅದೇ ಕಥೆ ಮಕ್ಕಳಿಂದ ಮನರಂಜನೆ ಅಂತಾ ಹೋದ್ರೆ ಕತ್ತೆ ವಯಸ್ಸಿನ ಇಂಗ್ಲೀಷ ಮೀಡಿಯಂ "ಮಕ್ಕಳು" ಪ್ರಾರ್ಥನೆ ಅಂತ ಅರಚಲು ಆರಂಭಿಸಿದ್ದವು. ಎಲ್ಲಾ ಸಮಿತಿ ಸದಸ್ಯರ ಮಕ್ಕಳು ಹಾಡಿ, ಕುಣಿದು, ಹಿಗ್ಗಾ ಮುಗ್ಗಾ ಪ್ರತಿಭೆ ಪ್ರದರ್ಶಿಸಿದ ಮೇಲೆ ಸಾಕಪ್ಪೋ! ಅನಿಸಿತು. ಅದು ಮುಗಿಯುತ್ತಲೇ " ಝೇಂಕಾರ ಮೇಲೊಡೀಸ್ ಮೇಲೊಡೀಸ್ ಮೇಲೊಡೀಸ್" ಅಂತಾ ಮೂರ್ನಾಲ್ಕು ಸಾರಿ ಅರಚಿ, ಜೂನಿಯರ್ ಎಸ್.ಪಿ.ಬಿ , ಜೂನಿಯರ್ ಜಾನಕಿ ಅಂತ ಎಲ್ಲ ಜೂನಿಯರಗಳಿಂದ ಅವೇ ಮಾಮೂಲು ಅರ್ಕೆಸ್ಟ್ರಾ ಗೀತೆಗಳಾದ "ಜೊತೆಯಲಿ, ಜೊತೆ ಜೊತೆಯಲಿ" , " ಹೃದಯ ಸಮುದ್ರ ಕಡೆದು"," ತಂಗಾಳಿಯಲ್ಲಿ ನಾ ತೇಲಿ ಬಂದೆ", "ಕುಚಿಕು ಕುಚಿಕು " ಮತ್ತು " ಅನುಸುತಿದೆ" "ಕರಿಯ ಐ ಲವ್ ಯೂ " ಹಾಡಿ ಕೊನೆಗೆ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ!" ಅಂತ ಮಂಗಳಾರತಿಯನ್ನೂ ಹಾಡಿ ಅಣ್ಣಾವ್ರಿಗೆ ಜೈ! ಎಂದು ಕಾರ್ಯಕ್ರಮ ಮುಗಿಸುವಷ್ಟರಲ್ಲಿ ತಲೆ ಕೆಟ್ಟೂ ಕೆರ ಹಿಡಿದು ಹೋಗಿತ್ತು "ಪಕ್ಷಿ ವೀಕ್ಷಣೆ" ಯಲ್ಲಿ ತೊಡಗಿದ್ದ ನಮ್ಮ ಅಭಿನವ ಸಲೀಂ ಅಲಿಯ " ಕಾಳು ಹಾಕುವ" ಕಾರ್ಯಕ್ರಮ ಮುಗಿಸಿ ಕರೆತರುವಷ್ಟರಲ್ಲಿ ಗಣೇಶ ಎನು ನಿನ್ನ ಲೀಲೆ ಎಂದೆನಿಸತೊಡಗಿತ್ತು..

Monday, August 27, 2007

ನೀವೇನಂತೀರಾ????????

ನಿನ್ನೆ ರಾತ್ರಿ ಮಲಗುತ್ತಿದ್ದಾಗ ಯಾಕೋ ಅಪರೂಪಕ್ಕೆ ಎಂಬಂತೆ " ರೀ ಸಂತೋಷರ, ನಾಳೆ ನಾನ್ನೂ ಲಗೂ ಎಬ್ಬಿಸ್ರಿ" ಅಂತ ಭಿನ್ನಹ ಮಾಡಿಕೊಂಡ. ಆಶ್ಚರ್ಯಚಕಿತನಾಗೆ ನಾನು " ಯಾಕೋ ಮತ್ತೆ ಕ್ರಿಕೆಟ್ ತಾಲೀಮು ಶುರುನಾ?" ಎಂದೆ ಮಾಮುಲಿನಂತೆ.

ನಖಶಿಖಾಂತ ಉರಿದು ಹೋಯ್ತು ಸೂರ್ಯವಂಶಿ " ಕಾಲೇಜು ಮತ್ತೆ ಶುರು ಆಗಿದೆ ಅಂತ ಸಾವಿರ ಸಲ ಬಡ್ಕೊಂಡಿದೀನಿ ಬೆಳಗ್ಗೆಯಿಂದ, ಮತ್ತೆ ಅದನ್ನೆ ಕೇಳ್ತಿರಲ್ಲಾ?" ಅಂದ ಸಿಟ್ತಿನಲ್ಲಿ.

"ಅಲ್ವೋ ಕಾಲೇಜನ್ನ ಅದರ ಪಾಡಿಗೆ ಬಿಟ್ಟು ತುಂಬ ದಿನ ಅಯ್ತಲ್ಲೋ? ಈಗೇನು ಒಮ್ಮೆಲೆ ಕಾಲೇಜು ನೆನಪಾಗಿದೆ ಸಾಹೇಬರಿಗೆ, ಎನ್ ವಿಷಯ, ಹೊಸ ಲವ್ವಾ?" ಎಂದು ಕಾಲೆಳೆದೆ.( ಈ ಪ್ರಾಣಿ ನಾವೆಲ್ಲಾ ಇಂಜಿನಿಯರಿಂಗ್ ನ ಕೊನೆಯ ವರ್ಷಕ್ಕೆ ಬಂದಾಗ ಹೆದರಿ ಹೆದರಿ ಕಾಲೇಜು ತಪ್ಪಿಸುತ್ತಿದ್ದರೆ, ಈ ಸೂರ್ಯವಂಶಿ ಕಾಲೇಜು ಸೇರಿದ ಹೊಸದರಲ್ಲೇ ಎಲ್ಲಾ ಕ್ಲಾಸುಗಳಿಗೆ ಅಪರೂಪವಾಗಿಬಿಟ್ಟಿದ್ದ, ಚಳಿಗಾಲದಲ್ಲಂತೂ ಮುಂಜಾನೆಯ ಕ್ಲಾಸುಗಳಿಗೆ ಈ ವಯ್ಯಾ ಹೋಗುವದೇ ಇಲ್ಲಾ! ಎಷ್ಟೊ ಸಾರಿ ಇಂತಹ ಶೀಷ್ಯೊತ್ತಮನನ್ನೂ ಕರೆಸಿ ಇವರ ದರ್ಶನಭಾಗ್ಯವನ್ನು ಅನೇಕ ಅದ್ಯಾಪಕರು ಪಡೆಯಬೇಕಾಗಿತ್ತು.. ಅಷ್ಟು ದುರ್ಲಭವಾಗಿದ್ದ ಇವನು.)

ಸ್ವಲ್ಪ ದನಿ ತಗ್ಗಿಸಿ ಹೇಳಿದ" ಎಲ್ರೂ ಕೊನೆಯ ವರ್ಷಕ್ಕೆ ಕಾಲೇಜಿಗೆ ಹೋಗಲ್ವಂತೆ, ಆದ್ರೆ ನಾ ಮಾತ್ರ ಈ ವರ್ಷನಾದ್ರೂ ರೆಗ್ಯುಲರ್ ಆಗಿ ಹೋಗಬೇಕು ಅಂತ ಅನ್ಕೊಂಡಿನಿ" ಅಂದ..
ಓಹೋ ಸಾಹೇಬರು ಇನ್ನೂ ಅನ್ಕೊಂಡಿದಾರೆ ಅಂದುಕೊಂಡು ನಗುತ್ತಾ " ನಿಮ್ಮ ಪ್ರಿನ್ಸಿಗೆ ಹೇಳಿದ್ದರೆ ಇಡಿ ಕಾಲೀಜೆಗೆ ಸ್ವೀಟ್ ಹಂಚಿರೋರು, ನಿಮ್ಮಂತಹ ಪ್ರಕಾಂಡ ಪಂಡಿತರ ಪುನರಾಗಮನದ ಖುಷಿಗೆ" ಎಂದೆ.

"ನಿಮ್ದೂ ಮಸ್ಕೀರಿ ಭಾಳ ಆತು, ನಾ ನಿಮ್ಮನ್ನ ಒಂದ ಮಾತು ಕೇಳಲಾ?" ಅಂದ ಮನೋಜ್..

ನಮ್ ಸಿಕ್ಸ್ತ್ ಸೆನ್ಸು ಆಗ್ಲೆ ನಮ್ಮನ್ನು ಎಚ್ಚರಿಸತೊಡಗಿತು, ಆದ್ರೂ ಎನು ಈ ನನ ಮಗ ಯಾವಗ್ಲೂ ಕೇಳಿಯೇ ಹೇಳೊದು ಅಂತಾ ಗೊಣಕ್ಕೊಂಡು " ಹೊತ್ತಾಗೈತಿ ಬೇಗ ಹೇಳಿ ಮುಗಿಸು, ಬೆಳಗ್ಗೆ ಬೇಗ ಬೇರೆ ಏಳಬೇಕು ನೀನು" ಅಂದು ಸೂಕ್ಷ್ಮವಾಗಿ ಹೇಳುವ ಯತ್ನ ಮಾಡಿದೆ.

ಮಾತೂ ಮುಗಿಸುವದೇ ತಡ ಚಕ್ಕನೇ ಎದ್ದವನೇ ಒಳಗೆ ಹೋಗಿ ವಿಜಯ ಕರ್ನಾಟಕ ಪತ್ರಿಕೆಯ " ಮಹಿಳಾ ವಿಜಯ"ದ ಸಂಚಿಕೆಗಳನ್ನು ನನ್ನ ಮುಂದೆ ಗುಡ್ದೆ ಹಾಕಿ " ನೋಡ್ರಿ ಸಂತೋಷರಾ, ಎನೀದರ ಅರ್ಥ? ಎಂದು ಸ್ವಲ್ಪ ಸೀರಿಯಸ್ಸಾಗೇ ಕೇಳಿದ.

ಏನು ನೋಡುವದು ಮಣ್ಣು, ಅರ್ಥ ಆದ್ರೆ ತಾನೆ? ಆದ್ರೆ ಮನಸ್ಸಿನ ಮೂಲೆಯಲ್ಲಿ ಏ ಮನುಷ್ಯನ ಹೊಸ ಸಂಶೋಧನೆಯ ಬಗೆಗೆ ಕೂತುಹಲ ಮೂಡತೊಡಗಿತು, ಕೊನೆಗೆ ಸೋತವನಂತೆ " ರಾತ್ರೀಲಿ ಯಾಕೋ ಪೇಪರ್ ತೋರಿಸಿ ಪ್ರಾಣ ತಿಂತೀಯಾ? ಎನೂ ಅಂತ ಬಿಡಿಸಿ ಹೇಳ್ಬಾರದಾ?" ಅಂತ ಅಲವತ್ತುಕೊಂಡೆ.

ಛಲ ಬಿಡದ ತ್ರಿವಿಕ್ರಮನಂತೆ "ಸ್ವಲ್ಪ ಗಮನಿಸಿ ನೋಡಿ, ಪ್ಲೀಸ್ ಪ್ಲೀಸ್ " ಅಂದ.

ಇದೋಳ್ಳೆ ಗೋಳಾಯ್ತಲ್ಲಾ ಅಂದುಕೊಂಡು ಗಮನಿಸಿದರೆ ಎಲ್ಲಾ ಸಹಜಾರ "ಬಾಲ್ಕನಿಯಿಂದ" ಅಂಕಣದ ಪೇಪರುಗಳು, ಯಾಕೋ ಕೇಸು ಸೀರಿಯಸ್ಸೆ ಅನಿಸಿ " ನಾ ಎಲ್ಲ್ಲಾ ಓದೀದಿನಿ, ನಿನ್ನ ಪ್ರಾಬ್ಲಮ್ ಏನು ಶಿವಾ?" ಅಂದು ಬೇಸರಿಸಿಕೊಂಡು ಹೇಳಿದೆ.

" ಅದಲ್ರೀ ಫೋಟೊ ನೋಡ್ರಿ ಫೋಟೊ " ಅಂದು ಹಲ್ಕಿರಿದ.

" ನೋಡ್ದೆ, ಎನಾಯ್ತಿಗ?" ಎಂದು ಖಾರವಾಗಿ ಕೇಳಿದ್ದಕ್ಕೆ

" ಅಲ್ಲೇ ಇರೋದು ಪಾಯಿಂಟು, ಅಲ್ಲಾ ಆಕಿಗೆ ತನ್ನ ಐಡೆಂಟಿಟಿ ತೋರಿಸೋದು ಇಷ್ಟ ಇಲ್ಲಾ ಅಂದ್ರೆ ಈ ಫೋಟೊನೂ ಹಾಕಬಾರದಿತ್ತು,ಆದ್ರು ನಮ್ ಕಡೆ ಬೆನ್ನು ತಿರುಗಿಸಿದ ಫೋಟೋ ಇದೆ, ಏನಿದರ ಅರ್ಥ?" ಎಂದು ಕೊನೇಗೂ ಬಾಯಿಬಿಟ್ಟ..

ಹೌದಲ್ಲವೇ ಅನ್ನಿಸಿತು ಒಂದು ಕ್ಷಣ ಆದ್ರೂ ಮಾತು ಮೂಂದುವರೆಸಲು ಇಷ್ಟವಿಲ್ಲದೆ " ಅವರವರ ಇಷ್ತ ಬಿಡೊ, ಬೇಕಾದ ಮಾಡ್ಕೊಳ್ಲಿ ಮತ್ತು ಬೇಕಾದ್ದು ಫೋಟೊ ಹಾಕ್ಕೊಳ್ಲಿ ನೀ ಯಾಕೆ ಚಿಂತಿ ಮಾಡ್ತಿ, ಈಗ ಮಲಗು" ಅಂದೆ..

" ನಿಮಗೆ ಎಲ್ಲಾ ಸಿಲ್ಲಿಯಾಗೇ ಕಾಣೊದು, ಅದು ಉದ್ದೇಶಪೂರ್ವಕವಾಗಿ ಹಾಕಿರೋ ಫೋಟೊ," ಎಂದು ಜಗ್ಗ್ಗನ್ನೆತ್ತಿ ಗಟಗಟ ನೀರು ಕುಡಿದವನೆ ಮತ್ತೆ ಶುರು ಮಾಡಿದ ಅವನ ಬಾಯಿಂದನೆ ಕೇಳಿ
" ನೋಡ್ರಿ ಸಂತೋಷರ, ಇದೂ ಎಲ್ಲಾ ಹುಡುಗ್ಯಾರ ಲಕ್ಷಣ, ಕೆಲ ಹುಡುಗಿಯರಿಗೆ ನಾವು ಚಂದ ಅದೀವಿ ಅನ್ನೊದು ಗೊತ್ತಿರ್ತದ, ಮತ್ತು ಫೋಟೊ ಹಾಕಿ ತಮ್ಮ ಐಡೆಂಟಿಟಿ ಬಿಟ್ಟುಕೊಡಲೂಬಾರದು ಅಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಂತ ಸುಮ್ನಿರೋದು ಇಲ್ಲಾ, ಅರ್ಧ ಮರ್ಧ ಮುಖಾ ತೋರಿಸಿ ನಮ್ ಹುಡುಗ್ರ್ ಕೂತುಹಲ ಹೆಚ್ಚಿಸ್ತಾರ. ಅದು ಬೇಡಾ ಅಂದ್ರ ಪೂರಾ ಫೋಟೊ ಹಾಕಬೇಕು, ಇಲ್ಲಾಂದ್ರೆ ಹಾಕಲೇಬಾರದಿತ್ತು, ಬಿಟ್ಟಿದ್ರೆ ಏನು ಗಂಟು ಖರ್ಚಾಕ್ತಿರಲಿಲ್ಲ್ಲ. ಈ ತರ ನಮ್ ತಲಿಯಾಗ ಹುಳ ಬಿಡ್ದಕ ಹೀಂಗ್ ಮಾಡ್ತಾರ, ಬನ್ನಿ ಬೇಕಾದ್ರ ಆರ್ಕುಟನ್ಯಾಗ್ ನಮ್ಮ್ ಕಾಲೇಜಿನ ಮಸ್ತ ಮಸ್ತ ಹುಡುಗ್ಯಾರು ಸಹ ಅರ್ಧ ಮರ್ಧ ಫೊಟೊ ಹಾಕೀರೊದನ್ನ ತೋರೊಸ್ತಿನಿ, ಹಿಂತಾ ಸಾಕಷ್ಟು ಹುಡುಗ್ಯಾರ್ನ್ ತೋರಿಸ್ತಿನಿ. ಅವರ ಉದ್ದೀಶವೇ ಅರ್ಥ ಆಗೊಲ್ಲಾ? ಅವರು ಏನು ಅನ್ಕೊಂಡು ಹೀಗೆ ಮಾಡ್ತಾರೆ? ಅವರ ಸೈಕಾಲಜಿ ಏನು?" ಅಂತೆಲ್ಲಾ ಪ್ರಶ್ನಾವಳಿಗಳನ್ನು ಎಸೆದು ನನ್ನ ಕಡೆಗೆ ನೋಡಿದ..

ನಂಗೂ ಈ ಪುಣ್ಯಾತ್ಮನ ಮಾತುಗಳು ತುಸುವಾದರು ಹೌದೆನಿಸಿತು, ಅದರೆ ಅವನ ಪ್ರಶ್ನೆಗಳಿಗೆ ಉತ್ತರ ಮಾತ್ರ ದೇವರಾಣೆಗೆ ಹೋಳೆಯಲಿಲ್ಲ.ಅದಕ್ಕೆ ನೀವೆನಂತೀರಾ ಅಂತ ಪೊಸ್ಟಿಸಿದ್ದೇನೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..

( ಇದನ್ನು ಇಬ್ಬರ ಕುತೂಹಲಿ ಬ್ರಹ್ಮಾಚಾರಿಗಳ ಸಂಭಾಷಣೆ ಎಂದೊ ನೋಡಿರಿ ಹೊರತು ಇದರ ಹೀಂದೆ ಯಾವುದೋ ಘನ ಉದ್ದೇಶಗಳಿಲ್ಲ್ಲಾ! ಕೇವಲ ತಮಾಷೆಭರಿತ ಕೂತುಹಲದಿಂದ ಇದನ್ನು ಪ್ರಕಟಿಸಿದ್ದೇನೆ, ಯಾರಿಗಾದರೂ ನೋವಾದರೆ ಕ್ಶಮಿಸುವ ದೊಡ್ಡತನವಿರಲಿ)

Monday, June 18, 2007

ಮುಂಗಾರು ಮಳೆ ಮತ್ತು ನಿರರ್ಥಕ ಭಾನುವಾರ..



ಪ್ರತಿ ಭಾನುವಾರದಂತೆ ಈ ಭಾನುವಾರವು ಹೊತ್ತೆರುವವರೆಗೂ ಹಾಸಿಗೆಯಲ್ಲಿ ಹೊರಳಾಡಿ ಪ್ರತಿಬಾರಿಯೂ ನಮ್ಮ ಹಿಂದಿನ " ಲೇಟಾಗಿ ಎದ್ದ" ಧಾಖಲೆಗಳನ್ನುಉತ್ತಮಪಡಿಸುತ್ತಾ ಸಾಗಿರುವ ನಂಗೆ, ರೂಮಿಗೆ ಹೊಸದಾಗಿ ಬಂದು ವಕ್ಕರಿಸಿರುವ ಅನಿವಾರ್ಯ ಮಿತ್ರ ರಾಜು ಗೊಳಸಂಗಿ ಅಲಿಯಾಸ್ ಫಿನಿಕ್ಸನ್ನು ಎಬ್ಬಿಸಿ, ಮಾಮೂಲಿನಂತೆ ಮೋಬೈಲಿನಲ್ಲಿ ಕಣ್ಣಾಡಿಸಿದಾಗ, ತನ್ನ ಕ್ರಿಕೆಟ್ಟ್ ತಾಲಿಮಿಗಾಗಿ ಬೇಗ ಎದ್ದು(ದೇವರಾಣೆಗೂ ಪರೀಕ್ಷೆಗೂ ಬೇಗ ಏಳದ ಸೂರ್ಯವಂಶಿ)ಕ್ರಿಕೆಟ್ಟು ಆಡಲು ಹೋಗಿದ್ದ ನಮ್ಮ ಮನೋಜನ ಮೇಸೆಜು ನೊಡಿದ ತಕ್ಷಣ ನಂಗೆ ಎನೋ ಘಾತ ಕಾದಿದೆ ಅನಿಸ್ತು. ಹೀಗಿತ್ತು ಅವನ ಮೇಸೆಜು "Lets go to mungaaru male, get tickets for me too, I ll come n join " ಎಂಬ ಹೊಸ ಠರಾವನ್ನು ಪಾಸು ಮಾಡಿ, ಮೊದಲೇ ಲೇಟಾಗಿ ಎದ್ದ ನಮಗೆ ಇನ್ನಷ್ಟು ಗೊಂದಲ ಮೂಡಿಸಿ ಧನ್ಯನಾದ. ಹಾಂ! ನಮ್ಮ ಮನೋಜ ಬಿ ಎಮ್ ಎಸ್ ನಲ್ಲಿ ನಡೆದ ’ಉತ್ಸವ’ ನ ಕನ್ನಡ ಚಿತ್ರವಿಮರ್ಶೆ ಸ್ಪರ್ದೆಯಲ್ಲಿ " ಮುಂಗಾರು ಮಳೆಯನ್ನು" ಹಿಗ್ಗಾ ಮುಗ್ಗಾ ವಿಮರ್ಶಿಸಿ ಪ್ರಥಮ ಸ್ಥಾನ ಪಡೆದ ಮೇಲೆಯಂತೂ ಆ ಚಿತ್ರದ ಮೇಲಿನ ಗೌರವ,ಭಕ್ತಿ ಇನ್ನೂ ಹೆಚ್ಚಾಗಿದೆ, ಆ ಪಾಪಿ ಮುಂಡೆದಕ್ಕೆ..

ವಾಚು ನೋಡಿದವನೇ ನಾನು ಫಿನಿಕ್ಸನ್ನು ಉದ್ದೆಶಿಸಿ " ಲೇ ನಂಗಂತೂ ರೆಡಿಯಾಗಲೂ ಹತ್ತು ನಿಮಿಷ ಸಾಕು,ಸೂ... ಮಗನ ಹುಡುಗ್ಯಾರ ತರಾ ತಾಸುಗಟ್ಲೆ ತೊಗೋಬ್ಯಾಡ, ಲಗೂ ನಡಿ ಮಗನ ಪಿಚ್ಚರಿಗೆ ಹೋಗುನು" ಅಂದೆ. ಮುಂಗಾರು ಮಳೆಯನ್ನು ನನ್ನೊಂದಿಗೆ ನೋಡಿ ತನ್ನೆಲ್ಲಾ ಸುಖ ದುಃಖಗಳನ್ನು ಆ ಚಿತ್ರದೊಂದಿಗೆ ಸಮೀಕರಿಸಿ, ಒಂದು ವಾರ ಕಾಲ ರಾತ್ರಿಯೆಲ್ಲಾ "ಬ್ಲೇಡಾಯಣ"ಕ್ಕೆ ಸಾಕಾಗುವಷ್ಟು ಸರಕು ಹೊಂದಿಸಲು ನಮ್ಮ ಫಿನಿಕ್ಸಿಗೆ ಸುವರ್ಣಾವಕಾಶವಾಯಿತು. ತಟಕ್ಕನೆ " ನೋಡ ಮಗನ ೧೦ ನ್ನುವಳಗ ರೆಡಿ ಆಕ್ಕೇನಿ" ಎಂದವನೆ ನಮ್ಮ ರಾಜೀವ ದಿಕ್ಷಿತರ ಭಾಷಣದ ಪ್ರೇರಣೆಯಿಂದ ಜಾಗೃತವಾದ ನಮ್ಮ ಸ್ವದೇಶ ಪ್ರೇಮಕ್ಕೆ ಕುರುಹಾಗಿರುವ "ಮಿಸ್ವಾಕ್" ಟೂತ್ ಪೇಸ್ಟನಿಂದ ಹಲ್ಲುಜ್ಜತೊಡಗಿದ.ಹಾಗೂ ಹೀಗೂ ಮಾಡಿ ರೆಡಿಯಾಗುವಷ್ಟರಲ್ಲಿ ನಾನು ಬಾತ್ ರೂಮಿನಿಂದ "ರೋಕ್ಕ ತಗೋಳ್ಲೆ ಫಿನಿಕ್ಸು" ಅಂದೆ, ಎಲ್ಲರ ಪ್ಯಾಂಟು ತಡಕಾಡಿ ಮೂರು ಜನಕಾಗುವಷ್ಟು ದುಡ್ದು ಹೋಂದಿಸುಷ್ಟರಲ್ಲಿ ಫಿನಿಕ್ಸು ಗುರ್ರೆನತೊಡಗಿತ್ತು " ಈ ಮಗಗ ಸಾವಿರ ಸರ್ತಿ ಹೇಳೆನಿ, ಜಾಸ್ತಿ ರೊಕ್ಕ ಇಟ್ಕೊಲೆ ಮಗನ ಅಂತ,ಮ್ಯಾಲಿಂದ ಮ್ಯಾಲೆ ಎ ಟಿ ಎಮ್ ಗೆ ಹೋಗಿ ಅವರಮ್ಮ ತರ್ತಾಳೇನು?" ಎಂದು ತನ್ನ ಶುಧ್ದ ಗಾವಟಿ ಭಾಷೆಯಲ್ಲಿ ಗೊಣಗತೊಡಗಿ ನನ್ನ ಮತ್ತು ನಾನು ಕೆಲಸ(?) ಮಾಡುವ ಕಂಪನಿಯ ಮರ್ಯಾದೆಯನ್ನು ಸಿನಿಮಾ ಟಿಕೇಟ್ಟಿಗಾಗಿ ಹರಾಜು ಹಾಕತೊಡಗಿದ . ಸೂಟ್ ಕೇಸಿನಿಂದ ಇಸ್ತ್ರಿ ಮಾಡಿದ ಬಟ್ಟೆ ತೆಗೆಯಲು ಹೋದ ನಂಗೆ " ಲೇ ಪ್ಯಾಲಿ, ನಿಂಗೆನರ ಹೆಣ್ಣ ನೊಡಾಕ ಹೋಂಟೆವಿ ಅನ್ಕೊಂಡಿಯನ? ಸುಮ್ನ ಇದ್ದಿದ್ದ ಹಾಕ್ಕೊಂಡ್ ಬಾರಲೇ" ಎಂದು ಎಚ್ಚರಿಸಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಪ್ರಜ್ಞೆಗೆ ಅವಮಾನ ಮಾಡಿ ಅಂತು ಇಂತೂ ’ಸೂರಿ ದುನಿಯಾ’ದ ಸ್ಟೈಲಿನಲ್ಲಿ ತಯಾರಾಗಿ ಹೋರಟೆವು .( ಸ್ನಾನ, ಪೂಜೆಗಳೆಲ್ಲವನ್ನು ಬೆಳಗ್ಗೆ ಮಾಡಿದರೆ ಬ್ಯಾಚುಲರ ಜೀವನಕ್ಕೆ ಅವಮಾನ ಎಂದು ಭಾವಿಸಿರುವ ನಾವು ಅದರ ಯೋಚನೆಯನ್ನೂ ಸಹ ಮಾಡುವದಿಲ್ಲಾ, ನಮ್ಮದೆನಿದ್ದರೂ " ನೀರು ಬಚಾವೋ ಆಂದೋಲನ")

ನಮ್ಮ ಮೆಚ್ಚಿನ ಪೂರಿ ತಿನ್ನುವಾಗಲೆ ನಮ್ಮ ಮನೋಜನ ಕಾಲ್ ಬಂತು " ರೀ ನಾನು ಗಣೇಶ ಭವನದಲ್ಲೆದಿನಿ, ಬೇಗ ಬರ್ರಿ" ಎಂದ. " ಅಲ್ಲೆ ನಿಂತಿರೋ, ನಾವು ಬರ್ತೆವಿ " ಅಂತ ಭಿನ್ನವಿಸಿಕೊಂಡು ಬಸ್ಸೇರಿ ಅವನನ್ನು ಸೇರಿಕೋಂಡು, ಮೂರು ಜನರ ಸವಾರಿ ಉಮಾ ಥೆಟರಿನತ್ತ ಸಾಗತೊಡಗಿತು. ಬಸ್ಸಲ್ಲಿ ಟಿಕೇಟ್ಟು ಕೊಡದೆ ಚಿಲ್ಲರೆ ಹಿಂದಿರುಗಿಸಿದ ಕಂಡಕ್ಟರ್ ಮೇಲೆ ಗುರಾಯಿಸಿ ಫಿನಿಕ್ಸು ತನ್ನ ದೇಶಭಕ್ತಿಯನ್ನು ಖಾತ್ರಿ ಮಾಡಿಕೊಳ್ಳುವದರೊಂದಿಗೆ ಉಳಿದವರಿಗೂ ಅದರ ಸ್ಯಾಂಪಲ್ಲು ತೋರಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ.ಟಾಕೀಸಿನ ಮುಂದೆ ಚಲಿಸುತ್ತಿರುವ ಬಸ್ಸಿನಿಂದ ಹಾರಿಕೊಂಡು ನಮ್ಮ ಪೂರ್ವಜರಿಗೆ, ನಮ್ಮ ಶಕ್ತಾನುಸಾರ ಮರ್ಯಾದೆ ಸಲ್ಲಿಸಿದೆವು (ತಮ್ಮ ಅವಗಾಹನೆಗಾಗಿ ’ಮಂಗನಿಂದ ಮಾನವ”).ಉತ್ತರ ಕರ್ನಾಟಕದ ನಮಗೆ ಇಂತಹ ಸರ್ಕಸ್ಸುಗಳೆಲ್ಲಾ ಮಾಮೂಲಿಯಾಗಿಬಿಟ್ಟಿರುತ್ತವೆ. ನಮ್ಮ ವಿದ್ಯೆಗೆ ನಾವೇ ಬೆನ್ನು ಚಪ್ಪರಿಸಿಕೊಂಡು ’ಉಮಾ’ಥೇಟರ್ ಹೋಕ್ಕೆವು.

ಕಡೆಗೂ ಮಾರ್ನಿಂಗ್ ಶೋ ದ ಸರಿಯಾದ ವೇಳೆಗೆ ಬಂದ ನಮ್ಮ ಸಮಯಪ್ರಜ್ಞೆಯನ್ನು ನಾವೇ ಕೊಂಡಾಡಿಕೋಂಡೆವು.ಮತ್ತೆ ಶುರುವಾಯ್ತು ಇನ್ನೊಂದು ಜಟಾಪಟಿ " ಸಂತೋಷರ, ಮೂರು ಬಾಲ್ಕನಿ ತಗೋರಿ" ಅಂದ ನಮ್ಮ ಮನೋಜ, ಅವನಿಗೋ ಪಾಪ, ಹುಡುಗಿಯರು ಬಾಲ್ಕನಿಯಲ್ಲಿ ಮಾತ್ರ ಇರುತ್ತಾರೆ ಎಂಬುದು ಅವನ ಹಳೆಯ ಅನುಭವಗಳಿಂದ ಖಾತ್ರಿಯಾಗಿತ್ತು.ತಕ್ಷಣ ಜಾಗ್ರತನಾದ ಫಿನಿಕ್ಸು " ಬಾಲ್ಕನ್ಯಾಗ ಕುಂತ ನೊಡಿದ್ರ ಐಶ್ವರ್ಯ ಬಂದು ಕುಣಿತಾಳೆನ? ಎಲ್ಲಿ ನೊಡಿದ್ರು ಅದ ಸ್ಕ್ರೀನು, ಕೆಳಗ ತಗೊಳೊನು, ರೊಕ್ಕಕ ಕಿಮ್ಮತ ಇಲ್ಲೇನು?" ಎಂದು ನಮ್ಮ ಮನೋಜನಿಗೆ ಸವಾಲೆಸೆದ. ಅಷ್ಟರಲ್ಲಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಜಾಗ್ರತನಾಗಿ " ಇಲ್ಲಾ ಇಲ್ಲ! ಬಾಲ್ಕನಿಗೇ ಹೋಗೊದು ಯಾರಾದ್ರು ಫ್ರೆಂಡ್ಸು ನನ್ನ ಕೆಳಗ ಕೂಂತಿದ್ದು ನೋಡಿದ್ರ ನನ್ನ ’ಜಿಪುಣ ನನ ಮಗ’ ಅಂತ ಜೋಕ್ ಮಾಡ್ತಾರೆ" ಎಂದು ಅಲವತ್ತುಕೊಂಡೆ. ತನ್ನ ಬಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದನ್ನು ಕಂಡು ಮನೋಜ್ ಹಿರಿ ಹಿರಿ ಹಿಗ್ಗಿದ. ಅಷ್ಟಕ್ಕೆ ಬಿಟ್ಟಾನೆಯೆ ಫಿನಿಕ್ಸು, ದುಡ್ಡಿನ ಬಗ್ಗೆ, ಮದ್ಯಮ ವರ್ಗದ ಬವಣೆ ಬಗ್ಗೆ ಮನಮುಟ್ಟುವಂತೆ ರಜನಿ ಸ್ಟೈಲಲ್ಲಿ ಡೈಲಾಗ್ ಬಿಟ್ಟು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಿ, ಕೊನೆಗೂ ಡ್ರೆಸ್ ಸರ್ಕಲ್ಲಿನಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿ ವಿಜಯದ ನಗೆ ಬೀರಿದ. ಮನೋಜನ ಮುಖದಲ್ಲಿ ಮಾತ್ರ ನಿರಾಶೆಭರಿತ ಆಕ್ರೋಶ ಎದ್ದು ಕಾಣುತ್ತಿತ್ತು.

ಈ ಮೊದಲು ಹಲವಾರು ಭಾರಿ ನೊಡಿದ್ದರಿಂದಲೊ ಎನೋ ಮೊದಲಾರ್ದ ಬೋರ್ ಆಗತೊಡಗಿತು. ಮನೋಜನ ಭಾಷೆಯಲ್ಲಿ ಸ್ವಲ್ಪವು ಫೀಲ್ ಆಗಲಿಲ್ಲಾ.ಇಂಟರವೆಲ್ಲಿನಲ್ಲಿ ಕಂಪೌಂಡ ಹಾರಿ "2 by 3 " ಚಹಾ ಕುಡಿದು ಬಂದು, ಉಳಿದ ಭಾಗವನ್ನು ನೋಡತೋಡಗಿದೆವು.ಮೂವರೂ ನಮ್ಮ ನಮ್ಮ ಮಾಜಿ ಲವ್ವರುಗಳನ್ನು ಮನದಲ್ಲಿ ನೆನೆಸಿಕೊಂಡು ಫೀಲ್ ಆದದ್ದೆ ಆದದ್ದು. ಗಣೇಶನ ಪ್ರತಿ ಡೈಲಾಗು ನಮ್ಮ ಜೀವನದಲ್ಲಿ ನಡೆದದ್ದೆನೋ ಎಂಬಂತೆ ಭಾಸವಾಗತೊಡಗಿ, ಅವನ ಕಷ್ಟದಲ್ಲಿ ನಾವೂ ಭಾಗಿಯಾಗತೊಡಗಿದೆವು. ಅಂತು ಇಂತೂ ಯದ್ವಾ ತದ್ವಾ ಫೀಲ್ ಆಗಿ " ಕೊಟ್ಟ ರೊಕ್ಕಕಂತೂ ಮೋಸ ಇಲ್ಲಾ" ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಂಡು ಚಿತ್ರ ಕ್ಲೈಮಾಕ್ಸ್ ತಲುಪಿದಾಗ ನಾವು ನಮ್ ಫೀಲಿಂಗಿನ ತಾರಕಕ್ಕೆರಿದೆವು.ಗಣೇಶ " ಅವಳ ಹೆಸರು ಆ ಪುಣ್ಯಾತ್ಮನ ಹಣೇಲಿ ಬರೆದಿದೆ" ಅಂತ ವಿಲನ್ ಜಾಲಿಯನ್ನುದ್ದೇಶಿಸಿ ಹೇಳಿದ ಮಾತಿಗೆ ಮನೋಜ " ತೂ ಅವನವ್ವನ ನಮ್ ಡವ್ ಹೆಸರು ಯಾವ ನನ್ ಮಗನ್ನ್ ಹಣೆಲಿ ಬರೆದಿದೆಯೋ " ಅಂತ ಆವೇಶಭರಿತನಾಗಿ ಹೇಳಿದ ಮಾತಿಗೆ " ಇನ್ನೂ ಚಾನ್ಸಿದೆ ಮನೋಜಾ, ಟ್ರೈ ಮಾಡುವಿಯಂತೆ" ಅಂತ ನಾವಿಬ್ಬರು ಅವನನ್ನು ಸಂತೈಸಬೇಕಾಯ್ತು. ಅಂತು ಇಂತೂ ಒಬ್ಬರನ್ನೋಬ್ಬರು ಸಮಾಧಾನಿಸಿಕೊಂಡು ’ದೇವದಾಸ್’ ಸತ್ತಾಗ ನಾವು ಕಣ್ತುಂಬಿಕೊಂಡೆವು.ಚಿತ್ರ ಮುಗಿದಾಗ ’ಮುಂಗಾರು ಮಳೆ’ಯನ್ನು ನಾಲ್ಕನೇ ಬಾರಿಗೆ ನೋಡಿದ ಸಾಧಕರ ಲಿಸ್ಟಿಗೆ ಸೇರ್ಪಡೆಯಾದೆವು( ಎಲ್ಲಾ ಮನೋಜನ ಕೃಪೆ)" ಅನಿಸುತಿದೆ ಯಾಕೋ ಇಂದು" ಎಂದು ತಾರಕ ಸ್ವರದಲ್ಲಿ ಹಾಡುತ್ತಾ(?) ಎಲ್ಲರೂ ಹೊರಬಿದ್ದೆವು..

ಸುದೀಪ್ ನ "ಹುಚ್ಚ" ಚಿತ್ರ ನೋಡಿ ಭಗ್ನಪ್ರೇಮಿಯ ಕಲ್ಪನೆಯನ್ನು ಮನದಲ್ಲೇ ಮಾಡಿಕೊಂಡಿದ್ದ ನಾವು ಮತ್ತೋಮ್ಮೆ ಕುರುಚಲು ಗಡ್ಡ ಬಿಡುವ ಪ್ರತಿಜ್ಞೆ ಮಾಡಿ, " ಉಸಿರೆ ಉಸಿರೆ" ಎನ್ನುತ್ತಾ ಧಮ್ ಹೊಡೆಯುವ ಧೈರ್ಯವಿಲ್ಲದ ನಾವು ಚಹಾವನ್ನಾದರೂ ವಿಸ್ಕಿ ಎಂದುಕೊಂಡು ಗುಟುಕರಿಸದಿದ್ದರೆ ಇಡೀ "ಭಗ್ನಪ್ರೇಮಿ"ಗಳಿಗೆ ಅವಮಾನ ಮಾಡಿದಂತೆ ಎಂದು ’ಹಳ್ಳಿತಿಂಡಿ’ಗೆ ಚಹಾ ಕುಡಿಯಲು ಹೆಜ್ಜೆ ಹಾಕಿದೆವು..

Tuesday, June 5, 2007

ರಾಯರ ಮಠದ ಹುಡುಗಿಗೆ....


ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ ಅಂದ್ರೆ ಇಷ್ಟ ಎಂದು?. ನಿನ್ನ ನೋಡಿದ ತಕ್ಷಣ " ತಥ್ ಇವತ್ತೆ ಈ ಮಾಸಲು ಟೀ ಶರ್ಟು ಹಾಕ್ಕೋಂಡು ಮಠಕ್ಕೆ ಬರಬೆಕಿತ್ತಾ ನಾನು " ಎಂದು ಸಾವಿರ ಸರ್ತಿ ಹಳಿದುಕೊಂಡಿದ್ದಿನಿ.

ಸತ್ಯವಾಗ್ಲೂ ಹೆಳ್ತಿನಿ, ನಂಗೆ ಬುದ್ಧಿ ಬಂದಾಗಿನಿಂದ ದೇವಸ್ಥಾನಕ್ಕೆ, ಮಠಕ್ಕೆ ಅಂತ ಹೋದವನೇ ಅಲ್ಲಾ!.ಆಕಸ್ಮಾತ್ ಹೊದ್ರು ದೇವರಿಗೆ ಕೈ ಮುಗಿದದ್ದು ನೆನಪಿಲ್ಲಾ. ನಮ್ಮ ಮನೋಜ್ ಹೇಳಿಯೇ ಹೇಳ್ತಿದ್ದ " ರೀ ಗುರುವಾರ ರಾಘವೇಂದ್ರನ ಮಠಕ್ಕೆ ಹೋಗಬೇಕ್ರಿ, ಏನ್ ಹೇಳ್ಲಿ ನಿಮ್ಗ, ಕಂಡಾಪಟಿ ಮಸ್ತ್ ಹುಡುಗ್ಯಾರು ಬಂದಿರ್ತಾರ" ಅಂತ ಅತ್ಯಂತ ಉಮ್ಮೆದಿಯಿಂದ ಹೇಳಿದ್ದ.I swear ಇವತ್ತಿನವರೆಗೂ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೋಗಿರಲಿಲ್ಲಾ. ಇವತ್ತೂ ಸಹ ಅವನು ಒತ್ತಾಯ ಮಾಡಿದ ಅಂತ ಬಂದೆನೆ ಹೊರ್ತು, ಬರಲೇಬೇಕು ಅಂತಲ್ಲಾ.ಆದ್ರೆ ಈಗಲೆ ಹೇಳಿಬಿಡ್ತಿನಿ ಇನ್ನೂ ಮುಂದಿನ ಪ್ರತಿ ಗುರುವಾರಗಳಲ್ಲಿ ಮಠಕ್ಕೆ ನನ್ನ ಕಡ್ಡಾಯ ಹಾಜರಾತಿ ಇರುತ್ತೆ, ಅದು ಕೇವಲ ನಿನಗಾಗಿ, ನಿನ್ನ ಬರುವಿಕೆಗಾಗಿ..

ನೀನು ನನ್ನ ಕಿರುಗಣ್ಣಿನಲ್ಲೆ ನೋಡಿದ್ಯಾ?, ಗೊತ್ತಿಲ್ಲಾ! ಆದ್ರೆ ನೋಡಿದೆ ಅಂತ ಸುಳ್ಳೆ ಅಂದ್ಕೊಂಡು ಖುಶಿ ಪಡೊದ್ರಲ್ಲೂ ಇಷ್ಟು ಸುಖವಿರುತ್ತಾ?. ಏನು ಮಜಾ ಅಂತೀನಿ ಒಂದು ಮೂಲೆಯಲ್ಲಿ ನಿರ್ಭಾವುಕನಾಗಿ ಕೂತಿದ್ದ ನಾನು ಪ್ಯಾಲಿಯಂತೆ ನಿನ್ನ ಹಿಂದೆ ಸುತ್ತಿದ್ದೆ ಸುತ್ತಿದ್ದು.ನಿಂಗೆ ಮುಜುಗುರವಾಯ್ತಾ ಚಿನ್ನು?. ನೀನಿಟ್ಟ ಹೆಜ್ಜೆಯ ಮೇಲೆ ನಾನು ಸಹ ಜಾಗರೂಕತೆಯಿಂದ ಪಾದವೂರಿ ಪ್ರದಕ್ಷಿಣೆ ಹಾಕದೆ ಹೋದರೆ ಈ ಜನ್ಮದಲ್ಲೇನೊ ಕಳೆದುಕೊಂಡುಬಿಡ್ತಿನಿ ಅಂತ ಅನಿಸತೊಡಗಿತ್ತು ಕಣೆ. ಆ ಶಾಸ್ತ್ರಿಗಳು ಕೊಟ್ಟ ಮಂತ್ರದ ಅಕ್ಷತೆಕಾಳನ್ನು ತಲೆ ಮೇಲೆ ಹಾಕ್ಕೊಬೇಕು ಅನ್ನೊದು ತಿಳಿಯದ ಶುದ್ದಾತಿಶುಧ್ದ ಬೆಪ್ಪು ಕಣೆ ನಾನು. ನಿನ್ನ ತಲೆಯಿಂದ ಜಾರಿಬಿದ್ದ ಅ ಅಕ್ಷತೆ ಕಾಳುಗಳನ್ನು ಎಷ್ಟು ಕಷ್ಟ ಪಟ್ಟು ಹೆಕ್ಕಿಕೊಂಡೆನೋ ಗೊತ್ತಿಲ್ಲಾ!

ನೀನಿದ್ದಷ್ಟು ಹೊತ್ತು ನಂಗೆನೋ ಒಂಥರಾ ಸಮಾಧಾನ, ಮನತೃಪ್ತಿ. ಈ ಹಿಂದೆ ಎಷ್ಟು ಭಾರಿ ಬಂದರೂ ಸಿಗದ ಮನಶಾಂತಿ ಆ ಕ್ಷಣಕ್ಕೆ ಆಗತೊಡಗಿತು ಚಿನ್ನು. ನೀ ಮಠದಿಂದ ಹೊರಬಂದು ಹೊರಗಿದ್ದ ತುಳಸಿಗೆ ಹಣೆಯೊತ್ತಿ ನಮಿಸಿದಾಗ ನಾನೂ ತುಳಸಿ ವಿವಾಹದ ದಿನದಂದೆ ಹುಟ್ಟಿದ್ದು ಅಂತ ಕೂಗಿ ಕೂಗಿ ಹೇಳಬೇಕಿನಿಸ್ತು.ಇನ್ನೊಮ್ಮೆ ತಿರುಗಿದವಳೆ ಕಣ್ಮುಚ್ಚಿ ನಮಿಸಿ, ನಿನ್ನ ಪಿಂಕ್ ಪಿಂಕು ಕೈನಿಯ ಕಡೆಗೆ ಬರಿಪಾದದಲ್ಲಿ ಹೆಜ್ಜೆಯನ್ನುಡುತ್ತಿದ್ದರೆ ನನಗಿಲ್ಲಿ
ಯವುದೋ ಶಕ್ತಿ ನನ್ನಿಂದ ದೂರವಾದ ಭಾವ, ಎನೋ ಕಳೆದುಹೋಗುತ್ತಿರುವ ಅನುಭವ..

ರಾಯರ ಮಠದ ಹುಡುಗಿಯೇ ನಿನಗಾಗಿ,ಇನ್ನು ಮುಂದೆ ಬರುವ ಪ್ರತಿ ಗುರುವಾರ ಕಾಯುತ್ತೇನೆ, ಭಾರವಾದ ಎದೆಯಲ್ಲಿ,ಖಾಲಿ ಮನದಲ್ಲಿ. ನೀ ಮತ್ತೆ ಬಂದೆ ಬರುತ್ತಿಯಾ ಎಂಬ ತುಂಬು ನೀರಿಕ್ಷೆಯಲ್ಲಿ! ನೀ ಬರ್ತಿಯಾ ಅಲ್ವಾ?

Wednesday, May 23, 2007

ಲವ್ ಪ್ರವರ



ನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ "ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.
ಪೀಠಿಕೇಯಾಗಿ" ನಿಮ್ಮ 'True love' ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ ಹೊತ್ತಿನಲ್ಲಿ 'Love' ವಿಷಯ ಆರಂಭಿಸಿದನೋ ನನ್ನ ಹಿಂದಿನ ಭೀಕರ ಅನುಭವಗಳಿಂದ ಇವತ್ತು ರಾತ್ರಿ ಜಾಗರಣೆ ಅಂತ ಖಾತ್ರಿಯಾಯ್ತು.ಪ್ರತ್ಯುತ್ತರವಾಗಿ ನಾನು "Work out ಆಗ್ಲಿಲ್ಲಾ "ಎಂದು ಚುಟುಕಾಗಿ ಹೇಳಿ ಇನ್ನು ನನ್ನ ಮಲಗಲು ಬಿಡು ಅಂತ ಸೂಕ್ಷ್ಮವಾಗಿ ಅರುಹಿದೆ.ಊಹುಂ! ಕೈಗೆ ಸಿಕ್ಕಿದ ಬಲಿಯನ್ನು ಹಂಗೆ ಬಿಟ್ಟಾನಯೇ ಧೀರ
,ಅದುವರೆಗೂ Love ಬಗ್ಗೆ ಮಾಡಿದ ತನ್ನೆಲ್ಲಾ ಕರಾಳ ಸಂಶೋಧನೆಗಳನ್ನು ಒಂದೋದಾಗಿ ಹೋರಗೆಡವತೋಡಗಿದ.ಆ ಬ್ರಹ್ಮಾಂಡ ಸಿದ್ದಾಂತಗಳನ್ನು ಸೋದಾಹರಣವಾಗಿ ವಿವರಿಸಿ, ಮದ್ಯೆ ತಿವಿದು ನನ್ನ ಎಚ್ಹರಿಸಿ ಇದುವರೆಗಿನ ತನ್ನೆಲ್ಲಾ ಹಳೆಯ ಸೇಡುಗಳನ್ನು ತೀರೀಸಿಕೊಂಡಾ.ಮಹಾಭಾರತದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ, ನನಗೆ "ಲವ್ವೋಪದೇಶ" ಮಾಡಿದ.
" ನೋಡ್ರಿ ಸಂತೋಷರಾ. ನಿಮ್ದು ಸಾಮಾನ್ಯ ಲವ್ ಅಲ್ಲಾ , ಅದು ’ಟ್ರೂ ಲವ್’,ಹಂಗೆಲ್ಲಾ ಮದ್ಯಕ್ಕೆ ನಿಲ್ಲಿಸಬಾರದು, ಪ್ರಯತ್ನ ಪಡೂತ್ತಾ ಇರಬೇಕು" ಅಂದ ಲವ್ ಗುರು.ಅದ್ಕೆ ನಾನು "ಅಲ್ವೋ! ಲವ್ ನಲ್ಲೂ ಆರ್ಡಿನರಿ ಲವ್ ಮತ್ತು ಟ್ರೂ ಲವ ಇರ್ತಾವೇನೋ? ಹ್ಹ ಹ್ಹ ಹ.." ಎಂದು ನನ್ನ ಪಾಂಡಿತ್ಯ ತೋರಲೆತ್ನಿಸಿದೆ.
’ಹುಲುಮಾನವ’ ಎಂಬಂತೆ ನನ್ನೆಡೆಗೆ ನೋಡಿ ಟ್ರೂ ಲವ್ , ಆರ್ಡಿನರಿ ಲವ್ ,ಮತ್ತು ಪ್ಯೂರ ಲವ್ ಬಗ್ಗೆ ತನ್ನ ಪುರಾಣವನ್ನು ಆರಂಭಿಸಿ, ಹುಡುಗಿಯರಲ್ಲೂ ಸಹ ಪ್ರಕಾರಗಳುಂಟು ಅಂತಾ ಸಾರಿ ನನ್ನ ತಬ್ಬಿಬ್ಬು ಮಾಡಿದ.ಅವನ ಬಾಯಿಂದ ಹೊರಬಂದ ಅನುಭವದ ಮಾಣಿಕ್ಯಗಳಿವು ನೋಡಿ.
"ಅಲ್ರಿ ಟ್ರೂ ಲವ್ ಅಂದ್ರೆ ಡೀಪ್ ಆಗಿ ,ಸಿನ್ಸಿಯರ್ ಆಗಿ ಲವ್ ಮಾಡೊದು, ಆರ್ಡಿನರಿ ಲವ್ ಅಂದ್ರ ಸುಮ್ನ ಲೈನ್ ಹೊಡೆಯೋದು,ಪ್ಯೂರ್ ಲವ್ ಅಂದ್ರೆ
ಪೂರ್ತಿ ಪ್ಯೂರ್, ಇವನಿಲ್ಲಿ,ಅವಳಲ್ಲಿ. ಆದರೂ ಫುಲ್ ಲವ್.ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಸ್ಟೈಲು.ನೋಡ್ರಿ ಹುಡುಗಿಯರಲ್ಲೂ ವೆರೈಟಿ ಇರ್ತಾವು, ಮೊದಲನೆಯದಾಗಿ ನಿಜವಾಗ್ಲೂ ಚಂದ ಇರ್ತಾರ ಮತ್ತು ಫುಲ್ ಡೀಸೇಂಟ್ ಇರ್ತಾರ, ಹಿಂತವರು ಟ್ರೂ ಲವ್ ಮಾಡೊಕೆ ಯೋಗ್ಯ. ಇವರು ಲೈನು ಕೊಡೋದಿರಲಿ, ತಿರುಗಿ ಸಹ ನೋಡಲ್ಲ.ಆದ್ರೂ ಪ್ರಯತ್ನ ಬಿಡಬಾರದು.ಮೊದಲನೆ ಸಲ ಪ್ರಪೋಸ್ ಮಾಡಿದ್ರೆ ಖಂಡಿತ ’ನೋ’ ಅಂತಾರೆ,ಕೆಲವು ಸಲ ನಸೀಬು ಗಾಂಡು ಇದ್ರ ಮಂಗಳಾರುತಿನೂ ತೆಗಿತಾರ, ಅದಕ್ಕೆಲ್ಲಾ ನೀವು ತಲಿ ಕೆಡಿಸ್ಕೊಬಾರದು, ಅಲ್ಲದೆ " ನನ್ನ ಎನಂತ ಅನ್ಕೊಂಡೀರಿ? ನಾನು ಅಂತಾ ಹುಡುಗಿ ಅಲ್ಲಾ" ಅಂತೆಲ್ಲಾ ಡೈಲಾಗ್ ಹೊಡಿತಾರೆ, ಅದಕ್ಕೆಲ್ಲಾ ನಾವು ಕ್ಯಾರೆ ಅನ್ನಬಾರದು ಮತ್ತು ಪ್ರಯತ್ನ ನಿಲ್ಲಿಸಬಾರದು.ಯಾರೇನೆ ಅಂದ್ರು ಕೇರ್ ಮಾಡದೆ ಇರೊದು ಭಾಳ ಮುಖ್ಯ.’ಹುಚ್ಚ’ ಪಿಚ್ಚರ್ ನೋಡಿರಲ್ರಿ ಅ ಟೈಪು ಅಂದ ನಮ್ ಲವ್ ಗುರು.ಮತ್ತೆ ಮುಂದುವರೆಸಿ ಹೇಳಿದ " ಎರಡನೆ ವೆರೈಟಿ ಹುಡುಗಿಯರು ದೇವರಾಣೆಗೂ ಚಂದ ಇರೋದಿಲ್ಲಾ,ಅದ್ರೆ ನಾವು ಅವರನ್ನು ಚಂದ ಅದೀರಿ ಅಂತ ನಂಬಿಸಬೇಕು. ಇಂತವರು ಲೈನ್ ಹೊಡಿಯೋಕೆ ಪರಫೆಕ್ಟ ನೋಡ್ರಿ.ಇವರನ್ನು ಬೀಳಿಸೊಕೆ ಸ್ವಲ್ಪ ಟೈಮು ಮತ್ತು ಇನವೆಸ್ಟಮೆಂಟ್ ಬೇಕು. ಭಾಳ ಏನು ಬ್ಯಾಡ್ರಿ, ಸುಮ್ನ ಅವರ ಹಿಂದ ಬೀಳಬೆಕು, ನೋಡಿ ಸ್ಮೈಲ್ ಕೊಡಬೇಕು, ಸುಮ್ ಸುಮ್ನ ಮತಾಡಿಸಬೇಕು,ನಿಮ್ಮ ಡ್ರೆಸ್ಸು ಸುಪರ್ ಅಂತ ಪುಸಲಾಯಿಸಬೇಕು ಇತ್ಯಾದಿ ಇತ್ಯಾದಿ.ಹಾಂ! ಆಮೇಲೆ ಸ್ವಲ್ಪ ಹುಡುಗಿ ದಾರಿಗೆ ಬಂದಿದಾಳೆ ಅಂದಮೇಲೆ ಮೊದಲು ಕಾಫಿಗೆ, ನಂತರ ಪಿಚ್ಚರಿಗೆ,ಲಾಲಭಾಗಿಗೆ ಕರಿಬೇಕು .ಒಂದು ವೇಳೆ ನೀವು ಲವ್ವು ಗಿವ್ವು ಅಂತೇನಾದ್ರು ಪ್ರಪೋಸ್ ಮಾಡಿದ್ರೆ ನಿಮ್ಮ್ ಖೇಲ್ ಖತಂ.ಅದೊಂತರ ಮುಚ್ಯುವಲ್ ಅಂಡರ್ ಸ್ಟಾಂಡಿಂಗ್.ಈ ವೆರೈಟಿ ಹುಡುಗಿಯರು ಭಾರಿ ಚಾಲೂ ಇರ್ತಾರ, ನೀವು ನೋಡಿ ಖರ್ಚು ಮಾಡಬೇಕು ಮತ್ತು ಎಷ್ಟು ಸಾದ್ಯನೊ ಅಷ್ಟು "ದುಡುಕೊಂಡು"ಬಿಡಬೇಕು.ಇದಕ್ಕ ಹಂಗ ಸುಮ್ನ ಲವ್ (?) ಅಂತರ ಕರೀರಿ ಅಥವಾ ಡವ್ ಅಂತರ ಕರೀರಿ. ಕೊನೆಯ ವೆರೈಟಿ ಬಗ್ಗೆ ಹೇಳುದಾ ಬ್ಯಾಡ, ಯಾಕಂದ್ರ " ನೋ ಯುಸ್", ಬರೀ ಸ್ಚ್ರಾಪ್ ಫಿಗರ್ ಗಳು, ನಿಮಗ ಅಷ್ಟ ’ಬರಗಾಲ’ ಅಂದ್ರ ಇವನ್ನೂ ಟ್ರೈ ಮಾಡಿ ನಿಮ್ಮ ಕರ್ಮ" ಅಂತೆಲ್ಲಾ ರಾತ್ರಿ ಮೂರರವರೆಗೂ ಸಾದ್ಯಂತ ಶೊಷಿಸಿ " ಇನ್ನು ಹೊತ್ತಾತು ಮಲಗ್ರಿ, ನಾಳೆ ಮುಂದ ಹೇಳ್ತಿನಿ", ಅಂತೆಳಿ ’ನಿನಗಿದೆ ಗ್ರಹಚಾರ ನಾಳೆ” ಎಂಬಂತೆ ನೋಡಿ, ಎದ್ದು ಉಚ್ಚೆ ಹೋಯ್ದು ಮಲಗೇ ಬಿಟ್ಟ.
ನಾಳೆ ಎನು ಕಾದಿದೆಯೊ ಅಂತ ಹಾಸಿಗೆಯಲ್ಲಿ ಉರುಳಾಡಿದ್ದೆ ಬಂತು ನಿದ್ದೆಯಂತೂ ದೇವರಾಣೆಗೂ ಬರಲಿಲ್ಲಾ..

Tuesday, May 8, 2007

ಪ್ರತಿದಿನದ ನರಕ




ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..
ನನ್ನ ಬೆಳಗು ಆರಂಭವಾಗುವದೇ ನನ್ನ ಆಜನ್ಮ ಶತ್ರು ಅಲಾರ್ಮ್ ಬಡಿದುಕೊಳ್ಳುವದರೊಂದಿಗೆ, ಆಗ್ಲೆ FM ನಲ್ಲಿ " ಸುಪ್ರಭಾತ ವಿಥ್ ರಚನಾ" ಅಂತ ಆಯಮ್ಮ ಬಡಿದುಕೊಳ್ಳುವದಕ್ಕೆ ಶುರು ಮಾಡಿರುತ್ತೆ.ಅವಳಿಗೆ ನನ್ನ ಸಂತಾಪಸೂಚಕ ನಿಟ್ಟುಸಿರುಗಳು.ಸ್ನಾನ,ಪೂಜೆ(?),ಮತ್ತೊಂದು ಅಂತ ಅನಿವಾರ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲೆ ಗಂಟೆ ೭ ರ ಆಸುಪಾಸಿನಲ್ಲಿರುತ್ತೆ.ಕೈಗೆ ಸಿಕ್ಕಿದ( ಅಂದ್ರೆ ಅಪರೂಪಕ್ಕೆ ತೊಳೆದ ಎಂದರ್ಥ)ಪ್ಯಾಂಟು ಸಿಕ್ಕಿಸಿಕೊಂಡೂ ,ಅದ್ಕ್ಕೆ ಸರಿಯಾಗುವ ಅಂಗಿ ಸಿಕ್ಕಿಸಿಕೊಂಡು " ನೀ ಇನ್ ಶರ್ಟ ಮಾಡಿದ್ರೆ ಚಂದ ಕಾಣೀಸ್ತಿಯ" ಅಂತ ಯಾರೊ ನನ್ನ ಕಷ್ಟ ನೋಡಲಾಗದೆ ಹೇಳಿದ್ದನ್ನ ಮನಸ್ಸಿಗೆ ತಂದುಕೊಂಡು, ಅಂಗಿಯನ್ನು ಒಳ ತುರುಕುತ್ತೆನೆ( ಚಂದ ಕಾಣಿಸ್ತಿಯಾ ಮತ್ತು ಚಂದ ಇದ್ದಿಯಾ ಎರಡು ಒಂದೇ ಅಂತ ಊಹಿಸತಕ್ಕದ್ದು :-) ).ಆಗ ಸುರ್ಯೋದಯವನ್ನು ನೋಡಿದರೆ ಪಾಪ ಅಂತ ನಂಬಿರುವ ಸುರ್ಯವಂಶದ ಕುಡಿಯಾದ ನನ್ನ ರೂಮ್ ಮೇಟ್ ಮನೋಜ " ಪಾಪಿ ಇನ್ನೂ ಹೋಗಿಲ್ವಾ?" ಎಂಬಂತೆ ನೋಡಿ ಮುಸುಕೆಳೆದುಕೊಳ್ಳುತ್ತೆ ಪ್ರಾಣಿ. ನಾ ಹೇಳುವ ’ಬೈ’ಗೆ ಮುಸುಕಿನಿಂದಲೆ ’ಕಳಚಿಕೋ ಮಾರಾಯ’ ಎಂಬಂತೆ ’ಬೈ’ ಎಂದು "ಪೇಪರು ಒಳಗೆ ಎಸೀರೀ" ಅಂತ ಮನವಿ ಮಾಡ್ಕೊಳ್ಳುತ್ತೆ ಸೂರ್ಯವಂಶಿ.
ಏಳುತ್ತಾ, ಬಿಳುತ್ತಾ ಸೋಮಾರಿ ಬೆಂಗಳೂರು ಹೆಂಗಸರು ರಾತ್ರಿಯೇ ಹಾಕಿದ ರಂಗೋಲಿಗಳನ್ನು ದಾಟುತ್ತ,ಇನ್ನು ಹಾಳು ಮುಖದಲ್ಲೇ ಕಸ ಹೊಡೆಯುತ್ತಿರುವ ಆಂಟಿಯರನ್ನು ನೊಡುತ್ತ,ದಾರಿಯಲ್ಲಿ ಸಿಗುವ "ಸೊಪ್ಪು ಸೊಪ್ಪು" ಅನ್ನುವವನನ್ನು ಇದಿರುಗೊಳ್ಳುತ್ತ,ಪೇಪರಿನ ಹುಡುಗನೆಡೆಗೆ ಪರಿಚಯದ ನಗೆ ಬೀರುತ್ತಾ ಕಂಪನಿ ಬಸ್ ಸ್ಟಾಪಿನತ್ತ ದೌಡಾಯಿಸುತ್ತೆನೆ.ಅಲ್ಲಿ ಮತ್ತದೇ ಬಸ್ ಸ್ಟಾಪು, ಇನ್ನೂ ತೂಕಡಿಸುತ್ತಾ ನನಗಾಗಿ ಕಾದಿದೆಯೇನೋ ಎಂಬಂತೆ ಭಾಸವಾಗುತ್ತೆ. ಯಾವಾಗಲೂ ನನಗಿಂತ ಮುಂಚೆ ಬಂದಿರುವ ಇಬ್ಬರು ಅಂಟಿಯರನ್ನು ಸೇರಿಕೊಳ್ಳುತ್ತೆನೆ.ಆಗ ಅವಸರದಿಂದ ಬರುತ್ತಾರೆ ತಮ್ಮೆಡೆಗಿನ ನಿಗೂಡತೆಯನ್ನು,ಕೌತುಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಸಾಗಿರುವ ಹುಡುಗಿಯರು( ಅವಳಲ್ಲಿ ಒಬ್ಬಳನ್ನು ನಾನು ಕೆಲದಿನಗಳು True love ಮಾಡಿದ್ದೆ ಮತ್ತು ಇನ್ನು ಗಿಟ್ಟುವದಿಲ್ಲಾ :-)ಅಂತ ಖಚಿತವಾದ ಮೇಲೆಯೇ ಆ ಯತ್ನವನ್ನು ನಿಲ್ಲಿಸಿದ್ದೇನೆ(?)), ನಮ್ಮೊಂದಿಗೆ ಘನಗಂಭೀರ ಇನ್ನೊಬ್ಬ ಇರುತ್ತಾನೆ.ನಮ್ಮೆದುರು ಹಾದು ಹೋಗುವ ಬಸ್ಸುಗಳಲ್ಲಿ ನಮ್ಮಂತೆಯೆ ಬೇರೆ ನಾಮಧೇಯದ ಕಂಪನಿಗೆ ಮಣ್ಣು ಹೊರುತ್ತಿರುವ ಇನ್ನೊಂದಿಷ್ಟು "ಬಿಳಿಕಾಲರ್ ಕಾರ್ಮಿಕರು" ಹುಸಿ ಜಂಭದಿಂದ ಸಾಗುತ್ತಾರೆ. ನನ್ನ ವಾಚಿನ ಮುಳ್ಳು ಸರಿಯಾಗಿ ೭-೧೦ ನ್ನು ದಾಟುತ್ತಿದ್ದಂತೆ ಹಣೆಗೆ 'National' ಅಂತ ಬರೆಸಿಕೊಂಡ, ಇಕ್ಕೆಲಗಳಲ್ಲೂ ಮಾಸಿದ ಸಂತೂರ್ ಸೋಪಿನ ಜಾಹಿರಾತುಗಳನ್ನು ಅಂಟಿಸಿಕೊಂಡ ಸಂಪೂರ್ಣ ನೆರೆತ ಗಡ್ಡದ ಸಾಬಿಯ ಕಪ್ಪುಸುಂದರಿ ಬಸ್ಸು ಬಂದು ನಿಲ್ಲುತ್ತೆ, ಹುಡುಗಿಯರಿಬ್ಬರು ಹೋಗಿ ಯಾರಿಗೂ ಅವರ ದರ್ಶನಬಾಗ್ಯ ಲಭಿಸದಂತೆ ಮೊದಲ ಸೀಟ್ನಲ್ಲೆ ಹೋಗಿ ಕುಳಿತುಕೊಳ್ಳುತ್ತಾರೆ,ಆಂಟಿಯರ ಜಾಗ ಮಾತ್ರ ಬಸ್ಸಿನ ದ್ವಾರದ ಹತ್ತಿರದ ಸೀಟು,ದ್ವಾರಕ್ಕೆ ಅಭಿಮುಖವಾಗಿ ನಮ್ಮದೆ ಕಾಲೇಜಿನ ಪುಟ್ಟದೇಹದ ,ನೀಲಿ ಜೀನ್ಸಿನ ಬಿಹಾರಿ ಕುಳಿತಿರುತ್ತಾನೆ, ನಾನು ಮಾತ್ರ ಗಾಳಿ ತಾಗದ, ಒಬ್ಬನೆ ಕೂಡಬಹುದಾದ ಸೀಟಿಗಾಗಿ ಹುಡುಕಿ ಕುಳಿತುಕೊಳ್ಳುತ್ತೇನೆ. ಬಸ್ಸು ಆಶ್ರಮ ಸರ್ಕಲ್ಲಿನಲ್ಲಿ ತಿರುವಿ ಗಾಂಧಿಬಜಾರಿನ ಎದೆಯ ಮದ್ಯೆ ಹಾದು ಹೋಗುತ್ತಿದ್ದರೆ ಆಗಷ್ಟೆ ಕುಯ್ದ ಹೂಗಳ ದಂಡೆಗಳ ಘಮ ಮೂಗಿಗೆ ಅಡರುತ್ತೆ,Fab Mallನ ಮುಂದೆ ಕುಳಿತ ಕೆಂಪು ಟೀ ಶರ್ಟಿನ ಸೇಲ್ಸ ಹುಡುಗಿಯರ ಮೂಖದಲ್ಲಿ ಎಂದಿನ ಭವಿಷ್ಯದ ಚಿಂತೆಯ ಗೆರೆಗಳು, ಹಗಲೆಲ್ಲ ಕಂಡವರಿಂದ ಮೈತಡವಿಸಿಕೊಂಡ ಅಂಕಿತ ಪುಸ್ತಕ ಮಳಿಗೆಯಲ್ಲಿನ ಪುಸ್ತಕಗಳು ಬೆಚ್ಚಗೆ ಕುಳಿತಿರುತ್ತವೆ.ಮುಂದಿನ ಸ್ಟಾಪಿನಲ್ಲಿ ನಮ್ಮಂತವೆ ಹೊಸ ಮಿಕಗಳು ಬಸ್ಸೆರುತ್ತವೆ, ಆದ್ರೆ ಈ ಮಿಕಗಳದ್ದು ಸ್ವಲ್ಪ ಸದ್ದು ಜಾಸ್ತಿ.ಕೊನೆಗೆ ಹತ್ತುವ ಚೂಡಿದಾರದ ಆಂಟಿಗೆ ಮಾತ್ರ ಹಿಂದಿನ ಸೀಟೆ ಆಗಬೇಕು.
ಎಲ್ಲಾ ಮಿಕಗಳು ಹತ್ತಿದ ಮೇಲೆ ಬಸ್ಸು ತುಂಬಿದ ಬಸುರಿಯಂತೆ ಚಲಿಸಲಾರಂಭಿಸುತ್ತೆ,ಜಯನಗರದ ಉದ್ಯಾನ ಹಾಯುವಾಗ ಕಾಣುವದೆ ಒಂದು ಪ್ರತಿದಿನದ ವಿಚಿತ್ರ ಜಾತ್ರೆ.ವಿವಿಧ ಸೈಜಿನ ಹೊಟ್ಟೆಯ ಅಂಕಲ್ಲುಗಳು ಮತ್ತು ಡ್ರಮ್ಮಿನಾಕಾರದ ಆಂಟಿಗಳನ್ನು ನೋಡುವದೇ ಒಂದು ವಿಸ್ಮಯ.ಮಹಾತ್ಕಾರ್ಯವನ್ನು ಮಡುತ್ತಿರುವೆವೇನೊ ಎಂಬ ಗತ್ತಿನಲ್ಲಿ ಕೈಕಾಲುಗಳನ್ನು ವಿಚಿತ್ರವಾಗಿ ಆಡಿಸುತ್ತಾ , ಎದೆಯುಬ್ಬಿಸಿ ಸಾಗುತ್ತಿರುವದನ್ನು ನೋಡುವುದೇ ಒಂದು ಪರಮಾನಂದ.ಸೊಂಟದ ಮೇಲೆ ಬಿದ್ದ ನೆರಿಗೆ ನೋಡಿ ಹೌಹಾರಿ ಫಿಗರ್ ಮೆಂಟೈನ್ ಮಾಡಲು ತನ್ನ ಪೆಟ್ ನೊಂದಿಗೆ ಬಂದ ಹಾಟ್ ಹಾಟ್ ಹುಡುಗಿ, ಆಯುಷ್ಯದ ಪೂರ್ವಾರ್ಧವನ್ನು ತಿನ್ನುವದರಲ್ಲೆ ಕಳೆದು, ಉಳಿದಿದ್ದನ್ನು ತಿಂದಿದನ್ನು ಜೀರ್ಣಿಸಲು ಪರದಾಡುವ ರಿಟೈರ್ಡ ಆಫೀಸರ್,ನಿನ್ನೆ ಕೊಂಡ ರೀಬಾಕ್ ಶೂಗಳ ಗತ್ತಿನಲ್ಲಿ ಮೈಯಲ್ಲಿ ನೀರಿಳಿಯುತ್ತಿದ್ದರೂ ಗಮನಿಸದೆ ಹುರುಪಿನಲ್ಲಿ ಓಡುತ್ತಿರುವ ಹೊಸಬ,೪೫ರ ಕಿರಿಕಿಗಳನ್ನು ತಾಳಿಕೊಳ್ಳಲೋ ಎಂಬಂತೆ ಬಿರಬಿರನೆ ನಡೆಯುತ್ತಿರುವ ಮದ್ಯವಯಸ್ಕ ಆಂಟಿ,ಕೊನೆಗೆ ಮೈತುಂಬ ಸ್ವೆಟರ್ ಹೊದ್ದು, ತಲೆಗೆ ಸ್ಕಾರ್ಪ್ ಸುತ್ತಿದ ಹಣ್ಣು ಹಣ್ಣು ದಂಪತಿಗಳು ಜೀವನದ ಉಳಿದ ಹೆಜ್ಜೆಗಳನ್ನೆಣಿಸುತ್ತಿದ್ದಾರೆನೋ ಎಂಬಂತೆ ನಿಧಾನಕ್ಕೆ ಸಾಗುತ್ತಿದ್ದಾರೆ,ಅಜ್ಜಿಗೆ ಬೆನ್ನು ನೋವಂತೆ, ಅಜ್ಜಗೆ ಹಿಡಿದೊಕೊಂಡ ಮೊಣಕಾಲುಗಳ ಚಿಂತೆ.ಪಾರ್ಕಿನ ಇನ್ನೊಂದು ಮೂಲೆಯಲ್ಲಿ ಕ್ರಿಕೆಟ್ಟು, ಬ್ಯಾಟ್ಮಿಟನ ಆಡುವ ಪಡ್ಡೆಗಳ ಇನ್ನೊಂದು ಗುಂಪು, ಆಟವೂ ಆಯ್ತು, ಮತ್ತೊಂದು ಅಯ್ತು :-) ಅನ್ನೊದು ಇವರ ಲೆಕ್ಕ.ಮುಂದೆ ಹಾದು ಹೊಗುವವರ ಮೇಲೆ ಇವರ ಆಟದ ಮೇಲಿನ ಗಮನ ನಿರ್ಧರಿತವಾಗುತ್ತೆ.ಇನ್ನೊಂದು ಮೂಲೆಯಲ್ಲಿ "ಹೀ ಹೀ ಹೀ" ಎನ್ನುತ್ತ ಬಾರದ ನಗುವಿನಲ್ಲೂ ಹಲ್ಲು ಕಿರಿಯುತ್ತಾ, ಕೈ ಕಾಲು ಬಡಿಯುವ ಲಾಫಿಂಗ್ ಕ್ಲಬ್ ನ ಸದಸ್ಯರು.ಗೇಟಿನ ಹೊರಗೆ ಇವರ ಬರುವಿಕೆಗೆ ಕಾದು ಕುಳಿತ ಇವರ ಟೂ ವೀಲ್ಹರ್ ಗಳು ಮತ್ತು ವಿವಿಧ ಕಾರುಗಳು, ಜೊತೆಗೆ ಗೇಣು ಹೊಟ್ಟೆಗಾಗಿ ಬೆಳ್ಳಂಬೆಳಗ್ಗೆ ಗಾಡಿಯಲ್ಲಿ ತರಕಾರಿ,ಹಣ್ಣು, ಮಾರುವವರ ನೀರೀಕ್ಷೆಭರಿತ ಕಂಗಳು.ಪಾರ್ಕಿನೊಳಗಡೆ "ಹೊಟ್ಟೆ ಕರಗಿಸುವದರ" ಚಿಂತೆಯಾದರೆ, ಹೊರಗಿನವರದು "ಹೊಟ್ಟೆ ತುಂಬಿಸುವ" ಚಿಂತೆ.ಇದೇ ಅಲ್ಲವೇ ಬದುಕಿನ "Irony".
ಹಾಂ ಉದ್ಯಾನದ ತುದಿಯಲ್ಲೇ ನಿಂತಿರುತ್ತಾನೆ ಒಬ್ಬ ಸಾಬಿ, ಅವನ ಕೈಯಲ್ಲಿ ಮಾತ್ರ ಯಾತ್ರೀ ಹೊರಟು ನಿಂತವರ ಕೈಯಲ್ಲಿರುವಶ್ಟು ಚೀಲಗಳು ಮತ್ತು ಒಂದು ದೊಡ್ಡ ಊಟದ ಡಬ್ಬ, ಅಲ್ಲಿ ಸ್ಟಾಪ್ ಇದೆಯೋ ಅಥವಾ ನಮ್ಮ ಡ್ರೈವರನ ಸ್ವಜಾತಿಪ್ರೆಮವೋ ಅಂತ ಗೊತ್ತಿಲ್ಲ, ಬಸ್ಸಂತು ನಿಲ್ಲುತ್ತೆ. ನನ್ನ ಕಣ್ಣುಗಳು ಆಗ್ಲೆ ಎಳೆಯತೊಡಗುತ್ತವೆ, ಅದರೆ ಸಾಬಿ ಡ್ರೈವರು ಮಾತ್ರ ಹಾರ್ನ ಹೊಡೆಯುವದು ನಿಲ್ಲಿಸುವದಿಲ್ಲಾ, ಅಂತೂ ಇಂತೂ ಜೋಂಪು ಹತ್ತುವ ವೇಳೆಗೆ ಬಸ್ಸು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಮ್ಮಂತವೆ ನೂರಾರು ಬಸ್ಸುಗಳಲ್ಲಿ ಒಂದಾಗಿಬಿಟ್ಟಿರುತ್ತೆ.
ಈಗ ಮತ್ತೆ ಬಸ್ಸಿನಲ್ಲಿ ಗಡಿಬಿಡಿ ಶುರು, ಮಲಗಿದ ಒಬ್ಬೊಬ್ಬರೇ ಎಚ್ಚರವಾಗತೊಡಗುತ್ತಾರೆ, ಕೆಲವರು ಕಣ್ಣು ತಿಕ್ಕಿದರೆ, ಇನ್ನೂ ಕೆಲವರು "ಆಗ್ಲೆ ಬಂತಾ ಆಫೀಸು?" ಎಂಬಂತೆ ಕಿಟಕಿಯೆಡೆಗೆ ಕಣ್ಣು ಹಾಯಿಸುತ್ತಾರ್.ಹುಡುಗಿಯರಿಗೆ ತಮ್ಮ ಪಾಡಿಗೆ ತಾವಿದ್ದ ಕೂದಲುಗಳನ್ನು ಎಡಗೈಯಿಂದ ಹಿಡಿದು ಬಲಗೈಯಿಂದ ಕ್ಲಿಪ್ಪೋ,ರಬ್ಬರ್ ಬ್ಯಾಂಡೋ ಸಿಕ್ಕಿಸುವ ಆತುರ.ಮತ್ತೆ ಐಡಿ ಕಾರ್ಡ ಹುಡುಕಿ ಕೊರಳಿಗೆ ನೇತು ಹಾಕಿಕೊಳ್ಳುವ ಕಿರಿಕಿರಿ ಬೇರೆ.ಆಫೀಸು ಬಂತು ಎನ್ನುವದಕ್ಕೆ ಪುರಾವೆ ಎಂಬಂತೆ ಹಾರ್ನುಗಳ ಸದ್ದು ತಾರಕಕ್ಕೆರುತ್ತದೆ, ಸೆಕ್ಯುರಿಟಿಗಳ " ಪೀ ಪೀ ಪೀ" ಸದ್ದು ಅದರಲ್ಲಿ ಲೀನವಾಗುತ್ತೆ.
ಕೆಟ್ಟಮನಸ್ಸಿನಿಂದ ಬಸ್ಸಿಳಿದ ನಾನು ಭಾರವಾದ ಒಂದೊಂದು ಹೆಜ್ಜೆಯನ್ನಿಕ್ಕಿ ನನ್ನೊಂತೆಯೇ ಇರುವ ನೂರಾರು,ಸಾವಿರಾರು Resourceಗಳ ಮದ್ಯೆ ಒಬ್ಬನಾಗುತ್ತೇನೆ. ನನ್ನ Identity ಹೆಸರಿನಿಂದ Extn No ಮತ್ತು Emp IDಗೆ ಬದಲಾಗುತ್ತೆ.ಯಂತ್ರದ ಮುಂದಿನ ಇನ್ನೊಂದು ಜೀವಂತ ಯಂತ್ರವಾಗಲು ನಾನು ಅಣಿಗೊಳ್ಳುತ್ತೇನೆ.ಎದೆಯ ಮೂಲೆಯಲ್ಲೋ ಏನೋ ಕಳೆದುಕೊಂಡಂತಹ ಭಾವ, ಮನದ ಮೂಲೆಯಲ್ಲಿ ಎಂತದೋ ನೋವಿನ ಸೆಳವು ಮಿಂಚಿ ಮರೆಯಾಗುತ್ತೆ... ಆಗ ನಾನು ನಾನಾಗಿರುವದಿಲ್ಲಾ!!!!!

Wednesday, April 18, 2007

ಒಂಚೂರು ನನ್ನ ಬಗ್ಗೆ,



ನಾನು ಸಂತೋಷಕುಮಾರ ಪಾಟೀಲ ಅಂತ, ಬರೀ ಪಾಟೀಲ ಅಂದ್ರೂ ಸಾಕು. Engineering ಪದವಿ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಯಿತು.ಕಲಿತದ್ದು(?) ಬಿ.ಎಂ.ಎಸ್ ತಾಂತ್ರಿಕ ವಿದ್ಯಾಲಯದಲ್ಲಿ.ಚಿಕ್ಕವನಿದ್ದಾಗ "ಭಾಳಾ ಶಾಣ್ಯಾ" ಎಂಬ ಆರೋಪಗಳಿದ್ದವು,ಅದರೆ ಈಗಂತೂ ಆರೋಪಮುಕ್ತ. ಹೊಟ್ಟೆಪಾಡಿಗಾಗಿ Software Engineer ಎಂಬ ಸುಂದರ ಹೆಸರಿನ ಚಾಕರಿಕೆ ಮಾಡಿಕೊಂಡಿದ್ದೀನಿ.ಬದುಕಲ್ಲಿ ದೊಡ್ಡ ಮಹತ್ವಾಕಾಂಕ್ಷೆಗಳಿಲ್ಲಾ, ಹೊಸ ಸಾದ್ಯತೆಗಳನ್ನು ಅನ್ವೇಷಿಸುವದು ಮತ್ತು ಹೊಸ riskಗಳನ್ನು chase ಮಾಡುವದು ನನ್ನ passion.
ನಾನು ತುಂಬಾ ಅಹಂಕಾರಿ ಎಂಬುದು ನನ್ನ ಬಗೆಗಿನ ಕಂಪ್ಲೈಂಟ, ಮತ್ತು ನಾನು ತುಂಬ ಸ್ವಾಭಿಮಾನಿ ಎಂಬುದು ನನ್ನ ಬಗೆಗಿನ ಕಾಂಪ್ಲಿಮೆಂಟು(ತುಂಬಾ confusing ಅಲ್ವಾ). ಓದುವದನ್ನು ಹೊರತುಪಡಿಸಿ ಬೇರೆ ಯಾವುದೇ ಹವ್ಯಾಸಗಳಿಲ್ಲ. ಭೈರಪ್ಪಾ ಅಂದ್ರೆ ಪಂಚಪ್ರಾಣ, ಬೆಳಗೆರೆಯ ಶೈಲಿ ಇಷ್ಟ. ಜಯಂತರು ಚಿಕ್ಕ ಸಂಗತಿಗಳನ್ನೂ ದಾಖಲಿಸುವ ಪರಿ ಇಷ್ಟ. ತೇಜಸ್ವೀಯವರ ಇಡೀ ಜಗತ್ತನ್ನು ಬೆರಗುಗಣ್ಣೀನಿಂದ ನೋಡುವ ಮಗು ಮನಸ್ಸು ಇಷ್ಟ,ಇಷ್ಟ.
ಕೊನೆಯದಾಗಿ, ಬರವಣಿಗೆ ಎಂಬುದು ನನ್ನ passion ಎಂಬುದು ನಿಜವಾದರೂ, ಅದು identityಗಾಗಿ ಮತ್ತು ಒಂದು ಚಿಕ್ಕ ಇಮೇಜಗಾಗಿನ ನನ್ನ ಅನಿವಾರ್ಯ ಚಡಪಡಿಕೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.ಸಾಫ್ಟವೇರ ಶರಧಿಯಲ್ಲಿ ಕಳೆದುಹೋಗುತ್ತಿರುವ ನನ್ನತನವನ್ನು ಹುಡುಕುವ ಅರಣ್ಯರೋಧನ,ಬರೀ Human Resource ಆಗೀ ಉಳಿಯಲು ಒಲ್ಲದ ಮನಸ್ಸು ಹೂಡುತ್ತಿರುವ ಹಟದ ಫಲವೇ ಈ ಬ್ಲಾಗು..
ಹಲ್ಲು ಉಜ್ಜಿದ್ದು,ಚಡ್ಡಿ ಹಾಕ್ಕೊಂಡಿದ್ದು,ಗೆಳೆಯರೊಂದಿಗೆ ಮಾತಾಡಿದ್ದು,ನಕ್ಕಿದ್ದು,ಅತ್ತಿದ್ದು,ಇತ್ಯಾದಿ ವೈಯಕ್ತಿಕ ವಿವರಗಳನ್ನು ಬರೆದು ಕಿರಿಕಿರಿ ಮಾಡುವದಿಲ್ಲಾ ಅಂತ promise ಮಾಡುತ್ತೆನೆ.ನಾ ಬರೆದಿದ್ದು ನಿಮಗೆ ಇಷ್ಟವಾದರೆ, ನಾಲ್ಕು ಸಾಲುಗಳನ್ನು ಕುಟ್ಟಿ ಉತ್ತರಿಸುವ ಮೂಲಕ ಬೆನ್ನು ತಟ್ಟಿ, ಕಷ್ಟ ಎನಿಸಿದರೆ ನನ್ನ ಕಿವಿ ಹಿಂಡಿ (ಹುಡುಗಿಯರಾದರೆ ಕೆನ್ನೆ ಗಿಂಡಿ :-)) ಗದರಿಸುವ ಅತ್ಮಿಯತೆಯಂತೂ ನಿಮಗಿದೆ.
ಆಗಾಗ ಬಂದು ಹೋಗುತ್ತಿರಿ....
ಇತಿ ನಿಮ್ಮ ಚಿರವಿರಹಿ,
ಸಂತೋಷಕುಮಾರ ಪಾಟೀಲ